ಕೊಪ್ಪಳದಲ್ಲಿ ಮದ್ಯ ಖರೀದಿಗೆ ಮುಗಿಬಿದ್ದ ಜನತೆ..!
Team Udayavani, Apr 27, 2021, 6:46 PM IST
ಕೊಪ್ಪಳ: ರಾಜ್ಯ ಸರ್ಕಾರವು ಮತ್ತೆ 14 ದಿನಗಳ ಕಾಲ ಸಂಪೂರ್ಣ ಕರ್ಫ್ಯೂ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಸೋಮವಾರ ನಗರದ ಮದ್ಯಪ್ರಿಯರು ಮುಗಿಬಿದ್ದು ಮದ್ಯ ಖರೀದಿಸಿದರು.
ಕೋವಿಡ್-19 ಉಲ್ಬಣದ ಹಿನ್ನೆಲೆಯಲ್ಲಿ ಸರ್ಕಾರ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಇಷ್ಟಾದರೂ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ವಾರಾಂತ್ಯದ ಕರ್ಫ್ಯೂಗೆ ಜನರಿಂದ ಉತ್ತಮ ಸ್ಪಂದನೆ ದೊರೆತ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಸಚಿವ ಸಂಪುಟದ ಸಭೆ ನಡೆಸಿ, ಹಲವು ಕ್ರಮಗಳನ್ನು ಕೈಗೊಳ್ಳುವ ಮೂಲಕ ಮತ್ತೆ 14 ದಿನಗಳ ಕಾಲ ಸಂಪೂರ್ಣ ಕರ್ಫ್ಯೂ ಘೋಷಣೆ ಮಾಡಿದ್ದನ್ನು ಗಮನಿಸಿದ ಮದ್ಯ ಪ್ರಿಯರು ಎದ್ದು ಬಿದ್ದು 10ರಿಂದ 15 ದಿನಗಳಿಗೆ ಸಾಕಾಗುವಷ್ಟು ಮದ್ಯ ಖರೀದಿ ಮಾಡಿದರು.
ಒಬ್ಬರಿಗೆ ನಿಗದಿಯಷ್ಟೇ ಮದ್ಯ ಕೊಡುವುದಾಗಿ ಮದ್ಯದಂಗಡಿ ಅವರು ಹೇಳಿದ್ದರಿಂದ ತಮ್ಮ ಸ್ನೇಹಿತರನ್ನೂ ಜೊತೆಗೆ ಕರೆದುಕೊಂಡು ಹೋಗಿ ಖರೀದಿಸಿದರು. ಸರ್ಕಾರ ಕರ್ಫ್ಯೂನ್ನು ಎಷ್ಟು ದಿನಗಳ ಕಾಲ ಮತ್ತೆ ಮುಂದುವರಿಸುವುದೋ ಗೊತ್ತಾಗಲ್ಲ. ಆಗ ಮದ್ಯಕ್ಕಾಗಿ ನಾವು ಪರದಾಡುವ ಬದಲು ಈಗಲೇ ನಮಗೆ ಬೇಕಾದಷ್ಟು ಖರೀದಿ ಮಾಡಿ ಮನೆಯಲ್ಲಿ ಇಟ್ಟುಕೊಳ್ಳುತ್ತಿದ್ದೇವೆ. ನಮಗೆ ಬೇಕಾದಾಗ ಅದನ್ನು ಸೇವನೆ ಮಾಡುತ್ತೇವೆ ಎಂದು ಹಾಸ್ಯದಿಂದಲೇ ಹೇಳಿದರು.