ಶಿಕ್ಷಕರ ಕಾರ್ಯ ವೈಖರಿಗೆ ಶಾಲೆ ಬಂದ್
•ಇಂಗ್ಲಿಷ್ ಶಿಕ್ಷಕರು ಶಾಲೆಗೆ ಬರುತ್ತಿಲ್ಲ•ಶಾಲೆಗೆ ಬೀಗ ಹಾಕಿ ಪ್ರತಿಭಟಿಸಿದ ಜನತೆ
Team Udayavani, Jun 12, 2019, 11:25 AM IST
ಕೊಪ್ಪಳ: ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಶಾಲಾ ವಿದ್ಯಾರ್ಥಿಗಳು ಆವರಣದಲ್ಲೇ ಕುಳಿತರು.
ಕೊಪ್ಪಳ: ತಾಲೂಕಿನ ಚಿಕ್ಕ ಸಿಂದೋಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕರು ಕಳೆದ ಮೂರು ವರ್ಷದಿಂದ ಶಾಲೆಗೆ ಸರಿಯಾಗಿ ಬರುತ್ತಿಲ್ಲ. ಬರಿ ಅನ್ಯ ಸ್ಥಳಗಳಿಗೆ ನಿಯೋಜನೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಮಂಗಳವಾರ ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಗ್ರಾಮದ ಸರ್ಕಾರಿ ಶಾಲೆಯಲ್ಲಿ 250ಕ್ಕೂ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ವಿಷಯ ಬೋಧನೆ ಸರಿಯಾಗಿ ದೊರೆಯುತ್ತಿಲ್ಲ. ಈ ಶಾಲೆಗೆ ಆಂಗ್ಲ ಶಿಕ್ಷಕರಾಗಿ ಜ್ಯೋತಿ ಎನ್ನುವರು ನಿಯೋಜನೆಗೊಂಡಿದ್ದಾರೆ. ಆದರೆ, ಅವರು ಪದೆ ಪದೇ ರಜೆ ಮೇಲೆ ತೆರಳುವುದು, ಅನಾರೋಗ್ಯ ಕಾರಣ ನೀಡಿ ರಜೆ ಹಾಕುವುದು, ಈ ಶಾಲೆಯಿಂದ ಅನ್ಯ ಕಡೆ ನಿಯೋಜನೆ ಮಾಡಿಸಿಕೊಳ್ಳುತ್ತಿರುವುದರಿಂದ ಇಲ್ಲಿನ ಹಲವು ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ದೊಡ್ಡ ಹೊಡೆತ ಬೀಳುತ್ತಿದೆ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದರು.
ಶಾಲೆಯ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಬೋಧಿಸುವರರು ಇಲ್ಲದಂತಾಗಿದೆ. ವಿಷಯ ಶಿಕ್ಷಕರು ಸರಿಯಾಗಿ ಬೋಧಿಸಿದ ಹಿನ್ನೆಲೆಯಲ್ಲಿ 8ನೇ ತರಗತಿಯಿಂದ ಹಿರೇ ಸಿಂದೋಗಿ ಗ್ರಾಮದ ಪ್ರೌಢ ಶಾಲೆಗೆ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳು 9ನೇ ತರಗತಿ ಇಂಗ್ಲಿಷ್ ವಿಷಯದಲ್ಲಿ ಫೇಲ್ ಆಗುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗುತ್ತಿದೆ ಎಂದು ದೂರಿದರು.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಶಾಲೆಯ ವ್ಯವಸ್ಥೆ ಸರಿಪಡಿಸಬೇಕು. ಮೇಲಧಿಕಾರಿಗಳು ಶಾಲೆಗೆ ಆಗಮಿಸಿ ಇಲ್ಲಿನ ಸಮಸ್ಯೆ ಬಗೆ ಹರಿಸುವ ವರೆಗೂ ನಾವು ಶಾಲೆ ಬೀಗ ತೆರೆಯುವುದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಎಲ್ಲ ವಿದ್ಯಾರ್ಥಿಗಳು ಶಾಲಾ ಆವರಣದಲ್ಲೇ ಕುಳಿತಿದ್ದರು.
ಸಿಆರ್ಸಿಯಿಂದ ವಾಸ್ತವದ ವರದಿ: ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ಮಾಹಿತಿ ತಿಳಿದ ಸಿಆರ್ಸಿ ಅವರು ಕೂಡಲೇ ಶಾಲೆಗೆ ಭೇಟಿ ನೀಡಿ ಅಲ್ಲಿನ ವಾಸ್ತವ ಸ್ಥಿತಿಯ ವರದಿ ಪಡೆದಿದ್ದಾರೆ. ಮೇಲಧಿಕಾರಿಗೆ ಇಲ್ಲಿನ ಸಮಸ್ಯೆ ಕುರಿತು ತಿಳಿಸುವುದಾಗಿ ಅವರು ಗ್ರಾಮಸ್ಥರಿಗೆ ಭರವಸೆ ಕೊಟ್ಟಿದ್ದಾರೆ. ಆದರೆ ಗ್ರಾಮಸ್ಥರು ಅದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಮೇಲಧಿಕಾರಿಗಳೇ ಬಂದು ಇಲ್ಲಿನ ಸಮಸ್ಯೆ ಬಗೆ ಹರಿಸಬೇಕು ಎಂದು ಪಟ್ಟು ಹಿಡಿದು ಶಾಲೆಗೆ ಬೀಗ ಹಾಕಿದ್ದಾರೆ.