ಶಾಲೆಯತ್ತ ಹೆಜ್ಜೆ ಹಾಕಿದ ಮಕ್ಕಳು
ತಳಿರು-ತೋರಣಗಳಿಂದ ಕಂಗೊಳಿಸಿದ ಶಾಲೆ•ಮಕ್ಕಳಿಗೆ ಸಿಹಿ ನೀಡಿ ಸ್ವಾಗತಿಸಿದ ಶಿಕ್ಷಕರು
Team Udayavani, May 30, 2019, 11:27 AM IST
ಯಲಬುರ್ಗಾ: ಸಿದ್ಧರಾಮೇಶ್ವರ ನಗರದ ಸರ್ಕಾರಿ ಶಾಲೆಯಲ್ಲಿ ಬುಧವಾರ ನಡೆದ ಶಾಲಾ ಪ್ರಾರಂಭೋತ್ಸವದಲ್ಲಿ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು.
ಕೊಪ್ಪಳ: ಜಿಲ್ಲಾದ್ಯಂತ ಸರ್ಕಾರಿ ಶಾಲೆಗಳ ಆರಂಭೋತ್ಸವ ಬುಧವಾರ ಸಂಭ್ರಮದಿಂದ ಜರುಗಿತು. ಬೆಳಗ್ಗೆ ಶಾಲಾ ಆವರಣ ಸ್ವಚ್ಛಗೊಳಿಸಿ ತಳಿರು ತೋರಣ ಕಟ್ಟಿ ರಜೆ ಮೂಡಿನಲ್ಲಿದ್ದ ವಿದ್ಯಾರ್ಥಿಗಳಿಗೆ ಶಾಲೆಗೆ ಕರೆ ತರಲಾಯಿತು. ಮೊದಲ ದಿನವೇ ಮಕ್ಕಳ ಜೊತೆಗೆ ದಾಖಲಾತಿ ಆಂದೋಲನ ಸೇರಿ ಇತರೆ ಕಾರ್ಯಕ್ರಮ ಜರುಗಿದವು.
ಸರ್ಕಾರದ ನಿಯಮದ ಪ್ರಕಾರ ಬುಧವಾರ ಶಾಲಾ ಆವರಣ, ಕೊಠಡಿ ಸ್ವಚ್ಛಗೊಳಿಸಿ ಮಕ್ಕಳನ್ನು ಶಾಲೆಗೆ ಕರೆ ತರಲು ಶಿಕ್ಷಕರು ಸಿದ್ಧತೆ ನಡೆಸುವ ಕುರಿತು ಆದೇಶವಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ಎಲ್ಲ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ತಮ್ಮ ಶಾಲೆಗೆ ಭೇಟಿ ನೀಡಿ ಕೊಠಡಿಗಳ ಸ್ವಚ್ಛತಾ ಕಾರ್ಯ ನೆರವೇರಿಸಿದರು.
ಶಾಲಾ ವಿದ್ಯಾರ್ಥಿಗಳು ಮೊದಲ ದಿನವೇ ಶಾಲೆಗೆ ಆಗಮಿಸಿ ಶಿಕ್ಷಕರೊಂದಿಗೆ ಸ್ವಚ್ಛತೆ ನಡೆಸಿ ಶಾಲೆಗೆ ತಳಿರು ತೋರಣ ಕಟ್ಟಿ ಸಂಭ್ರಮಿಸಿದರು. ಶಿಕ್ಷಕ ವರ್ಗವೂ ಸಹಿತ ಖುಷಿಯಿಂದಲೇ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ, ಸಮವಸ್ತ್ರ ಪೂರೈಕೆ ಮಾಡಿದರು. ಕೆಲವು ಶಾಲೆಯಲ್ಲಿ ಸಿಹಿ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಇನ್ನೂ ಕೆಲವು ಶಾಲೆಗಳ ಮುಖ್ಯೋಪಾಧ್ಯಾಯರು ದಾಖಲಾತಿ ಆಂದೋಲನಕ್ಕೆ ಗ್ರಾಮಗಳಲ್ಲಿ ಜಾಥಾ ನಡೆಸಿ ವಿದ್ಯಾರ್ಥಿಗಳ ಮೂಲಕ ಘೋಷಣೆ ಹಾಕಿಸಿದರು. ಮಕ್ಕಳನ್ನು ಶಾಲೆಗೆ ಸೇರಿಸಿ ಶಿಕ್ಷಣವಂತರನ್ನಾಗಿಸುವಂತೆ ಮನವಿ ಮಾಡಿದರು.