ತೋಟಕ್ಕೆ ಗೊಬ್ಬರವಾಗಿ ಹೂವು ಸುರಿದ ರೈತ !
Team Udayavani, Sep 19, 2019, 5:02 PM IST
ಚೆಂಡು ಹೂವಿನ ಬೆಲೆ ಕುಸಿದಿದ್ದರಿಂದ ನಂದೀಹಳ್ಳಿ ಗ್ರಾಮದ ರೈತ ಹೂವು ಗಳನ್ನು ಅಡಕೆ ತೋಟಕ್ಕೆ ಗೊಬ್ಬರವಾಗಿ ಹಾಕಿರುವುದು.
ಕೊರಟಗೆರೆ: ಸಮರ್ಪಕ ಮಳೆ ಇಲ್ಲದೆ ಕೊಳವೆ ಬಾವಿಗಳಿಂದ ಅಲ್ಪಸ್ವಲ್ಪ ಬರುವ ನೀರಿನಿಂದ ಬೆಳೆದ ಚೆಂಡು ಹೂವಿನ ಬೆಲೆ ಕುಸಿದಿದ್ದರಿಂದ ತಾಲೂಕಿನ ತೋವಿಕೆರೆ ಬಳಿಯ ನಂದೀಹಳ್ಳಿ ರೈತನೊಬ್ಬ ಹೂವನ್ನೆಲ್ಲಾ ಅಡಕೆ ತೋಟಕ್ಕೆ ಬುಡಕ್ಕೆ ಹಾಕಿ ಅಳಲು ತೋಡಿಕೊಂಡಿದ್ದಾನೆ.
ಕೊರಟಗೆರೆ ವಿಧಾನ ಸಭಾ ವ್ಯಾಪ್ತಿಯ ತುಮಕೂರು ಗ್ರಾಮಾಂತರ ತಾಲೂಕು ಕೋರಾ ಹೋಬಳಿ ನಂದಿಹಳ್ಳಿಯ ಎನ್.ಎಲ್. ಪ್ರದೀಪ್ ಕುಮಾರ್ ಅರ್ಧ ಎಕರೆ ಜಮೀನಿನಲ್ಲಿ ತುಂತುರು ನೀರಾವರಿ ಯಲ್ಲಿ 50 ಸಾವಿರ ರೂ. ಖರ್ಚು ಹೂವು ಬೆಳೆದಿದ್ದಾರೆ. ಉತ್ತಮ ಬೆಲೆ ಸಿಗುವ ನಿರೀಕ್ಷೆ ಇಟ್ಟು ಕಾದು ಕುಳಿತಿದ್ದ ರೈತನಿಗೆ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಹೂವಿಗೆ ಕೇವಲ 2 ರೂ.ಗೂ ಕೇಳುವವರೇ ಇಲ್ಲ ವಾಗಿದೆ. ಜಮೀನಿನಲ್ಲಿ ಹೂ ಬಿಡಿಸಲು ಖರ್ಚು ಮಾಡಿದ ಹಣವೂ ಕೈ ಸೇರುವ ನಂಬಿಕೆ ಇರಲಿಲ್ಲ. ಹೀಗಾಗಿ ಮಾರಾಟ ಮಾಡಲು ಆಗದೆ 10 ದಿನಗಳಿಗೊಮ್ಮೆ ಹೂವು ಬಿಡಿಸಿ ತನ್ಮದೇ ತೋಟದ ಅಡಕೆ ಮರಗಳ ಬುಡಕ್ಕೆ ಗೊಬ್ಬರವಾಗಿ ಹಾಕುತ್ತಿದ್ದಾರೆ. ಬೆಳೆದ ಹೂವನ್ನು ಗಿಡ ದಲ್ಲೇ ಬಿಟ್ಟರೆ ರೋಗ ಬಂದು ಗಿಡಗಳು ನಾಶವಾಗುತ್ತವೆ. ಹೀಗಾಗಿ ಅಡಕೆ ಮರದ ಬುಡಕ್ಕೆ ಗೊಬ್ಬರವಾಗಿ ಹಾಕುತ್ತಿದ್ದೇನೆ ಎಂದು ರೈತ ಪ್ರದೀಪ್ ತಿಳಿಸಿದರು.