ಮೊಬೈಲ್ ದುರ್ಬಳಕೆಯಿಂದ ಅಪರಾಧ ಹೆಚ್ಚು
ಕಾನೂನು ಅರಿವು-ನೆರವು ಕಾರ್ಯಕ್ರಮ
Team Udayavani, Jul 12, 2019, 5:36 PM IST
ಬಸವನಬಾಗೇವಾಡಿ: ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಪಿಎಸೈ ಗುರುಶಾಂತ ದಾಶ್ಯಾಳ ಮಾತನಾಡಿದರು.
ಬಸವನಬಾಗೇವಾಡಿ: ಪಾಲಕರು ತಮ್ಮ ಮಕ್ಕಳನ್ನು ಮೊಬೈಲ್ ಬಳಕೆಯಿಂದ ದೂರವಿಟ್ಟಾಗ ಅಪರಾಧ ತಡೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪಾಲಕರು ಕ್ರಮ ಕೈಗೊಳ್ಳಬೇಕು ಎಂದು ಬಸವನಬಾಗೇವಾಡಿ ಪಿಎಸೈ ಗುರುಶಾಂತ ದಾಶ್ಯಾಳ ಹೇಳಿದರು.
ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ನ್ಯಾಯವಾದಿಗಳ ಸಂಘ, ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ ಪೋಕ್ಸೋ ಆಕ್ಟ್ 2012ರ ನಿಮಿತ್ತ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ನಮ್ಮ ಮಕ್ಕಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಅದನ್ನು ಬಿಟ್ಟು ದಿನವಿಡೀ ಮೊಬೈಲ್ನಲ್ಲಿ ಯಾವುದೋ ಒಂದು ಸಂದೇಶದ ಬಗ್ಗೆ ಅರಿತು ಅರಿಯದೇ ಅದನ್ನು ಇನ್ನೊಬ್ಬರಿಗೆ ವರ್ಗಾವಣೆ ಮಾಡುವುದು, ಅದರಿಂದ ಆಗುವ ಪರಿಣಾಮಗಳನ್ನು ಅವರೆ ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಇಂದು ಹೆಚ್ಚು-ಹೆಚ್ಚು ಅಪರಾಧಗಳು ನಡೆಯಲು ಮೊಬೈಲ್ ಮತ್ತು ಇನ್ನಿತರ ವಸ್ತುಗಳೆ ಪ್ರಮುಖ ಕಾರಣಗಳಾಗಿವೆ. ಇವುಗಳು ನಮ್ಮ ಜೀವನವನ್ನೆ ಹಾಳು ಮಾಡುತ್ತವೆ. ಒಮ್ಮೆ ಜೀವನದಲ್ಲಿ ಮೊಸ ಹೋದ ಬಳಿಕ ಮತ್ತೆ ಅದನ್ನು ಪಡೆಯಲು ಅಸಾಧ್ಯದ ಮಾತು. ಕೆಲ ಯುವಕ, ಯುವತಿಯರು ಮೊಬೈಲ್ಗಳಲ್ಲಿನ ಸಂದೇಶ ಹಾಗೂ ಮಾತುಗಳಿಗೆ ಮರುಳಾಗಿ ತಮ್ಮ ಜೀವನವನ್ನೆ ಹಾಳು ಮಾಡಿಕೊಂಡ ಉದಾಹರಣೆಗಳು ಇಂದು ಹೆಚ್ಚಾಗುತ್ತಿವೆ ಎಂದು ಹೇಳಿದರು.
ಬಸವನಬಾಗೇವಾಡಿ ಹಿರಿಯ ಸಿವ್ಹಿಲ್ ನ್ಯಾಯಾಧಿಧೀಶ ಶಬಿನಾಬೆಗಂ ಲಾಡಖಾನ್ ಕಾರ್ಯಕ್ರಮ ಉದ್ಘಾಟಿಸಿದರು. ಬಿಎಲ್ಡಿ ಸಂಸ್ಥೆಯ ಮಹಾವಿದ್ಯಾಲಯ ಪ್ರಾಚಾರ್ಯ ಡಾ| ಎಸ್.ಟಿ. ಮೇರವಾಡೆ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಹಿರಿಯ ಸಿವ್ಹಿಲ್ ನ್ಯಾಯಾಧಿಧೀಶ ವೀರನಗೌಡ ಪಾಟೀಲ, ಸಿವ್ಹಿಲ್ ನ್ಯಾಯಾಧೀಶ ಅಶ್ವಿನಿ ಹಟ್ಟಿಹೋಳ್ಳಿ, ಹೆಚ್ಚುವರಿ ಸಿವ್ಹಿಲ್ ನ್ಯಾಯಾಧೀಶ ಶಿವರಾಜು ಎಚ್.ಎಸ್, ಅತಿಥಿಗಳಾಗಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎನ್.ಎಸ್. ಪಾಟೀಲ, ನ್ಯಾಯವಾದಿ ಬಿ.ಆರ್. ಅಡ್ಡೊಡಗಿ, ಪಿ.ಜಿ. ಕುಲಕರ್ಣಿ ಇದ್ದರು. ಪ್ರೊ| ಬಿ.ಎಸ್. ಬೆಳಗಲಿ ನಿರೂಪಿಸಿದರು. ಪ್ರೊ| ಪಿ.ಎಸ್. ತೊಳನೂರ ವಂದಿಸಿದರು.