ಲಂಚ ಪಡೆದರೆ ಧರ್ಮದೇಟು!
ಭೂಮಾಪನ ಇಲಾಖೆ ಅಧಿಕಾರಿಗಳ ವಿರುದ್ಧ ಶಾಸಕ ಡಿ.ಎಸ್. ಹೂಲಗೇರಿ ಗರಂ
Team Udayavani, Jun 19, 2019, 10:53 AM IST
ಲಿಂಗಸುಗೂರು: ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಡಿ.ಎಸ್.ಹೂಲಗೇರಿ ಅಧ್ಯಕ್ಷತೆಯಲ್ಲಿ ತ್ತೈಮಾಸಿಕ ಕೆಡಿಪಿ ಸಭೆ ನಡೆಯಿತು.
ಲಿಂಗಸುಗೂರು: ”ರೊಕ್ಕ ಕೊಟ್ಟರೆ ಬೇಗ ಕೆಲಸ, ಇಲ್ಲದಿದ್ದರೆ ವರ್ಷಾನುಗಟ್ಟಲೆ ಲೇಟು, ನಿಮ್ಗೆ ನಾಚಿಕೆ, ಮಾನ, ಮರ್ಯಾದೆ ಅನ್ನುವುದು ಗೊತ್ತಿಲ್ಲೇನ್ರೀ. ಇನ್ಮುಂದೆ ಲಂಚ ಪಡೆದರೆ ನಿಮ್ಗೆ ಜನರಿಂದ ಧರ್ಮದೇಟು ಬೀಳುತ್ತೆ ಹುಷಾರ್..” ಹೀಗೆಂದು ಭೂಮಾಪನ ಇಲಾಖೆ ಅಧಿಕಾರಿಗೆ ಎಚ್ಚರಿಸಿದವರು ಶಾಸಕ ಡಿ.ಎಸ್.ಹೂಲಗೇರಿ.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ತ್ತೈಮಾಸಿಕ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭೂಮಾಪನ ಇಲಾಖೆಯಲ್ಲಿ ಮಿತಿಮೀರಿದ ಭ್ರಷ್ಟಾಚಾರದ ಬಗ್ಗೆ ಅಧಿಕಾರಿ, ಸಿಬ್ಬಂದಿ ವಿರುದ್ಧ ಹರಿಹಾಯ್ದರು. ಭೂಮಾಪನ ಇಲಾಖೆಯಲ್ಲಿ ಭಷ್ಟಾಚಾರ ಮಿತಿ ಮೀರಿದೆ. ಹಣ ಕೊಟ್ಟರೆ ಮಾತ್ರ ಕೆಲಸ ಎಂಬಂತಹ ಸ್ಥಿತಿ ಇದೆ. ರೈತರು ಜಮೀನು ಸರ್ವೇಗಾಗಿ ವರ್ಷಾನುಗಟ್ಟಲೇ ಕಚೇರಿ ಅಲೆದಾಡುವಂತಾಗಿದೆ. ಅದೇ ಕೆಲಸಕ್ಕೆ 30 ಸಾವಿರ ಲಂಚ ಕೊಟ್ಟರೆ ಕೆಲಸ ಬೇಗವಾಗುತ್ತೆ. ಈ ಬಗ್ಗೆ ಸಾಕಷ್ಟು ರೈತರಿಂದ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಐದಾರು ತಿಂಗಳ ಹಿಂದೆ ಸಭೆ ನಡೆಸಿದಾಗ ಲಂಚ ಪಡೆದರೆ ಸೂಕ್ತ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದೆ. ಆದರೂ ಇಲಾಖೆ ಸಿಬ್ಬಂದಿ, ಅಧಿಕಾರಿಗಳು ಗುಣಗಳನ್ನು ಬದಲಿಸಿಕೊಂಡಿಲ್ಲ. ದೇವರು ನಿಮಗೆ ನಾಚಿಕೆ ಕೊಟ್ಟಿಲ್ವಾ. ಇಷ್ಟೊತ್ಗೆ ಜನ ನಿಮಗೆ ಹೊಡೆಯಬೇಕಿತ್ತು. ಆದರೆ ಇಲ್ಲಿನ ಜನ ಮುಗ್ದರು, ನಿಮ್ಗೆ ಲಾಸ್ಟ್ ವಾರ್ನಿಂಗ್ ಕೊಡ್ತೀನಿ ಲಂಚ ಪಡೆಯದೇ ಎಲ್ಲ ಕೆಲಸಗಳನ್ನು ಸರ್ಕಾರಿ ನಿಯಮಗಳ ಪ್ರಕಾರ ಮಾಡಬೇಕು. ಇಲ್ಲವಾದಲ್ಲಿ ನಾನೇ ಖುದ್ದಾಗಿ ರೈತರನ್ನು ಕರೆದುಕೊಂಡು ಬಂದು ನಿಮ್ಮನ್ನು ಹೊಡೆಸ್ತಿನಿ. ಎಚ್ಚರದಿಂದ ಕೆಲಸ ಮಾಡೋದು ಕಲಿಯಿರಿ ಎಂದು ಭೂಮಾಪನ ಇಲಾಖೆ ಅಧಿಕಾರಿ ಭಲವಂತ ಅವರನ್ನು ಶಾಸಕರು ತರಾಟೆಗೆ ತೆಗೆದುಕೊಂಡರು.
ಸುಳ್ಯಾಕ ಹೇಳುತ್ತೀರಿ: ತಾಲೂಕಿನಲ್ಲಿ ಎಷ್ಟು ಆರ್ಒ ಪ್ಲಾಂಟ್ ಇವೆ..? ಅವುಗಳಲ್ಲಿ ಎಷ್ಟು ಚಾಲ್ತಿಯಲ್ಲಿವೆ..? ಎಂದು ಶಾಸಕ ಹೂಲಗೇರಿ ಗ್ರಾಮೀಣ ಕುಡಿಯುವ ನೀರಿನ ವಿಭಾಗದ ಎಇಇ ಶ್ರೀಮಂತ ಮಿಣಜಗಿ ಅವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಎಇಇ 146 ಶುದ್ಧ ನೀರು ಘಟಕ ಇವೆ. ಇದರಲ್ಲಿ 126 ಚಾಲ್ತಿಯಲ್ಲಿವೆ ಎಂದರು. ಇದಕ್ಕೆ ಗರಂ ಆದ ಶಾಸಕರು ಸುಳ್ಳು ಯಾಕೆ ಹೇಳತ್ತೀರಿ..? ಎಲ್ಲವೂ ಬಂದ್ ಆಗಿವೆ. ಕೂಡಲೇ 146 ಪ್ಲಾಂಟ್ಗಳಿಗೆ ಭೇಟಿ ನೀಡಿ ಚಾಲ್ತಿಯಲ್ಲಿಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಬೇಜವಾಬ್ದಾರಿ ಕೆಲಸ ಬೇಡ: ಮುದಗಲ್ಲನಲ್ಲಿ ಸಮರ್ಪಕ ಕಾರ್ಯ ನಿರ್ವಹಿಸದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳವಂತೆ ಸೂಚಿಸಿದ್ದರೂ ಯಾಕೆ ಕ್ರಮ ಕೈಗೊಂಡಿಲ್ಲ. ಗೆಜ್ಜಲಗಟ್ಟಾ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತೆಯಿಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ. ಅಪಘಾತ ಅಥವಾ ಸಿಡಿಲು ಬಡಿದು ಸತ್ತಿದ್ದರೂ ಶವ ಪರೀಕ್ಷೆ ಮಾಡಲು ವಿನಾಕಾರಣ ಸತಾಯಿಸುತ್ತಿದ್ದಿರಿ ಎಂಬ ದೂರುಗಳಿವೆ. ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಕೆಲಸಗಳು ನಡೆಯುತ್ತಿವೆ. ವಿನಾಕಾರಣ ಬೇಜವಾಬ್ದಾರಿಯಿಂದ ಕೆಲಸ ಮಾಡಿದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ರುದ್ರಗೌಡ ಅವರಿಗೆ ಎಚ್ಚರಿಕೆ ನೀಡಿದರು.
ಪಶು ಸಂಗೋಪನಾ ಎಡಿಗೆ ತರಾಟೆ: ಪಶು ಸಂಗೋಪನಾ ಇಲಾಖೆಯಲ್ಲಿ ಅನೇಕ ವರ್ಷಗಳಿಂದ ರೈತರಿಗೆ ವಿತರಿಸಬೇಕಾಗಿದ್ದ ಪರಿಕರಗಳನ್ನು ವಿತರಿಸದೇ ಹಾಗೇ ಧೂಳು ತಿನ್ನುವಂತೆ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿದ್ದೀರಿ..ಯಾಕ್ರೀ ನಿಮ್ಗೆ ಅರ್ಥವಾಗಲ್ವಾ.. ರೈತರಿಗೆ ಸೌಲಭ್ಯಗಳು ಕೊಡೋಕೇ ನಿಮ್ಗೇನು ಕಷ್ಟ ಎಂದು ಪಶುಸಂಗೋಪನೆ ಸಹಾಯಕ ನಿರ್ದೇಶಕ ಡಾ| ರಾಚಪ್ಪ ಅವರನ್ನು ಶಾಸಕರು ತರಾಟೆಗೆ ತೆಗೆದುಕೊಂಡರು.
ಕತ್ತಲಲ್ಲಿ ಇರುವವರಿಗೆ ಬೆಳಕು ನೀಡಬೇಕೆಂಬ ಉದ್ದೇಶದಿಂದ ಸರ್ಕಾರ ಅನುದಾನ ನೀಡುತ್ತಿದೆ. ಆದರೆ ನಿಮ್ಮ ನಿರ್ಲಕ್ಷ್ಯದ ಕೆಲಸದಿಂದಾಗಿ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ಇದಲ್ಲದೇ ಕುಡಿಯುವ ನೀರಿನ ಯೋಜನೆಗಳ ವಿದ್ಯುತ್ ಸಂಪರ್ಕವನ್ನು ಯಾವುದೇ ಕಾರಣಕ್ಕೂ ಕಡಿತಗೊಳಿಸಬಾರದು ಎಂದು ಶಾಸಕರು ಜೆಸ್ಕಾಂ ಅಧಿಕಾರಿಗೆ ಸೂಚನೆ ನೀಡಿದರು.
ಅಂಕನಾಳ-ಉಪನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಯೋಜನೆ ಜಾರಿಯಾಗಿ ನಾಲ್ಕು ವರ್ಷ ಕಳೆದರೂ ಇನ್ನೂ ಮುಗಿದಿಲ್ಲ. ಹೊನ್ನಳ್ಳಿ ಕುಡಿಯುವ ನೀರಿನ ಯೋಜನೆ ನಿರ್ವಹಣೆ ಟೆಂಡರ್ ಪಡೆದ ಗುತ್ತಿಗೆದಾರರು ಇನ್ನೂ ಕೆಲಸ ಆರಂಭಿಸಿಲ್ಲ. ಕೂಡಲೇ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಗ್ರಾಮೀಣ ಕುಡಿಯುವ ನೀರು ಇಲಾಖೆ ಎಇಇ ಮಿಣಜಗಿ ಅವರಿಗೆ ಶಾಸಕರು ಸೂಚಿಸಿದರು.
ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಸನಗೌಡ ಕಂಬಳಿ, ತಾಪಂ ಅಧ್ಯಕ್ಷೆ ಶ್ವೇತಾ ಪಾಟೀಲ, ಜಿಪಂ ಸದಸ್ಯರಾದ ರೇಣುಕಾ ಚಂದ್ರಶೇಖರ, ಶರಣಬಸವ ಆನ್ವರಿ, ಸಂಗಣ್ಣ ದೇಸಾಯಿ, ಅಂಬಮ್ಮ, ತಾಪಂ ಇಒ ಪ್ರಕಾಶ, ತಹಶೀಲ್ದಾರ್ ಚಾಮರಾಜ ಪಾಟೀಲ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
MUST WATCH
ಹೊಸ ಸೇರ್ಪಡೆ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ