ಒಂದೇ ಹುದ್ದೆಗೆ ಇಬ್ಬರು ನಿರ್ದೇಶಕರ ಜಟಾಪಟಿ
ನ್ಯಾಯಕ್ಕೆ ಒತ್ತಾಯಿಸಿ ಡಾ.ಸುಧಾಕರ್ ಆಮರಣಾಂತ ಉಪವಾಸ | ವರ್ಗಾವಣೆ ಆದೇಶ ರದ್ದು ಸೃಷ್ಟಿಸಿದ ಯಡವಟ್ಟು
Team Udayavani, Jun 20, 2019, 2:31 PM IST
ವರ್ಗಾವಣೆ ಆದೇಶ ರದ್ದುಗೊಂಡಿರುವುದರಿಂದ ಹುದ್ದೆ ಬಿಡಲೊಪ್ಪದ ಡಾ.ಕೆ.ನಂದಕುಮಾರಿ.
ಮಂಡ್ಯ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮಂಡ್ಯ ಪ್ರಾದೇಶಿಕ ಕಚೇರಿಯಲ್ಲಿ ಪ್ರಾದೇಶಿಕ ನಿರ್ದೇಶಕ ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ನಡುವೆ ಜಟಾಪಟಿ ಶುರುವಾಗಿದೆ. ನ್ಯಾಯಕ್ಕಾಗಿ ಒತ್ತಾಯಿಸಿ ಒಬ್ಬ ಪ್ರಾದೇಶಿಕ ನಿರ್ದೇಶಕ ಡಾ. ಸುಧಾಕರ್ ಹೊಸಹಳ್ಳಿ ಅವರು ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ದಾವಣಗೆರೆ ಪ್ರಾದೇಶಿಕ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿದ್ದ ಡಾ. ಸುಧಾಕರ್ ಹೊಸಹಳ್ಳಿ, ಮಂಡ್ಯ ಪ್ರಾದೇಶಿಕ ಕೇಂದ್ರದ ಡಾ. ನಂದಕುಮಾರಿ ಸೇರಿದಂತೆ 8 ಮಂದಿ ಪ್ರಾದೇಶಿಕ ನಿರ್ದೇಶಕರನ್ನು ಕಳೆದ ಮೇ 27ರಂದು ವರ್ಗಾವಣೆಗೊಳಿಸಿ ಮುಕ್ತ ವಿ.ವಿ. ಕುಲಸಚಿವರು ಆದೇಶ ಹೊರಡಿಸಿದ್ದರು.
ಅದರಂತೆ ಡಾ. ಸುಧಾಕರ್ ಹೊಸಹಳ್ಳಿ ಅವರು ದಾವಣಗೆರೆ ಪ್ರಾದೇಶಿಕ ನಿರ್ದೇಶಕ ಹುದ್ದೆಯಿಂದ ಬಿಡುಗಡೆಗೊಂಡು ಮೇ 30ರಂದು ಮಂಡ್ಯ ಪ್ರಾದೇಶಿಕ ನಿರ್ದೇಶಕರ ಕಚೇರಿಯಲ್ಲಿ ಪ್ರಾದೇಶಿಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ನಂದಕುಮಾರಿ ಅವರ ಗೈರುಹಾಜರಿಯಲ್ಲಿ ವರದಿ ಮಾಡಿಕೊಂಡಿದ್ದರು.
ಕುಲಸಚಿವ ಆದೇಶ: ಅಂದಿನಿಂದ ಡಾ. ಸುಧಾಕರ್ ಕಚೇರಿಯ ಸಾಮಾನ್ಯ ನೌಕರರೊಡನೆ ಕೆಲಸ ನಿರ್ವಹಿಸುತ್ತಿದ್ದರು. ಈ ಮಧ್ಯೆ ಜೂ. 4ರಂದು ವರ್ಗಾವಣೆ ಆದೇಶವನ್ನು ತಡೆಹಿಡಿದು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರು ಆದೇಶ ಹೊರಡಿಸಿದ್ದಾರೆ.
ಮಾತಿನ ಚಕಮಕಿ: ಮುಕ್ತ ವಿವಿ ತಾಂತ್ರಿಕ ತೊಂದರೆಯಿಂದ ಇಬ್ಬರು ನಿರ್ದೇಶಕರೂ ಗೊಂದಲದಲ್ಲಿ ಸಿಲುಕಿದ್ದಾರೆ. ಡಾ. ನಂದಕುಮಾರಿ ಅವರು ವರ್ಗಾವಣೆ ಆದೇಶ ರದ್ದಾಗಿರುವುದರಿಂದ ಇಲ್ಲೇ ಕೆಲಸ ಮುಂದುವರಿಸುವುದೇ, ಡಾ. ಸುಧಾಕರ್ ಹೊಸಹಳ್ಳಿ ಅವರು ಮಂಡ್ಯ ಪ್ರಾದೇಶಿಕ ಕಚೇರಿಯಲ್ಲಿ ವರದಿ ಮಾಡಿಕೊಂಡಿರುವ ಕಾರಣ ಅವರನ್ನು ಬಿಡುಗಡೆಗೊಳಿಸಿ ದಾವಣಗೆರೆ ಪ್ರಾದೇಶಿಕ ಕಚೇರಿಗೆ ತೆರಳಿ ಕರ್ತವ್ಯ ನಿರ್ವಹಿಸಬೇಕೇ ಎಂಬ ಬಗ್ಗೆ ಗೊಂದಲ ಇರುವ ಕಾರಣ ಡಾ. ಸುಧಾಕರ್ ಮಂಡ್ಯ ಕಚೇರಿಯಲ್ಲಿ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಲು ಮುಂದಾಗಿದ್ದರು. ಆದರೆ, ಡಾ. ನಂದಕುಮಾರಿ ಅವರು ಹಾಜರಾತಿ ಪುಸ್ತಕ ಕೊಡಲು ನಿರಾಕರಿಸಿದ್ದು, ಇದರಿಂದಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಕುಲಸಚಿವರಿಗೆ ದೂರು: ಸುಧಾಕರ್ ಅವರು ತಮ್ಮನ್ನು ನಿಂದಿಸಿದ್ದೂ ಅಲ್ಲದೆ, ಮಹಿಳೆ ಎನ್ನುವುದನ್ನೂ ಮರೆತು ಲಘುವಾಗಿ ಮಾತನಾಡಿ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಮಂಡ್ಯ ಪ್ರಾದೇಶಿಕ ನಿರ್ದೇಶಕಿ ಡಾ. ನಂದಕುಮಾರಿ ವಿ.ವಿ. ಕುಲಸಚಿವರಿಗೆ ದೂರು ನೀಡಿದ್ದಾರೆ.
ಆಮರಣಾಂತ ಉಪವಾಸ ಸತ್ಯಾಗ್ರಹ: ತಾವು ಡಾ. ನಂದಕುಮಾರಿಯೊಂದಿಗೆ ಅನುಚಿತವಾಗಿ ವರ್ತಿಸಿಲ್ಲ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ. ಒಂದು ವೇಳೆ ನಾನು ಅವರ ವಿರುದ್ಧ ಅನುಚಿತವಾಗಿ ನಡೆದುಕೊಂಡಿದ್ದಲ್ಲಿ ದಾಖಲೆಗಳನ್ನು ಹಾಜರುಪಡಿಸಿ ನನ್ನನ್ನು ಜೈಲಿಗೆ ಹಾಕಲಿ. ಇಲ್ಲವೇ ಶಿಸ್ತು ಕ್ರಮ ಕೈಗೊಳ್ಳಲಿ. ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಳ್ಳಲಾಗಿದೆ. ನನ್ನನ್ನು ತೇಜೋವಧೆ ಮಾಡಲು ಕೆಲವರು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿ ಸುಧಾಕರ್ ಪ್ರಾದೇಶಿಕ ಕಚೇರಿ ಆವರಣದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಯಾವುದೇ ಪ್ರಯೋಜನವಾಗಿಲ್ಲ: ಮುಕ್ತ ವಿ.ವಿ. ಕುಲಸಚಿವರು ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದು, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಡಾ. ಸುಧಾಕರ್ ಅವರು ದಾವಣಗೆರೆ ಕೇಂದ್ರದಲ್ಲಿ ಕೆಲಸ ನಿರ್ವಹಿಸುವುದನ್ನು ಬಿಟ್ಟು ಇಲ್ಲಿ ಧರಣಿ ಆರಂಭಿಸಿ ಇಲ್ಲದ ಗೊಂದಲ ಸೃಷ್ಟಿಸುತ್ತಿದ್ದಾರೆ. ಈ ಬಗ್ಗೆ ತಾವು ಅವರಿಗೆ ಮನವರಿಕೆ ಮಾಡಿಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಈಗಾಗಲೇ ಸಂಬಂಧಿಸಿದ ರಿಜಿಸ್ಟ್ರಾರ್ರವರ ಗಮನಕ್ಕೆ ಈ ವಿಚಾರ ತಿಳಿಯಪಡಿಸಲಾಗಿದೆ ಎಂದು ಮಂಡ್ಯ ಪ್ರಾದೇಶಿಕ ನಿರ್ದೇಶಕಿ ಡಾ. ನಂದಕುಮಾರಿ ತಿಳಿಸಿದರು.
ಈಗಾಗಲೇ ಮುಕ್ತ ವಿ.ವಿ. ಬಗ್ಗೆ ಗೊಂದಲ ನಿರ್ಮಾಣವಾಗಿದೆ. ಪ್ರವೇಶಾತಿ ಆರಂಭವಾಗಿದ್ದು, ಇಂತಹ ಸಂದರ್ಭದಲ್ಲಿ ಇಬ್ಬರು ನಿರ್ದೆಶಕರ ನಡುವಿನ ಗೊಂದಲವನ್ನು ಪರಿಹರಿಸುವಲ್ಲಿ ವಿಶ್ವವಿದ್ಯಾನಿಲಯ ವಿಫಲವಾಗಿದೆ. ತಾಂತ್ರಿಕ ಕಾರಣ ಒಡ್ಡಿ ಗೊಂದಲ ನಿರ್ಮಿಸಿರುವ ವಿಶ್ವವಿದ್ಯಾಲಯ ತಕ್ಷಣವೇ ಇದಕ್ಕೆ ಪರಿಹಾರ ಒದಗಿಸಬೇಕಿದೆ. ಇಲ್ಲದಿದ್ದಲ್ಲಿ ವಿದ್ಯಾರ್ಥಿಗಳು ತೊಂದರೆ ಎದುರಿಸಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್ಡಿಕೆ