ನಾಗತೀಹಳ್ಳಿ ಸಂಸ್ಕೃತಿ ಹಬ್ಬದ ಸಂಭ್ರಮ
Team Udayavani, Apr 2, 2022, 12:59 PM IST
ನಾಗಮಂಗಲ: ತಾಲೂಕಿನ ನಾಗತೀಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ನಾಗತೀಹಳ್ಳಿ ಸಂಸ್ಕೃತಿ ಹಬ್ಬದ ಹಿನ್ನೆಲೆ ವಿವಿಧ ಆರೋಗ್ಯ ಚಿಕಿತ್ಸಾ ಶಿಬಿರ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು.
ಗ್ರಾಮದ ಸರ್ಕಾರಿ ಶಾಲಾ ಆವರಣದ ಸಿಹಿಕನಸು ರಂಗಮಂದಿರದಲ್ಲಿ ಖ್ಯಾತ ಚಲನ ಚಿತ್ರ ನಿರ್ದೇಶಕ ಮತ್ತು ಸಾಹಿತಿ ನಾಗತೀಹಳ್ಳಿ ಚಂದ್ರಶೇಖರ್ರ ನೇತೃತ್ವ ದಲ್ಲಿ ನಡೆಯುತ್ತಿರುವ ನಾಗತೀಹಳ್ಳಿ ಸಂಸ್ಕೃತಿ ಹಬ್ಬ ವನ್ನು ನಾಗತೀಹಳ್ಳಿ ಚಂದ್ರಶೇಖರ್ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಚಾಲನೆ ನೀಡಿದರು.
ಆರೋಗ್ಯ ತಪಾಸಣೆ: ನಾಗತೀಹಳ್ಳಿಯಲ್ಲಿ ನಡೆದ ಮೊದಲನೇ ಆರೋಗ್ಯ ತಪಾಸಣಾ ಶಿಬಿರದಲ್ಲಿ ಬೆಂಗಳೂರಿನ ಅಂಕುರ್ ಹೆಲ್ತ್ ಕೇರ್ ಆಸ್ಪತ್ರೆ ವತಿಯಿಂದ ಗ್ರಾಮೀಣ ಬದುಕಿಗೆ ಅಗತ್ಯವಾಗಿರುವ ದಾಂಪತ್ಯ ಸಾಫಲ್ಯ ಮತ್ತು ಲೈಂಗಿಕ ಆರೋಗ್ಯದ ಕುರಿತ ಆಪ್ತ ಸಮಾಲೋಚನೆ ಮತ್ತು ಚಿಕಿತ್ಸಾ ಶಿಬಿರವನ್ನು ವೈದ್ಯರಾದ ಡಾ.ಎಸ್.ಎಸ್.ವಾಸನ್, ಡಾ.ರೂಪಾ ಸೇರಿದಂತೆ ಆಸ್ಪತ್ರೆ ಸಿಬ್ಬಂದಿಗಳಾದ ಶೀಬಾ ಲೋಬೋ, ಪೂಜಾ ಅವರ ಸಹಕಾರದಲ್ಲಿ ಜರುಗಿತು. ನಂತರ ಎರಡನೇ ಆರೋಗ್ಯ ತಪಾಸಣಾ ಶಿಬಿರದಲ್ಲಿ ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆ ವತಿಯಿಂದ ಕಣ್ಣುಗಳ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನಡೆಯಿತು.
ಗ್ರಾಮದ ಮಕ್ಕಳು, ಹಿರಿಯರು ಸೇರಿದಂತೆ ನೂರಾರು ಮಂದಿ ಭಾಗವಹಿಸಿ ತಪಾಸಣೆ ಮಾಡಿಸಿಕೊಂಡರು. ಅಲ್ಲದೇ ಕಣ್ಣಿನ ತಪಾಸಣಾ ಶಿಬಿರದಲ್ಲಿ ಪ್ರೊ. ಡಾ.ಬಿ.ಎಲ್.ಸುಜಾತಾ ರಾಥೋಡ್, ಡಾ.ಸವಿತಾ, ಡಾ.ರಂಜಿತಾ, ಡಾ.ದೀಕ್ಷಾ ಸೇರಿದಂತೆ ವೈದ್ಯರ ತಂಡ ತಪಾಸಣೆ ನಡೆಸಿತು.
ಬೆಂಗಳೂರಿನ ಎಂಡೋಕ್ರಿನ್ ಮತ್ತು ಡಯಾಬಿಟಿಸ್ ರಿಸರ್ಚ್ ಟ್ರಸ್ಟ್ ಸಂಸ್ಥೆ ವತಿಯಿಂದಲೂ ಆರೋಗ್ಯ ತಪಾಸಣೆ ಮಾಡಲಾಯಿತು.
ವಾಕ್-ಶ್ರವಣ ಶಿಬಿರ: ಮೈಸೂರಿನ ಭಾರತೀಯ ವಾಕ್-ಶ್ರವಣ ಸಂಸ್ಥೆಯಿಂದ ಹಿರಿಯ ಮತ್ತು ಮಕ್ಕಳ ವಾಕ್ – ಶ್ರವಣ ದೋಷ ತಪಾಸಣೆ ಶಿಬಿರ ಮತ್ತು ಬೆಂಗಳೂರಿನ ರಾಜರಾಜೇಶ್ವರಿ ದಂತ ಮಹಾವಿದ್ಯಾ ಲಯ ಸಂಸ್ಥೆಯ ವತಿಯಿಂದ ದಂತ ರೋಗ ತಪಾ ಸಣೆ, ಚಿಕಿತ್ಸೆ ಶಿಬಿರ ನಡೆಯಿತು.
20ಕ್ಕೂ ಹೆಚ್ಚು ಜನರಿಂದ ನೇತ್ರದಾನ: ಗ್ರಾಮಸ್ಥರು, ಮಕ್ಕಳು, ಶಾಲಾ ವಿದ್ಯಾರ್ಥಿಗಳು ಸೇರಿ ಸುಮಾರು 300 ಕ್ಕೂ ಹೆಚ್ಚು ಜನ ಆರೋಗ್ಯ ತಪಾಸಣೆ ಮಾಡಿಸಿ ಕೊಂಡರು. 250ಕ್ಕೂ ಹೆಚ್ಚು ಮಂದಿ ದಂತ ಸಮಸ್ಯೆ ತಪಾಸಣೆ ಮತ್ತು ಶ್ರವಣ ಸಮಸ್ಯೆ ಕುರಿತು ತಪಾಸಣೆ ಮಾಡಿಸಿಕೊಂಡರು. ಈ ವೇಳೆ ಹಲವರಿಗೆ ಉಚಿತ ಔಷಧ ಮತ್ತು ಉಪಕರಣ ನೀಡಲಾಯಿತು.
ಶಿಬಿರದಲ್ಲಿ ಭಾಗವಹಿಸಿ ಹೆಚ್ಚಿನ ಚಿಕಿತ್ಸೆ ಅವಶ್ಯಕ ವಿದ್ದವರಿಗೆ ಆಸ್ಪತ್ರೆಯಲ್ಲಿ ಬಂದು ಉಚಿತ ಚಿಕಿತ್ಸೆ ಪಡೆಯುವಂತೆ ಸೂಚಿಸಲಾಯಿತು. ಗ್ರಾಮದ ಯುವ ರೈತನೊಬ್ಬನನ್ನು ಒಳಗೊಂಡಂತೆ ಸುಮಾರು 20 ಕ್ಕೂ ಹೆಚ್ಚು ಮಂದಿ ನೇತ್ರದಾನದ ಅರ್ಜಿಗೆ ಸಹಿ ಹಾಕಿದರು. ಇದೇ ಸಂದರ್ಭದಲ್ಲಿ ಗ್ರಾಮದಲ್ಲಿ ನೂತನವಾಗಿ ಪರಿಸರ ಸ್ನೇಹಿ ಶಾಲಾ ಕಟ್ಟಡದ ವಿನ್ಯಾಸಕಾರ ಜಯ ರಾಮು ಅವರನ್ನು ಸನ್ಮಾನಿಸಲಾಯಿತು.
ರೈತರಿಗೆ ತಂತ್ರಜ್ಞಾನ ಅರಿವು: ನಾಗತೀಹಳ್ಳಿ ಸಂಸ್ಕೃತಿ ಹಬ್ಬದ ಪ್ರಯುಕ್ತ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ವತಿಯಿಂದ ರೈತರಿಗೆ ನೆರವಾ ಗುವ ಸಂಶೋಧನೆ, ತಂತ್ರಜ್ಞಾನ, ಬಿತ್ತನೆ ಬೀಜ ವಸ್ತು ಪ್ರದರ್ಶನ ನಡೆಯಿತು. ಅಲ್ಲದೇ, ಅಗತ್ಯ ಮಾಹಿತಿ ಯುಕ್ತ ಮಳಿಗೆಗಳ ವ್ಯವಸ್ಥೆ ಮಾಡಲಾಗಿತ್ತು.
ಅಂಕಣಕಾರ ಚಂದ್ರೇಗೌಡ, ವೈದ್ಯರಾದ ಡಾ.ಎನ್. ಶ್ರೀದೇವಿ, ಡಾ.ಎಸ್.ಛಾಯಾ, ಡಾ.ಯಶೋಧರ ಕುಮಾರ್, ಡಾ.ಪದ್ಮಾ ಕೆ.ಭಟ್, ಡಾ.ವೈ.ಎಸ್.ಪ್ರಸನ್ನ ಕುಮಾರ್, ಗ್ರಾಮಸ್ಥರಾದ ಸುಬ್ರಮಣ್ಯ ಸೇರಿದಂತೆ ವಿವಿಧ ಆರೋಗ್ಯ ಸಂಸ್ಥೆಗಳ ನುರಿತ ಹಿರಿಯ ವೈದ್ಯರ ತಂಡ ಇತ್ತು.
ಎಲ್ಲರ ಸಹಕಾರ ಅವಶ್ಯ : ನಿರಂತರವಾಗಿ 18 ವರ್ಷಗಳಿಂದ ಅರೋಹಣ ಪ್ರಕ್ರಿಯೆಯಲ್ಲಿ ಈ ಸಂಸ್ಕೃತಿ ಹಬ್ಬ ಆಯೋಜಿಸುತ್ತಿದ್ದೇವೆ. ನಾನು ನೆಪಮಾತ್ರ. ಸಂಸ್ಕೃತಿ ಹಬ್ಬದಲ್ಲಿ ನಾಟಕವನ್ನು ಪ್ರಮುಖವಾಗಿಟ್ಟು ಕಾರ್ಯಕ್ರಮ ರಚಿಸಲಾಗುತ್ತಿತ್ತು. ಆದರೆ ಕೋವಿಡ್ ಸನ್ನಿವೇಶದಿಂದ ಈ ಬಾರಿ ಅದು ಸಾಧ್ಯವಾಗಿಲ್ಲ. ಕಾರ್ಯಕ್ರಮದ ಮುಂದಿನ ಕನಸು ಸೋಲಾರ್ ಅಳವಡಿಕೆ ಮತ್ತು ಬ್ಯಾಂಕ್ ವ್ಯವಸ್ಥೆ. ಬ್ಯಾಂಕ್ ವ್ಯವಸ್ಥೆಗೆ ಮುಖ್ಯವಾಗಿ ಕಟ್ಟಡವಾಗಬೇಕಿದ್ದು, ಮುಂದಿನ ವರ್ಷದ ವೇಳೆ ಯೋಜನೆ ಪೂರ್ಣವಾಗಲಿದೆ. ಈ ಸಂಸ್ಕೃತಿ ಹಬ್ಬಕ್ಕೆ ಬೆಂಗಳೂರಿನ ಐದು ಪ್ರಮುಖ ವೈದ್ಯಕೀಯ ಸಂಸ್ಥೆಗಳು ಭಾಗವಹಿಸಿದ್ದು, ಖುಷಿ ತಂದಿದೆ. ಈ ಕಾರ್ಯಕ್ರಮಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸುತ್ತೇನೆಂದು ಆಯೋಜಕ ನಾಗತೀಹಳ್ಳಿ ಚಂದ್ರಶೇಖರ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್ಡಿಕೆ