ಹದ ಮಳೆ: ಬಿತ್ತನೆ ಕಾರ್ಯ ಚುರುಕು
ಜೀವಕಳೆ ಪಡೆದುಕೊಳ್ಳುತ್ತಿರುವ ಕೆಆರ್ಎಸ್ • ಕಾವೇರಿ ಕಣಿವೆಯಲ್ಲಿ ಬಿರುಸಿನ ಮುಂಗಾರು
Team Udayavani, Aug 9, 2019, 3:42 PM IST
ಮಂಡ್ಯ: ಕಾವೇರಿ ಕಣಿವೆ ಪ್ರದೇಶದಲ್ಲಿ ಮುಂಗಾರು ಬಹಳ ತಡವಾಗಿ ಬಿರುಸಾಗಿಯೇ ಆರಂಭಗೊಂಡಿದೆ. ಬರಗಾಲದ ಕಾರ್ಮೋಡ ಜಿಲ್ಲೆಯನ್ನು ಆವರಿಸುತ್ತಿರುವಾಗಲೇ ಮಳೆಯ ಮೋಡಗಳ ಆಗಮನವಾಗಿ ರೈತ ಸಮುದಾಯದಲ್ಲಿ ಹೊಸ ಆಶಾಕಿರಣ ಮೂಡಿಸಿವೆ. ವರುಣನ ಅವಕೃಪೆಯಿಂದ ಸ್ತಬ್ಧಗೊಂಡಿದ್ದ ಕೃಷಿ ಚಟುವಟಿಕೆ ಇದೀಗ ಚಾಲನೆ ದೊರಕಿದೆ.
ಬಿತ್ತನೆ ಚುರುಕು: ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಹದ ಮಳೆಯಾಗುತ್ತಿದೆ. ಇದರೊಂದಿಗೆ ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟದಲ್ಲೂ ಏರಿಕೆಯಾಗುತ್ತಿದೆ. ಪರಿಣಾಮ ರೈತರು ಬಿತ್ತನೆಗೆ ಚುರುಕು ನೀಡಿದ್ದಾರೆ. ಮಳೆ ಅಭಾವದಿಂದ ಇಲ್ಲಿವರೆಗೆ ಜಿಲ್ಲೆಯಲ್ಲಿ ಮುಂಗಾ ರು ಹಂಗಾಮಿನ ಬಿತ್ತನೆ ಶೇ.12 ಮಾತ್ರ ನಡೆದಿತ್ತು. ಕಾವೇರಿ ಉಗಮ ಸ್ಥಾನದಲ್ಲಿ ಮಳೆ ಚುರುಕುಗೊಂಡಿರುವುದರಿಂದ ಮುಂದಿನ ದಿನಗಳಲ್ಲಿ ಬಿತ್ತನೆ ಪ್ರದೇಶದ ವ್ಯಾಪ್ತಿಯೂ ಹೆಚ್ಚಾಗುವ ಸಾಧ್ಯತೆಗಳಿವೆ.
ಬುಧವಾರ ಜಿಲ್ಲೆಯಲ್ಲಿ ಸುರಿದ ಮಳೆಯಲ್ಲಿ ಕೆ.ಆರ್.ಪೇಟೆ, ನಾಗಮಂಗಲ ತಾಲೂಕುಗಳಲ್ಲಿ ಅತಿ ಹೆಚ್ಚು ಮಳೆಯಾಗಿದ್ದರೆ, ಮಂಡ್ಯ, ಮಳವಳ್ಳಿ, ಶ್ರೀರಂಗಪಟ್ಟಣದಲ್ಲಿ ಅತಿ ಕಡಿಮೆ ಮಳೆಯಾಗಿದೆ. ಬಿದ್ದ ಮಳೆ ಸಮರ್ಪಕವಾಗಿ ಹಂಚಿಕೆಯಾಗದಿರುವುದೂ ಬಿತ್ತನೆಗೆ ಹಿನ್ನಡೆಯಾಗುವುದಕ್ಕೆ ಮತ್ತೂಂದು ಕಾರಣವಾಗಿದೆ.
ಭೂಮಿ ಹದ: ಜಿಲ್ಲೆಯಲ್ಲಿ 2 ದಿನಗಳಿಂದ ಮೋಡ ಕವಿದ ವಾತಾವರಣವಿದೆ. ಆಗಾಗ ಜಡಿ ಮಳೆ ಸುರಿಯುತ್ತಿದೆ. ಈ ಮಳೆ ಭೂಮಿಯನ್ನು ಹದಗೊಳಿಸುವುದಕ್ಕೆ ಅನುಕೂಲಕರವಾಗಿದೆ. ಬಿತ್ತನೆಗೆ ಪೂರಕ ಸಿದ್ಧತೆ ಆರಂಭಿಸಲು ಮಳೆ ನೆರವಾಗಿದೆ.
ಜಿಲ್ಲೆಯೊಳಗೆ ಭತ್ತದ ಬಿತ್ತನೆ ಅವಧಿ ಬಹುತೇಕ ಮುಗಿಯುವ ಹಂತಕ್ಕೆ ಬಂದಿದೆ. ರಾಗಿ, ಉದ್ದು, ಅವರೆ, ಹುರುಳಿ, ಮುಸುಕಿನ ಜೋಳ, ಅಲಸಂದೆ ಸೇರಿ ದ್ವಿದಳ ಧಾನ್ಯಗಳ ಬಿತ್ತನೆಗೆ ಪೂರಕ ಅವಕಾಶಗಳಿವೆ. ಭತ್ತ ನಾಟಿ ಮಾಡ ಬಯಸುವ ರೈತರು ದೀರ್ಘಾವಧಿ ತಳಿಗೆ ಬದಲಾಗಿ ಅಲ್ಪಾವಧಿ ತಳಿ ಬಿತ್ತನೆ ಮಾಡುವುದಕ್ಕೆ ಅವಕಾಶವಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚಿದ ನೀರಿನ ಮಟ್ಟ:ಭತ್ತದ ಬಿತ್ತನೆ ಕಾರ್ಯ ಶ್ರೀರಂಗಪಟ್ಟಣದ 22 ಹೆಕ್ಟೇರ್ ಹೊರತುಪಡಿಸಿದರೆ ಎಲ್ಲಿಯೂ ನಡೆದಿಲ್ಲ. ಕೊಳವೆ ಬಾವಿ ಆಶ್ರಿತ ಪ್ರದೇಶದ ರೈತರು ಈಗಾಗಲೇ ಭತ್ತದ ಸಸಿ ಮಡಿ ಮಾಡಿಟ್ಟುಕೊಂಡು ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. ಕೃಷ್ಣರಾಜಸಾಗರಕ್ಕೆ ಒಳಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ 3-4 ದಿನದಲ್ಲಿ 100 ಅಡಿ ತಲುಪುವ ಸಾಧ್ಯತೆಗಳಿವೆ. ಆನಂತರ ನಾಲೆಗಳಿಗೂ ನೀರು ಹರಿಸುವ ಸಾಧ್ಯತೆಗಳಿರುವ ಕಾರಣ ಭತ್ತದ ಬಿತ್ತನೆ ಪ್ರದೇಶವೂ ಮುಂದಿನ ದಿನಗಳಲ್ಲಿ ವಿಸ್ತಾರಗೊಳ್ಳುವ ಸಂಭವವಿದೆ. ಕೆಆರ್ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿರುವುದರಿಂದ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಶೀಘ್ರಗತಿಯಲ್ಲಿ ಏರಿಕೆಯಾಗುವುದಕ್ಕೆ ಅನುಕೂಲವಾಗಿದೆ. ಜಲಾಶಯಕ್ಕೆ ಈಗಾಗಲೇ 40 ಸಾವಿರಕ್ಕೂ ಹೆಚ್ಚು ಕ್ಯುಸೆಕ್ ನೀರು ಹರಿದು ಬರುತ್ತಿದೆ. ಒಳಹರಿವಿನ ಪ್ರಮಾಣ ಇನ್ನೂ ಹೆಚ್ಚಾಗಲಿರುವುದರಿಂದ ಕೆಆರ್ಎಸ್ ಅಣೆಕಟ್ಟು ನಿಧಾನವಾಗಿ ಜೀವಕಳೆ ಪಡೆದುಕೊಳ್ಳುತ್ತಿದೆ.
ಮುಂಗಾರು ಪೂರ್ವ ಮಳೆ ಈ ಬಾರಿ ರೈತರ ನಿರೀಕ್ಷೆಯನ್ನು ಸಂಪೂರ್ಣವಾಗಿ ಹುಸಿಗೊಳಿಸಿತ್ತು. ಜೂನ್-ಜುಲೈನಲ್ಲಿ ಮುಂಗಾರು ಉತ್ತಮವಾಗಿರದೆ ಆತಂಕ ಸೃಷ್ಟಿಸಿತ್ತು. ಇದೇ ಸಮಯಕ್ಕೆ ಕಾವೇರಿ ವಿವಾದವೂ ಭುಗಿಲೆದ್ದು ಮುಂಗಾರು ಹಂಗಾಮಿನ ಬೆಳೆಗಳಿಗೆ ನೀರು ಸಿಗದೆ ಜಲಾಶಯದ ನೀರೆಲ್ಲವನ್ನೂ ತಮಿಳುನಾಡಿಗೆ ಹರಿಸಲಾಗುತ್ತಿತ್ತು. ಇದರು ರೈತ ಸಮುದಾಯದಲ್ಲಿ ಆಕ್ರೋಶ ಭುಗಿಲೇಳುವಂತೆ ಮಾಡಿತ್ತು.
ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಭಾಗಗಳಲ್ಲಿ ಕುಂಭದ್ರೋಣ ಮಳೆಯಾಗಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದ್ದರೂ ಕಾವೇರಿ ಕಣಿವೆ ಪ್ರದೇಶದಲ್ಲಿ ಮಳೆ ಕುಂಠಿತಗೊಂಡಿತ್ತು. 3-4 ದಿನದಿಂದ ಈ ಭಾಗದಲ್ಲೂ ಮುಂಗಾರು ಮಳೆ ಚುರುಕುಗೊಂಡಿದೆ. ಕಬಿನಿ, ಕೆಆರ್ಎಸ್, ಹಾರಂಗಿ ಹಾಗೂ ಹೇಮಾವತಿ ಜಲಾಶಯಗಳಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದುಬರುತ್ತಿರುವುದರಿಂದ ಕೃಷಿ ಹಾಗೂ ಕುಡಿಯುವ ನೀರಿಗೆ ಎದುರಾಗಿದ್ದ ಆತಂಕ ಸದ್ಯದ ಮಟ್ಟಿಗೆ ದೂರವಾಗುವ ಸಾಧ್ಯತೆಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್ಡಿಕೆ
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ