ಮಳೆಗಾಗಿ ಬಾಲಕರಿಗೆ ಮದುವೆ ಮಾಡಿಸಿದ ಗ್ರಾಮಸ್ಥರು: ಮಂಡ್ಯ ಜಿಲ್ಲೆಯಲ್ಲೊಂದು ವಿಶೇಷ ಆಚರಣೆ
Team Udayavani, Jun 23, 2023, 7:42 PM IST
ಮಂಡ್ಯ: ಜಿಲ್ಲೆಯಲ್ಲಿ ಮುಂಗಾರು ಮಳೆ ಸಮರ್ಪಕವಾಗಿ ಆಗದ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ತಾಲೂಕಿನ ಹುಳ್ಳಿಗಂಗನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಇಬ್ಬರು ಬಾಲಕರಿಗೆ ಮದುವೆ ಮಾಡಿಸುವ ಮೂಲಕ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಜೂನ್ ಕಳೆಯುತ್ತಾ ಬಂದರೂ ಜಿಲ್ಲೆಯಲ್ಲಿ ನಿರೀಕ್ಷೆಯಂತೆ ಮುಂಗಾರು ಮಳೆ ಸುರಿಯುತ್ತಿಲ್ಲ. ಇದರಿಂದ ಬರದ ಮುನ್ಸೂಚನೆ ಎದುರಾಗಿರುವುದರಿಂದ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಲು ವಿವಿಧ ಆಚರಣೆಗಳಲ್ಲಿ ತೊಡಗಿದ್ದಾರೆ.
ಅದರಂತೆ ಕೆ.ಆರ್.ಪೇಟೆ ತಾಲೂಕಿನ ಹುಳ್ಳಿಗಂಗನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರೆಲ್ಲ ಸೇರಿ ಮದುವೆಯ ರೀತಿಯಲ್ಲಿಯೇ ಇಬ್ಬರು ಗಂಡು ಮಕ್ಕಳ ಪೈಕಿ ಒಬ್ಬ ಗಂಡು ಮಗುವಿಗೆ ವಧುವಿನ ವೇಷ ಹಾಕಿಸಿ ಮದುವೆ ಮಾಡಿದ್ದಾರೆ.
ಗುರುವಾರ ರಾತ್ರಿ ಸಂಪ್ರದಾಯದಂತೆ ಡೋಲು, ವಾದ್ಯ ಸಮೇತ ವಧು-ವರರನ್ನು ಕರೆ ತರುವುದು ಸೇರಿದಂತೆ ಮದುವೆಯ ಕಾರ್ಯಗಳನ್ನು ಪೂರೈಸಿದ್ದಾರೆ. ನಂತರ ವಧುವಿನ ವೇಷ ತೊಟ್ಟಿದ್ದ ಬಾಲಕನಿಗೆ ಮತ್ತೊಬ್ಬ ಬಾಲಕನಿಂದ ತಾಳಿ ಕಟ್ಟಿಸುವ ಮೂಲಕ ಅಕ್ಷತೆ ಹಾಕಿ ಹಾಲಿನಿಂದ ಧಾರೆ ಎರೆದು ಆಶೀರ್ವಾದ ಮಾಡಿ ಮಳೆರಾಯ ಕೃಪೆ ತೋರು ಎಂದು ಪ್ರಾರ್ಥನೆ ಮಾಡಿದ್ದಾರೆ.
ನಂತರ ಗ್ರಾಮಸ್ಥರಿಗೆ ಮದುವೆಯ ಊಟ ಹಾಕಿದ್ದಾರೆ. ಅಲ್ಲದೆ, ಪಟಾಕಿ ಸಿಡಿಸಿ ಮದುವೆ ಸಂಭ್ರಮವನ್ನು ಆಚರಿಸಿದ್ದಾರೆ. ನಂತರ ವರುಣ ದೇವನಿಗೂ ಪೂಜೆ ಸಲ್ಲಿಸಿ ಮಳೆಗಾಗಿ ಮೊರೆ ಇಟ್ಟಿದ್ದಾರೆ. ಇದೊಂದು ವಿಚಿತ್ರ ಮದುವೆಯಂತೆ ಕಂಡು ಬಂದರೂ ಮಳೆಗಾಗಿ ಗ್ರಾಮಸ್ಥರು ಮಾಡಿರುವುದು ವಿಶೇಷ ಆಚರಣೆಯಾಗಿದೆ.