ಜಿಲ್ಲೆಯಲ್ಲಿ ಪಾತಾಳ ಸೇರಿಕೊಂಡ ಅಂತರ್ಜಲ ಮಟ್ಟ
ನಾಗಮಂಗಲ 21.90 ಮೀ., ಮಳವಳ್ಳಿಯಲ್ಲಿ 14.74 ಮೀ. ಕುಸಿತ • ಅಂತರ್ಜಲ ಅತಿ ಹೆಚ್ಚು ಬಳಕೆಯಲ್ಲಿ ಮಳವಳ್ಳಿ ಪ್ರಥಮ
Team Udayavani, Apr 26, 2019, 4:15 PM IST
● ಮಂಡ್ಯ ಮಂಜುನಾಥ್
ಮಂಡ್ಯ: ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಪಾತಾಳ ಸೇರಿದೆ. ಅದರಲ್ಲೂ ನಾಗಮಂಗಲ ಹಾಗೂ ಮಳವಳ್ಳಿ ತಾಲೂಕಿನಲ್ಲಂತೂ ಗಣನೀಯ ಪ್ರಮಾಣದಲ್ಲಿ ಅಂತರ್ಜಲ ಕುಸಿದಿದೆ. ರಣ ಬಿಸಿಲು ಹಾಗೂ ಅಂತರ್ಜಲದ ಯಥೇಚ್ಛ ಬಳಕೆಯಿಂದ ನೀರು ಪಾತಾಳ ಸೇರುತ್ತಿದೆ.
ಬೇಸಿಗೆ ಅವಧಿಯ ಏಪ್ರಿಲ್ ತಿಂಗಳಲ್ಲಿ ನಾಗಮಂಗಲ ತಾಲೂಕಿನಲ್ಲಿ ಅಂತರ್ಜಲದ ಮಟ್ಟ 21.90 ಮೀ. ಕುಸಿದಿದ್ದರೆ, ಮಳವಳ್ಳಿ ತಾಲೂಕಿನಲ್ಲಿ 14.74 ಮೀ. ಕುಸಿತ ಕಂಡಿದೆ. ಕೆ.ಆರ್.ಪೇಟೆ ತಾಲೂಕಿನಲ್ಲಿ 14.04 ಮೀ. ಅಂತರ್ಜಲ ಪಾತಾಳ ಸೇರಿದೆ.
ಕಳೆದ ವರ್ಷದ ಏಪ್ರಿಲ್ನಲ್ಲಿ ನಾಗಮಂಗಲ ತಾಲೂಕಿನಲ್ಲಿ ಅಂತರ್ಜಲ ಮಟ್ಟ 20.73ರಷ್ಟು ಕುಸಿದಿದ್ದರೆ, ಮಳವಳ್ಳಿ ತಾಲೂಕಿನಲ್ಲಿ 14.22ರಷ್ಟು ಕುಸಿತವಾಗಿತ್ತು. ಕೆ.ಆರ್.ಪೇಟೆ ತಾಲೂಕಿನಲ್ಲಿ 14.15 ಮೀ. ಕುಸಿತ ಕಂಡಿದ್ದನ್ನು ಜಿಲ್ಲೆಯ ಅಂತರ್ಜಲ ಇಲಾಖೆಯ ಭೂ ವಿಜ್ಞಾನಿ ನಡೆಸಿದ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ.
ಅಂತರ್ಜಲ ಮಟ್ಟ: ಉಳಿದಂತೆ ಮದ್ದೂರು ತಾಲೂಕಿನಲ್ಲಿ 6.77 ಮೀ., ಮಂಡ್ಯ ತಾಲೂಕಿನಲ್ಲಿ 12.60 ಮೀ., ಪಾಂಡವಪುರ ತಾಲೂಕಿನಲ್ಲಿ 11.35 ಹಾಗೂ ಶ್ರೀರಂಗಪಟ್ಟಣ ತಾಲೂಕಿನಲ್ಲಿ 3.89 ಮೀ. ಕುಸಿತ ಕಂಡಿದೆ. ಅಂತರ್ಜಲ ನೀರಿನ ಮಟ್ಟ ಜನವರಿ ತಿಂಗಳಿನಿಂದ ಹಂತ ಹಂತವಾಗಿ ಕುಸಿತ ಕಾಣುತ್ತಿದೆ. ನಾಲಾ ಆಶ್ರಿತ ಪ್ರದೇಶಗಳಾದ ಮಂಡ್ಯ, ಶ್ರೀರಂಗಪಟ್ಟಣ, ಮದ್ದೂರು ಹಾಗೂ ಪಾಂಡವಪುರ ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಗಣನೀಯ ಪ್ರಮಾಣದಲ್ಲೇನೂ ಕುಸಿದಿಲ್ಲ. ಈ ಭಾಗದಲ್ಲಿ ನದಿಯ ನೀರು ಹರಿವಿರುವುದರಿಂದ ಅಂತರ್ಜಲ ಮಟ್ಟದಲ್ಲಿ ಸಾಕಷ್ಟು ಪ್ರಮಾಣದ ಇಳಿಕೆಯಾಗಿಲ್ಲ.
ಕೆರೆಯಾಶ್ರಿತ ನಾಗಮಂಗಲ: ನಾಗಮಂಗಲ ಸಂಪೂರ್ಣ ಮಳೆಯ ಆಶ್ರಿತ ಪ್ರದೇಶವಾಗಿದೆ. ಇಲ್ಲಿರುವ ಕೆರೆಗಳಿಗೆ ಮಳೆ ಬಿದ್ದರಷ್ಟೇ ನೀರಿನ ಭಾಗ್ಯ. ಅದರಲ್ಲೇ ಅಂತರ್ಜಲವನ್ನು ಕಾಯ್ದುಕೊಳ್ಳುವ ಅನಿವಾರ್ಯತೆ ಇದೆ. ಇಲ್ಲಿರುವ ಕೃಷಿಕರು ವ್ಯವಸಾಯಕ್ಕೆ ಸಂಪೂರ್ಣವಾಗಿ ಅಂತರ್ಜಲದ ಮೇಲೆ ಅವಲಂಬಿತರಾಗಿದ್ದಾರೆ. ಕುಡಿಯುವ ನೀರಿಗೆ ಈ ತಾಲೂಕಿನಲ್ಲಿ ಎದುರಾಗುವಷ್ಟು ಹಾಹಾಕಾರ ಜಿಲ್ಲೆಯ ಇನ್ನಾವುದೇ ತಾಲೂಕುಗಳಲ್ಲಿಯೂ ನೋಡಲಾಗು ವುದಿಲ್ಲ. ಈ ಬೇಸಿಗೆಯಲ್ಲಿ ತಾಲೂಕಿನ 59 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಕುಡಿಯುವ ನೀರಿಗೂ ಅಂತರ್ಜಲವನ್ನೇ ಅವಲಂಬಿ ಸುವಂತಹ ದಯನೀಯ ಸ್ಥಿತಿ ಈ ತಾಲೂಕಿನದ್ದಾಗಿದೆ. ಸಾವಿರಾರು ಅಡಿ ಆಳಕ್ಕೆ ಕೊಳವೆಬಾವಿ ಕೊರೆದರೂ ನೀರು ಸಿಗದಂತಹ ದುಸ್ಥಿತಿ ಈ ತಾಲೂಕಿನಲ್ಲಿದೆ.
ಮಳವಳ್ಳಿ ತಾಲೂಕಿನ ಕೆಲವು ಭಾಗಕ್ಕೆ ಕಾವೇರಿ ನೀರು ಎಟುಕಿಸಿದರೂ ಮುಕ್ಕಾಲು ಭಾಗ ಸಂಪೂರ್ಣ ಮಳೆಯನ್ನೇ ಆಶ್ರಯಿಸಿದೆ. ಒಣಭೂಮಿ ಹೆಚ್ಚಾಗಿದೆ. ಕೆರೆಗಳೆಲ್ಲವೂ ಮಳೆಯ ಮೇಲೆ ಅವಲಂಬಿತವಾಗಿವೆ. ಹಾಗಾಗಿ ಈ ಭಾಗದ ಶೇ.75ರಷ್ಟು ಜನರು ಅಂತರ್ಜಲವನ್ನು ಬಳಕೆ ಮಾಡಿಕೊಂಡು ವ್ಯವಸಾಯ ನಡೆಸುತ್ತಿದ್ದಾರೆ.
ಪ್ರತಿ ತಿಂಗಳೂ ಕುಸಿತ: ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಅಂತರ್ಜಲದ ಮಟ್ಟ ಶೇ.12.19ರಷ್ಟು ಕುಸಿತ ಕಂಡಿದೆ. ಜನವರಿಯಲ್ಲಿ ಶೇ.9.37, ಫೆಬ್ರವರಿಯಲ್ಲಿ ಶೇ.10.56, ಮಾರ್ಚ್ನಲ್ಲಿ ಶೇ.11.65ರಷ್ಟು ಅಂತರ್ಜಲ ಇಳಿಮುಖವಾಗಿತ್ತು. ಜಿಲ್ಲೆಯಲ್ಲಿ ಭೂಗರ್ಭ ಇಲಾಖೆಯವರು ನಿಗದಿಪಡಿಸಿರುವ 60 ಕೊಳವೆ ಬಾವಿಗಳಲ್ಲೂ ಪ್ರತಿ ತಿಂಗಳು ಸಮೀಕ್ಷೆ ನಡೆಸಿ ಅಂತರ್ಜಲ ಇಳಿಕೆ ಪ್ರಮಾಣವನ್ನು ಗುರುತಿಸುತ್ತಿದ್ದಾರೆ.
ಅಂತರ್ಜಲ ಅತಿ ಹೆಚ್ಚು ಬಳಕೆ: ಅಂತರ್ಜಲವನ್ನು ಯಥೇಚ್ಛವಾಗಿ ಬಳಸುತ್ತಿರುವ ತಾಲೂಕುಗಳಲ್ಲಿ ಮಳವಳ್ಳಿ ಜಿಲ್ಲೆಗೇ ಪ್ರಥಮ ಸ್ಥಾನದಲ್ಲಿದೆ. ಈ ತಾಲೂಕಿನ ಶೇ.71ರಷ್ಟು ಅಂತರ್ಜಲ ವಿವಿಧ ಉದ್ದೇಶಗಳಿಗೆ ಬಳಕೆಯಾಗುತ್ತಿದೆ ಎಂದು ಅಂತರ್ಜಲ ನಿರ್ದೇಶನಾಲಯದ ಸರ್ವೆಯಿಂದ ಬೆಳಕಿಗೆ ಬಂದಿದೆ.
ಶ್ರೀರಂಗಪಟ್ಟಣ, ಮಂಡ್ಯ ತಾಲೂಕು ಶೇ.50ಕ್ಕಿಂತ ಕಡಿಮೆ ಅಂತರ್ಜಲ ಬಳಕೆ ಮಾಡಿಕೊಳ್ಳುತ್ತಿದ್ದರೆ, ಉಳಿದ ತಾಲೂಕುಗಳು ಶೇ.60ರ ಆಸುಪಾಸಿನಲ್ಲಿವೆ. ಆದರೆ, ಮಿತಿ ಮೀರಿದ ಅಂತರ್ಜಲ ಬಳಕೆ ಮಾಡುತ್ತಿರುವ ಮಳವಳ್ಳಿ ತಾಲೂಕನ್ನು ಸೂಕ್ಷ್ಮ ಪ್ರದೇಶಕ್ಕೆ ಸೇರಿಸಲಾಗಿದೆ. ಇದನ್ನು ಗಮನಿಸಿದರೆ ಸಂಪೂರ್ಣ ಮಳೆಯಾಶ್ರಿತ ಪ್ರದೇಶವಾದ ನಾಗಮಂಗಲ ತಾಲೂಕಿನಲ್ಲಿ ಮಳವಳ್ಳಿಗಿಂತಲೂ ಕಡಿಮೆ ಪ್ರಮಾಣದಲ್ಲಿ ಅಂತರ್ಜಲ ಬಳಕೆ ಮಾಡುತ್ತಿರುವುದು ಅಚ್ಚರಿಯ ವಿಷಯವೂ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್ಡಿಕೆ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ