371 ನೇ ವಿಧಿ ರದ್ದತಿಯ ಪ್ರಶ್ನೆಯೇ ಇಲ್ಲ: ಪ್ರಹ್ಲಾದ ಜೋಶಿ
Team Udayavani, Sep 30, 2019, 7:57 PM IST
ಮಂಗಳೂರು: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ವಿಧಿ ರದ್ದತಿಯ ಬಳಿಕ ಇನ್ನೂ ಕೆಲವು ಭಾಗಗಳಿಗೆ ವಿಶೇಷ ಸ್ಥಾನಮಾನ ರದ್ದಾಗಲಿದೆಯೇ ಎಂಬ ಬಗ್ಗೆ ಪ್ರಶ್ನೆಗಳನ್ನು ಹಲವರು ಪ್ರಶ್ನಿಸುತ್ತಿದ್ದಾರೆ. ಈ ಕುರಿತಾಗಿ ಕೇಂದ್ರ ಸರಕಾರದ ಸ್ಪಷ್ಟೀಕರಣ ಬಯಸುತ್ತಿದ್ದಾರೆ.
ಆರ್ಥಿಕವಾಗಿ ಹಿಂದುಳಿದಿರುವ ಕೆಲವು ರಾಜ್ಯಗಳು ಹಾಗೂ ಕೆಲವು ಪ್ರದೇಶಗಳು ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ 371 ನೇ ವಿಧಿಯ ಅನ್ವಯ ವಿಶೇಷ ಸ್ಥಾನಮಾನ ನೀಡಲಾಗಿದೆ. ಇದು ರದ್ದುಗೊಳ್ಳುವುದಿಲ್ಲ ಎಂದು ಕೇಂದ್ರ ಗಣಿ, ಕಲ್ಲಿದ್ದಲು ಖಾತೆ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ದ.ಕ.ಜಿಲ್ಲಾ ಬಿಜೆಪಿ ವತಿಯಿಂದ ನಗರದ ಹೊಟೇಲ್ ಓಷಿಯನ್ ಪರ್ಲ್ ಸಭಾಂಗಣದಲ್ಲಿ ನರೇಂದ್ರ ಮೋದಿ ಸರಕಾರದ ಎರಡನೇ ಅವಧಿಯ ಶತ ದಿನ ಪೂರೈಸಿದ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನರೇಂದ್ರ ಮೋದಿಯವರ ದಕ್ಷ ಮತ್ತು ಪ್ರಗತಿಪರ ಆಡಳಿತದಲ್ಲಿ ಭಾರತ ಜಗತ್ತಿನಲ್ಲಿ ಬೃಹತ್ ಅರ್ಥಿಕ ಶಕ್ತಿಯಾಗಿ ಮುನ್ನೆಡೆಯುತ್ತಿದೆ. 19 ನೇ ಶತಮಾನ ಬ್ರಿಟಿಷರದ್ದು , 20 ನೇ ಶತಮಾನ ಅಮೆರಿಕದವರಾಗಿದ್ದರೆ 21 ನೇ ಶತಮಾನ ಭಾರತದ್ದಾಗಲಿದೆ ಎಂದು ಕೇಂದ್ರ ಗಣಿ, ಕಲ್ಲಿದ್ದಲು ಖಾತೆ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದರು.