ವೈದ್ಯರ ಕೊರತೆ ನೀಗಿಸಲು ಕ್ರಮ
Team Udayavani, Dec 17, 2018, 8:45 AM IST
ಮೈಸೂರು: ಪ್ರಾಥಮಿಕ, ತಾಲೂಕು ಆಸ್ಪತ್ರೆಗಳಲ್ಲಿರುವ ವೈದ್ಯರ ಕೊರತೆ ನೀಗಿಸಲು ಸರಕಾರ ಕ್ರಮವಹಿಸಿದ್ದು, ಕೆ.ಆರ್.ಆಸ್ಪತ್ರೆ ಮತ್ತು ಚಾಮರಾಜನಗರ ಜಿಲ್ಲಾ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಲಾಗುವುದು ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಹೇಳಿದರು.
ಸುಳುವಾಡಿಯ ಮಾರಮ್ಮ ದೇಗುಲದಲ್ಲಿ ವಿಷ ಪ್ರಸಾದ ಸೇವಿಸಿ ಅಸ್ವಸ್ಥರಾದವರನ್ನು ನಗರದ ಕೆ.ಆರ್.ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 2015ರಿಂದ ವೈದ್ಯರ ನೇಮಕಾತಿ ಪ್ರಕ್ರಿಯೆ ನಡೆದಿರಲಿಲ್ಲ. ಈಗ 236 ವೈದ್ಯರನ್ನು ಭರ್ತಿ ಮಾಡಲಾಗಿದ್ದು, 182 ಪಿಜಿ ವೈದ್ಯರನ್ನು ನೇಮಕ ಮಾಡಿ ಎಲ್ಲ ಆಸ್ಪತ್ರೆಗೆ ನಿಯೋಜಿಸಿದ್ದೇವೆ. ಆದರೆ 1,300 ಹುದ್ದೆ ಕೊರತೆ ಇದ್ದು, ಈ ನಡುವೆ ಕೆಲವರು ಗ್ರಾಮೀಣ ಸೇವೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಜತೆಗೆ ಅಡ್ವಾನ್ಸ್ ಲೈಫ್ ಸಪೋರ್ಟ್ ಇರುವ 54 ಆಂಬ್ಯುಲೆನ್ಸ್ ಖರೀದಿಸಿದ್ದು, ಅಗತ್ಯ ಕಡೆಗಳಿಗೆ ನೀಡಲಾಗುತ್ತಿದೆ.