ಆಸ್ತಿಗಾಗಿ ದಾಯಾದಿ ಕಲಹ: ಸಹೋದರ ನೇಣಿಗೆ ಶರಣು
Team Udayavani, Apr 27, 2019, 5:00 AM IST
ಎಚ್.ಡಿ.ಕೋಟೆ: ಆಸ್ತಿ ವಿವಾದ ಸಂಬಂಧ ಪದೇ ಪದೆ ದಾಯಾದಿಗಳ ಕಲಹದಿಂದ ಮುಕ್ತಿ ಪಡೆಯಲು ಪೊಲೀಸರ ಮೋರೆ ಹೋದರೂ ದೂರು ಪಡೆಯಲು ಮೀನಮೇಷ ಎಣಿಸಿದ್ದರಿಂದ ಮನನೊಂದ ರೈತನೋರ್ವ ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ಅಂತರಸಂತೆ ಗ್ರಾಮದಲ್ಲಿ ಗುರುವಾರ ರಾತ್ರಿ ಸಂಭವಿಸಿದೆ. ತಾಲೂಕಿನ ಅಂತರಸಂತೆ ಗ್ರಾಮದ ಬಾಣಪ್ಪ ಅಲಿಯಾಸ್ ರಾಜಣ್ಣ (53) ಮೃತ ದುರ್ದೈವಿ ರೈತ.
ಘಟನೆ ವಿವರ: ಅಂತರಸಂತೆ ಗ್ರಾಮದ ಸರ್ವೆ ನಂ.45ರಲ್ಲಿ ರಾಜಣ್ಣ ತಮ್ಮ ತಂದೆಯವರಿಂದ ಬಳುವಳಿಯಾಗಿ ಬಂದಿದ್ದ 2 ಎಕರೆ ಜಮೀನು ಹೊಂದಿದ್ದರು. ಈ ನಡುವೆ ಈ ಜಮೀನು ಸಂಬಂಧ ರಾಜಣ್ಣ ಅವರ ದಾಯಾದಿ ನಿಂಗರಾಜು ಮಧ್ಯೆ ಜಗಳ ನಡೆಯುತ್ತಿತ್ತು ಎಂದು ಹೇಳಲಾಗುತ್ತಿದೆ.
ಈ ಸಂಬಂಧ ರಾಜಣ್ಣ ನನಗೆ ಮತ್ತು ಕುಟುಂಬಕ್ಕೆ ಅನ್ಯಾಯವಾಗುತ್ತಿದೆ. ನನ್ನ ಸಹೋದರ ನಿಂಗರಾಜು ಪದೇ ಪದೆ ನನ್ನ ಹಾಗೂ ನನ್ನ ಕುಟುಂಬದ ಮೇಲೆ ಜಗಳ ಮಾಡಿ ದೌರ್ಜನ್ಯ ಎಸಗಿದ್ದಾನೆ. ನನಗೆ ನ್ಯಾಯ ಕೊಡಿಸಿ ಸೂಕ್ತ ರಕ್ಷಣೆ ನೀಡಿ ಎಂದು ತಾಲೂಕಿನ ಬೀಚನಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.
ಆದರೆ, ಪೊಲೀಸರು ಆರೋಪಿ ನಿಂಗರಾಜು ಮೇಲೆ ಕ್ರಮ ಕೈಗೊಳ್ಳದೇ ಮಿನಮೇಷ ಎಣಿಸುತ್ತಿದ್ದನ್ನು ಕಂಡ ರೈತ ರಾಜಣ್ಣ ಪೂರ್ವಜರಿಂದ ಬಂದ ಆಸ್ತಿಗಾಗಿ ದಾಯಾದಿ ಕಲಹದಿಂದ ಬೆಸತ್ತು, ಗುರುವಾರ ರಾತ್ರಿ ಜಮೀನಿಗೆ ಹೋಗಿ ಧರಿಸಿದ್ದ ಪಂಚೆಯಿಂದ ಮರಕ್ಕೆ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರತಿಭಟನೆ: ವಿಷಯ ತಿಳಿದು ಘಟನಾ ಸ್ಥಳಕ್ಕೆ ದಾವಿಸಿದ ಗ್ರಾಮಸ್ಥರು ಹಾಗೂ ಮೃತನ ಸಂಬಂಧಿಕರು ಘಟನೆಗೆ ಕಾರಣರಾಗಿರುವ ಆರೋಪಿಗಳನ್ನು ಬಂಧಿಸಿ ಕ್ರಮ ಜರುಗಿಸಬೇಕು. ನೊಂದ ರೈತನ ನೆರವಿಗೆ ಬಾರದ ಬೀಚನಹಳ್ಳಿ ಪೊಲೀಸ್ ಠಾಣೆ ಪಿಸ್ಸೆ„ ಪುಟ್ಟಸ್ವಾಮಿ ಅವರನ್ನು ಕೂಡಲೇ ಅಮಾನತುಪಡಿಸಬೇಕು.
ಅಲ್ಲಿಯವರೆಗೂ ಮರದಲ್ಲಿ ನೇಣು ಬಿಗಿದುಕೊಂಡಿರುವ ರಾಜಣ್ಣ ಅವರ ಶವ ಕೆಳಗೆ ಇಳಿಸಲ್ಲ. ಅಧಿಕಾರಿಗಳು ಇಳಿಸಲು ಮುಂದಾದರೂ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ಕಂದಾಯ ಹಾಗೂ ಪೊಲೀಸ್ ಇಲಾಖೆ ಮೇಲಧಿಕಾರಿಗಳು ಘಟನಾ ಸ್ಥಳಕ್ಕೆ ಬರಬೇಕು, ಮೃತ ರೈತನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಘಟನಾ ಸ್ಥಳಕ್ಕೆ ಹುಣಸೂರು ವಿಭಾಗದ ಡಿವೈಎಸ್ಪಿ ಭಾಸ್ಕರ್ ರೈ, ತಹಶೀಲ್ದಾರ್ ಮಹೇಶ್ ಆಗಮಿಸಿ, ಪರಿಶೀಲನೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನಡಿ ಸೂಕ್ತ ಕ್ರಮ ಜರುಗಿಸುವ ಭರವಸೆ ನೀಡಿದ ನಂತರ ಕುಟುಂಬಸ್ಥರು ಮತ್ತು ಗ್ರಾಮಸ್ಥರು ರಾಜಣ್ಣ ಮೃƒತದೇಹ ಮರದಿಂದ ಕೆಳಗೆ ಇಳಿಸಿದರು.
ನಂತರ ಎಚ್.ಡಿ.ಕೋಟೆ ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಶವ ನೀಡಲಾಯಿತು. ಈ ಘಟನೆ ಸಂಬಂಧ ಬೀಚನಹಳ್ಳಿ ಪೊಲೀಸ್ ಠಾಣೆ ಪೊಲೀಸರು ರಾಜಣ್ಣ ಸಾವು ಪ್ರಕರಣ ಸಂಬಂಧ ಅವರ ಸಹೋದರರಾದ ನಿಂಗರಾಜು, ಪುಟ್ಟಸ್ವಾಮಿಗೌಡ, ಚಂದ್ರ ಅವರನ್ನು ಬಂಧಿಸಿ ನ್ಯಾಯಂಗ ಬಂಧನಕ್ಕೆ ಒಪ್ಪಿಸಿ, ತನಿಖೆ ಕೈಗೊಂಡಿದ್ದಾರೆ.