ಹದಗೆಟ್ಟ ರಸ್ತೆಯಲ್ಲಿ ಭತ್ತ ನಾಟಿ ಮಾಡಿದ ಮಕ್ಕಳು
Team Udayavani, Nov 20, 2021, 3:44 PM IST
ನಂಜನಗೂಡು: ಜನರಿರಲಿ ವಾಹನಗಳು ಕೂಡ ಸಂಚರಿಸಲಾಗದ ಸ್ಥಿತಿ ತಲುಪಿದ ತಾಲೂಕಿನ ಚುಂಚನಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಶುಕ್ರವಾರ ಇಲ್ಲಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಭತ್ತದ ಸಸಿ ತಂದು ನಾಟಿ ಮಾಡಿ ವಿನೂತನ ಪ್ರತಿಭಟನೆ ನಡೆಸಿ ಗಮನ ಸೆಳೆದರು.
ಕಾಯಂ ಬರಗಾಲ ಪೀಡಿತ ಗ್ರಾಮಗಳಲ್ಲೊಂದಾದ ಚುಂಚನಳ್ಳಿಯಲ್ಲಿ ಈ ಬಾರಿ ಬಿದ್ದ ಸತತ ಮಳೆಯಿಂದಾಗಿ ಗ್ರಾಮದ ಮುಖ್ಯ ರಸ್ತೆಯೇ ಕೆಸರು ಗುಂಡಿಯಾಗಿ ಮಾರ್ಪಾಡಾಗಿತ್ತು. ಹಾಲಿನ ಡೇರಿಗೆ ಹಾಲು ಹಾಕಲು ರೈತರು ಹಾಗೂ ಶಾಲೆಗೆ ಹೋಗಲು ಮಕ್ಕಳು ಹರ ಸಾಹಸ ಪಡಬೇಕಿತ್ತು. ಸಾರ್ವಜನಿಕರು ಬಸ್ ನಿಲ್ದಾಣಕ್ಕೆ ತೆರಳಲೂ ಹಿಂಸೆ ಅನುಭವಿಸಬೇಕಿತ್ತು. ಈ ರಸ್ತೆಯ ಅವ್ಯವಸ್ಥೆಯನ್ನು ಕಂಡು ಹೈರಾಣಾದ ಗ್ರಾಮಸ್ಥರು ಹಾಗೂ ಮಕ್ಕಳು ಕೆಸರಿನಿಂದ ಕೂಡ ರಸ್ತೆಯಲ್ಲೇ ಭತ್ತದ ಸಸಿ ನೆಟ್ಟು ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರಾಥಮಿಕ ಶಾಲೆಯ ಮಕ್ಕಳೊಂದಿಗೆ ಗ್ರಾಮಸ್ಥರಾದ ನಾಗೇಶ್, ಮಾದಪ್ಪ, ಕೆಂಪರಾಜು, ಸಂತೋಷ, ಮನು, ಮಲ್ಲಣ್ಣ, ರಾಜಶೇಖರ್, ಗುರುಸಿದ್ದಯ್ಯ ಮತ್ತಿತರರು ರಸ್ತೆಯಲ್ಲಿ ಭತ್ತ ನಾಟಿ ಮಾಡಿದರು. ಶೀಘ್ರ ರಸ್ತೆ ಅಭಿವೃದ್ಧಿಪಡಿಸದಿದ್ದರೆ ತಾಲೂಕು ಕಚೇರಿ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.