50 ಕ್ಕೂ ಹೆಚ್ಚು ಕೃಷಿಕರಿಗೆ ಸಾಗುವಳಿ ಮಂಜೂರು: ಶಾಸಕ ಎಚ್.ಪಿ.ಮಂಜುನಾಥ
Team Udayavani, May 6, 2022, 9:10 PM IST
ಹುಣಸೂರು: ಗೋಮಾಳ, ಅರಣ್ಯ ಭೂಮಿ ಹೊರತಾಗಿ ಮುಂದಿನ ತಿಂಗಳ ಅಕ್ರಮ ಸಕ್ರಮ ಸಮಿತಿ ಸಭೆಯಲ್ಲಿ 50 ಕ್ಕೂ ಹೆಚ್ಚು ಕೃಷಿಕರಿಗೆ ಸಾಗುವಳಿ ಮಂಜೂರು ಮಾಡಲಾಗುವುದೆಂದು ಶಾಸಕ ಎಚ್.ಪಿ.ಮಂಜುನಾಥಗ ಪ್ರಕಟಿಸಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಅಕ್ರಮ- ಸಕ್ರಮ ಸಮಿತಿ ಸಭೆಯ ನಂತರ ಮಾಹಿತಿ ನೀಡಿದ ಶಾಸಕರು ಜೂನ್ 06 ರಂದು ತಾಲೂಕಿನ 50 ಕ್ಕೂ ಹೆಚ್ಚು ಮಂದಿಗೆ ಅಕ್ರಮ- ಸಕ್ರಮ ಸಮಿತಿವತಿಯಿಂದ ಭೂಮಿ ಮಂಜುರಾತಿ ಸಾಗುವಳಿ ಪತ್ರ ನೀಡಲಾಗುವುದು.
ತಾಲೂಕಿನ ರೈತರು ಭೂಮಿ ಮಂಜೂರಾತಿಗಾಗಿ ಈ ಹಿಂದೆ ಫಾರಂ 53 ರಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ಈಗಾಗಲೇ ಕಳೆದ ಮೂರು ತಿಂಗಳಿಂದ ಸಭೆನಡೆಸಿ ಪರಿಶೀಲಿಸುವ ಜೊತೆಗೆ ಕೆಲವು ರೈತರನ್ನು ಸಭೆಗೆ ಆಹ್ವಾನಿಸಿ ಅಲ್ಲಿನ ಸಮಸ್ಯೆಗಳ ಕುರಿತು ಚರ್ಚಿಸಲಾಗಿದೆ. ಗೋಮಾಳ ಹಾಗೂ ಅರಣ್ಯ ಭೂಮಿಯನ್ನು ಹೊರತು ಪಡಿಸಿ ಸೂಕ್ತ ಹಾಗೂ ಕಾನೂನು ವ್ಯಾಪ್ತಿಯ ಕ್ರಮ ಬದ್ದವಾಗಿರುವ ಅರ್ಹ ಅರ್ಜಿಗಳನ್ನು ಸಮಿತಿಯು ಪರಿಗಣಿಸಿ ಭೂ ಒಡೆತನದ ಸಾಗುವಳಿ ಪತ್ರ ನೀಡಲಾಗುವುದೆಂದು ತಿಳಿಸಿದರು.
ಸಭೆಯಲ್ಲಿ ಅಕ್ರಮ ಸಕ್ರಮ ಸಮಿತಿಯ ಕಾರ್ಯದರ್ಶಿಗಳಾದ ತಹಸಿಲ್ದಾರ್ ಡಾ. ಅಶೋಕ್, ಸಮಿತಿ ಸದಸ್ಯರಾದ ನಾಗರಾಜ್ ಮಲ್ಲಾಡಿ, ವೆಂಕಟಮ್ಮ ಸೇರಿದಂತೆ ಉಪತಹಸಿಲ್ದಾರ್ ಗಳು, ರಾಜ್ಯಸ್ವ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಹಾಜರಿದ್ದರು.