ಗಾಂಧಿ ಜಯಂತಿ ಆಚರಣೆಗಷ್ಟೇ ಸೀಮಿತ ಬೇಡ
Team Udayavani, Oct 3, 2017, 1:34 PM IST
ಮೈಸೂರು: ಗಾಂಧಿ ಜಯಂತಿ ಆಚರಣೆಗಷ್ಟೇ ಸೀಮಿತವಾಗದೆ ಅವರ ತತ್ವ-ಆದರ್ಶಗಳನ್ನು ನಿರಂತರವಾಗಿ ಪಾಲಿಸುವಂತಾಗಬೇಕಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದರು. ಮೈಸೂರು ಮಹಾ ನಗರ ಪಾಲಿಕೆ ವತಿಯಿಂದ ಸೋಮವಾರ ನಗರದ ಪುರಭವನದಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಹಾಗೂ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಸರ್ವಧರ್ಮಿಯರು ಒಗ್ಗೂಡಿ ಪ್ರಾರ್ಥನೆ, ಭಜನೆ ಮೂಲಕ ಗಾಂಧಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಆದರೆ ಗಾಂಧಿಜಯಂತಿ ಎಂಬುದು ಕೇವಲ ಆಚರಣೆಗೆ ಮಾತ್ರ ಸೀಮಿತಗೊಳ್ಳದೆ, ನಿರಂತರವಾಗಿ ಈ ದಿನವನ್ನು ನೆನೆಯುವ ಮೂಲಕ ಗಾಂಧೀಜಿ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಎಲ್ಲರೂ ನಡೆಯಬೇಕಿದೆ ಎಂದು ತಿಳಿಸಿದರು.
ತ್ಯಾಗ, ಸೇವೆ ಮತ್ತು ಅಹಿಂಸಾ ಮಾರ್ಗ ಅಳವಡಿಸಿಕೊಂಡು ಭವ್ಯ ಭಾರತವನ್ನು ನಿರ್ಮಿಸಬೇಕಿದೆ. ಬೆರಳೆಣಿಕೆಯಷ್ಟು ಜನರು ಮಾಡುವ ಅನ್ಯಾಯ, ಅನೈತಿಕ ಚುಟುವಟಿಕೆಗಳಿಂದ ಸಮಾಜದ ಸ್ವಾಸ್ಥ ಹಾಳಾಗಿದ್ದು, ಈ ಬಗ್ಗೆ ಜಾಗೃತರಾಗಬೇಕೆಂದರು. ಕಾರ್ಯಕ್ರಮದ ಅಂಗವಾಗಿ ಸರ್ವಧರ್ಮ ಪ್ರಾರ್ಥನೆ ಜತೆಗೆ ಗಾಂಧಿ ಭಜನೆ ಮೊಳಗಿತು.
ಅಲ್ಲದೆ ಹಿಂದೂ, ಮುಸ್ಲಿಂ, ಕ್ರೈಸ್ತ್, ಜೈನ ಸಮಾಜದ ಗುರುಗಳು ತಮ್ಮ ಧರ್ಮದ ಗ್ರಂಥಗಳ ಪ್ರಮುಖ ಅಧ್ಯಾಯಗಳನ್ನು ಪಠಿಸಿದರು. ಇದಕ್ಕೂ ಮುನ್ನ ಗಣ್ಯರು ಗಾಂಧಿಚೌಕದಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಮೇಯರ್ ಎಂ.ಜೆ.ರವಿಕುಮಾರ್, ಉಪ ಮೇಯರ್ ರತ್ನಲಕ್ಷ್ಮಣ್, ಜಿಲ್ಲಾಧಿಕಾರಿ ರಂದೀಪ್ ಡಿ., ಪಾಲಿಕೆ ಆಯುಕ್ತ ಜಿ.ಜಗದೀಶ್ ಇದ್ದರು.