ಒಳ ಹರಿವು ಹೆಚ್ಚಳ, ಕಬಿನಿ ಭರ್ತಿ ಸನಿಹ
Team Udayavani, Jul 23, 2019, 3:00 AM IST
ಎಚ್.ಡಿ.ಕೋಟೆ: ಕೇರಳದ ವೈನಾಡು ಹಾಗೂ ಕಬಿನಿ ಹಿನ್ನೀರು ಪ್ರದೇಶದಲ್ಲಿ ಕಳೆದ 15 ದಿನಗಳಿಂದ ಪುನರ್ವಸು ಮಳೆ ಎಡಬಿಡದ ಸುರಿದ ಪರಿಣಾಮ ಕಬಿನಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬಂದಿದೆ. ಈಗ ಎರಡು ದಿನಗಳ ಹಿಂದೆ ಹುಟ್ಟಿರುವ ಪುಷ್ಯ ಮಳೆ ಕೂಡ ಆರ್ಭಟಿಸುತ್ತಿರುವುದರಿಂದ ಜಲಾಶಯದ ಒಳ ಹರಿವಿನ ಪ್ರಮಾಣ ಏರಿಕೆ ಕಂಡಿದ್ದು, ಭರ್ತಿಗೆ ಸನಿಹವಾಗಿದೆ.
10 ಸಾವಿರ ಕ್ಯೂಸೆಕ್ಸ್ ಹರಿವು: ಜಲಾಶಯದ ಗರಿಷ್ಟ ಮಟ್ಟ 2,284 ಅಡಿಗಳಷ್ಟಿದ್ದು, ಜಲಾಶಯಕ್ಕೆ ಹರಿದು ಬರುತ್ತಿದ್ದ 4 ರಿಂದ 5 ಸಾವಿರ ಕ್ಯೂಸೆಕ್ ಇದ್ದ ಒಳ ಹರಿವಿನ ಪ್ರಮಾಣ ಕಳೆದ ಎರಡು ದಿನಗಳಿಂದ ಏರಿಕೆ ಕಂಡು 10 ಸಾವಿರ ಕ್ಯೂಸೆಕ್ಗೆ ಏರಿಕೆಯಾಗಿ ಹೆಚ್ಚಿನ ನೀರು ಹರಿದು ಬರುತ್ತಿರುವುದರಿಂದ 2.271.62 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 2,282 ನೀರು ಸಂಗ್ರಹವಿತ್ತು. 36 ಸಾವಿರ ಕ್ಯೂಸೆಕ್ ನೀರನ್ನು ನಾಲ್ಕು ಕ್ರಸ್ಟ್ ಗೇಟ್ಗಳ ಮೂಲಕ ಮುಂಭಾಗದ ನದಿಗೆ ಹರಿಸಲಾಗುತ್ತಿತ್ತು.
ಭರ್ತಿಗೆ 12 ಅಡಿ ಬಾಕಿ: ಜಲಾಶಯ ಭರ್ತಿಗೆ 12 ಅಡಿಗಳಷ್ಟು ಮಾತ್ರ ಬಾಕಿಯಿದೆ. ಇದೆ ರೀತಿ ಹೆಚ್ಚಿನ ಮಳೆಯಾಗಿ ದಿನಲೂ 11 ಸಾವಿರ ಕ್ಯೂಸೆಕ್ ನೀರು ಇನ್ನೂ 11 ದಿನಗಳ ಕಾಲ ಹರಿದು ಬಂದಲ್ಲಿ ಆಗಸ್ಟ್ ತಿಂಗಳ ಮೊದಲ ವಾರದಲ್ಲೇ ಜಲಾಶಯ ಭರ್ತಿಯಾಗಲಿದೆ. ಹರಿವಿನ ಪ್ರಮಾಣ ಹೆಚ್ಚಾದರೆ ಈ ತಿಂಗಳಲ್ಲೇ ತುಂಬಲಿದೆ ಎಂದು ಜಲಾಶಯದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮೊಳಗಾವಿ “ಉದಯವಾಣಿ’ಗೆ ತಿಳಿಸಿದ್ದಾರೆ.
ರೈತರ ಆತಂಕ: ಮುಂಗಾರು ಮಳೆ ತಡವಾಗದರೂ ಚುರುಕುಗೊಂಡು ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬಂದು ಜಲಾಶಯ ಶೀಘ್ರ ಭರ್ತಿಯಾಗುವ ಮುನ್ಸೂಚನೆ ಕಂಡು ಬಂದ ಹಿನ್ನೆಲೆಯಲ್ಲಿ ಅಚ್ಚುಕಟ್ಟು ಪ್ರದೇಶ ರೈತರಲ್ಲಿ ಮಂದಹಾಸ ಮೂಡಿದೆ. ಅದರೆ, ಅಧಿಕಾರಿಗಳ ಕಣ್ಣಮುಚ್ಚಾಲೆ ಆರಂಭಗೊಂಡಿದ್ದು ಜಲಾಶಯ ಭರ್ತಿಗೂ ಮುನ್ನವೇ ತಮಿಳುನಾಡಿಗೆ ಪಕ್ಕದ ಸುಭಾಷ್ ವಿದ್ಯುತ್ ಘಟಕದ ಮೂಲಕ ಮುಂಭಾಗದ ನದಿಗೆ 5 ಸಾವಿರಕ್ಕೂ ಹೆಚ್ಚು ನೀರನ್ನು ಹೊರ ಬಿಡುತ್ತಿರುವುದರಿಂದ ರೈತರಲ್ಲಿ ಆತಂಕ ಮನೆ ಮಾಡಿದೆ.
ರೈತರ ಭಾರೀ ಪ್ರತಿಭಟನೆ ನಡುವೆಯೂ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಪಾಲನೆಗಾಗಿ ಜಲಾಶಯದ ಅಧಿಕಾರಿಗಳು ಡ್ಯಾಂನಿಂದ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುತ್ತಿದ್ದಾರೆ.
ಕೇರಳದ ವೈನಾಡು ಭಾಗ ಹಾಗೂ ಜಲಾಶಯದ ಹಿನ್ನೀರು ವ್ಯಾಪ್ತಿಯಲ್ಲಿ ಮಳೆ ಹೆಚ್ಚಿದೆ. ಹೀಗಾಗಿ ಜಲಾಶಯದ ಒಳಹರಿವಿನ ಪ್ರಮಾಣ ಕೂಡ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದ್ದು, ಇದೇ ಒಳಹರಿವು ಇನ್ನಷ್ಟು ಇದ್ದಲ್ಲಿ ಶೀಘ್ರವೇ ಜಲಾಶಯ ಭರ್ತಿಯಾಗಲಿದೆ.
-ಮೊಳಗಾವಿ, ಕಬಿನಿ ಪ್ರಭಾರ ಸಹಾಯಕ ಎಂಜಿನಿಯರ್
ತಾಲೂಕಿನಲ್ಲಿ ಈ ಬಾರಿ ಮಳೆಯ ಪ್ರಮಾಣ ಸಾಕಷ್ಟು ಕಡಿಮೆಯಾಗಿದೆ. ತಾಲೂಕಿನಲ್ಲಿ ನಾಲ್ಕು ಜಲಾಶಯಗಳು ಇದ್ದರೂ ಇನ್ನೂ ಒಂದು ಕೆರೆ ಕಟ್ಟೆಯೂ ತುಂಬಿಲ್ಲ. ಹೀಗಿರುವಾಗ ಜಲಾಶಯದಲ್ಲಿ ಸಂಗ್ರವಾಗುತ್ತಿರುವ ನೀರನ್ನು ಅಧಿಕಾರಿಗಳು ಕೋರ್ಟ್ ಆದೇಶ ನೆಪವೊಡ್ಡಿ ತಮಿಳುನಾಡಿಗೆ ಬಿಟ್ಟು ಡ್ಯಾಂ ಬರಿದು ಮಾಡುತ್ತಿದ್ದಾರೆ. ತಮಿಳುನಾಡಿಗೆ ಹರಿಯುತ್ತಿರುವ ನೀರನ್ನು ನಿಲ್ಲಿಸಿ ಇಲ್ಲಿನ ರೈತರ ಹಿತ ಕಾಯಬೇಕು.
-ಜಕ್ಕಹಳ್ಳಿ ರವಿಕುಮಾರ್, ರೈತ ಸಂಘದ ತಾಲೂಕು ಅಧ್ಯಕ್ಷ
* ಬಿ.ನಿಂಗಣ್ಣಕೋಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?