ಗ್ರಾಮಗಳಿಗೆ ಭೇಟಿ ನೀಡಿದ ಜೆಡಿಎಸ್ ಅಭ್ಯರ್ಥಿ
Team Udayavani, May 15, 2018, 1:57 PM IST
ತಿ.ನರಸೀಪುರ: ಪಟ್ಟಣದ ಜೆಡಿಎಸ್ ಅಭ್ಯರ್ಥಿ ಎಂ.ಅಶ್ವಿನ್ಕುಮಾರ್ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮತದಾರರ ಜತೆ ನಡೆದ ಮತದಾನದ ಕುರಿತು ಚರ್ಚೆ ನಡೆಸಿದರು. ಕ್ಷೇತ್ರದ ಹಲವು ಗ್ರಾಮಗಳಿಗೆ ಭೇಟಿ ನೀಡಿ ಮತದಾರರನ್ನು ಮಾತನಾಡಿಸಿದ ಅಶ್ವಿನ್ಕುಮಾರ್, ಚುನಾವಣಾ ಮತದಾನ ಕುರಿತಂತೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಜತೆ ಕೆಲಕಾಲ ಮಾತುಕತೆ ನಡೆಸಿದರು.
ಬಳಿಕ ಪಟ್ಟಣದ ಜೆಡಿಎಸ್ ಕಚೇರಿಗೆ ಆಗಮಿಸಿದ ಅಶ್ವಿನ್ಕುಮಾರ್, ಮತ ಎಣಿಕೆ ಕಾರ್ಯದಲ್ಲಿ ಭಾಗವಹಿಸುವ ಪಕ್ಷದ ಕಾರ್ಯಕರ್ತರ ಜತೆ ಸಮಾಲೋಚನೆ ನಡೆಸಿದರು. ಬಾರಿಯ ಚುನಾವಣೆಯಲ್ಲಿ ನಿಮ್ಮೆಲ್ಲರ ಸಹಕಾರದಿಂದಾಗಿ ನಾನು ಹೆಚ್ಚಿನ ಬಹುಮತದೊಂದಿಗೆ ಕ್ಷೇತ್ರದಲ್ಲಿ ಗೆಲುವು ಸಾಧಿಸುವುದು ನಿಶ್ಚಯ ಎಂದ ಅವರು, ನಿಮ್ಮ ಸೇವೆ ಮಾಡಲು ನಾನು ಸದಾ ಕ್ಷೇತ್ರದಲ್ಲಿರುವುದಾಗಿ ತಿಳಿಸಿದರು.
ಸಾಮಾನ್ಯವಾಗಿ ಮತದಾನ ನಡೆದ ನಂತರದಲ್ಲಿ ಅಭ್ಯರ್ಥಿಗಳು ತಮ್ಮ ಕುಟುಂಬದ ಜತೆ ದೇವಾಲಯ ಮತ್ತಿತರ ಯಾತ್ರಾ ಸ್ಥಳಗಳಿಗೆ ತೆರಳುತ್ತಾರೆ. ಆದರೆ ಜೆಡಿಎಸ್ ಅಭ್ಯರ್ಥಿ ಎಂ.ಅಶ್ವಿನ್ಕುಮಾರ್ ಮತದಾನ ನಡೆದ ಮರುದಿನವೂ ಪಕ್ಷದ ಕಾರ್ಯಕರ್ತರೊಂದಿಗೆ ಕ್ಷೇತ್ರದ ಮತದಾರರ ಸಂಪರ್ಕದಲ್ಲಿರುವುದು ವಿಶೇಷವಾಗಿದೆ.
ಜೆಡಿಎಸ್ ತಾಲೂಕು ಅಧ್ಯಕ್ಷ ಸಿ.ಬಿ.ಹುಂಡಿ ಚಿನ್ನಸ್ವಾಮಿ, ಮುಖಂಡರಾದ ಶಂಭುದೇವನಪುರ ರಮೇಶ್, ಉಕ್ಕಲಗೆರೆ ಗೌರಿಶಂಕರ್, ಜ್ಞಾನೇಂದ್ರಮೂರ್ತಿ, ಹೆಮ್ಮಿಗೆ ಸೋಮಣ್ಣ, ಬಂಗಾರಿ, ಬೂದಹಳ್ಳಿ ಸಿದ್ದರಾಜು ಇತರರಿದ್ದರು.