8ಕ್ಕೆ ಮೈಸೂರು-ಚಿತ್ರದುರ್ಗದಲ್ಲಿ ಮೋದಿ ಪ್ರಚಾರ
Team Udayavani, Mar 31, 2019, 1:08 PM IST
ಮೈಸೂರು: ಲೋಕಸಭೆ ಚುನಾವಣೆ ಪ್ರಚಾರ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 8ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದು, ಚಿತ್ರದುರ್ಗ ಹಾಗೂ ಮೈಸೂರಿನಲ್ಲಿ ಬೃಹತ್ ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಮಾಜಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವೆ ಸ್ಮತಿ ಇರಾನಿ ಅವರು ಭಾನುವಾರ ಮೈಸೂರು-ಕೊಡಗು ಕ್ಷೇತ್ರದ ಅಭ್ಯರ್ಥಿ ಪ್ರತಾಪ್ ಸಿಂಹ ಅವರ ಪರ ಚುನಾವಣಾ ಪ್ರಚಾರಕ್ಕಾಗಿ ಆಗಮಿಸುತ್ತಿದ್ದು, ಮಧ್ಯಾಹ್ನ 12ಗಂಟೆಗೆ ಗೋಣಿಕೊಪ್ಪದ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ದೇಶದಲ್ಲಿ ಪ್ರಧಾನಿ ಮೋದಿ ಅಲೆಯಿದ್ದು, ಕೇಂದ್ರ ಸರ್ಕಾರದ ಸಾಧನೆಗಳನ್ನು ಜನ ಬೆಂಬಲಿಸುವ ವಿಶ್ವಾಸವಿದೆ ಎಂದು ಹೇಳಿದರು. ತುಮಕೂರು ಕ್ಷೇತ್ರದಲ್ಲಿ ಮುದ್ದ ಹನುಮೇಗೌಡ, ಕೆ.ಎನ್.ರಾಜಣ್ಣ ಕಣದಿಂದ ಹಿಂದೆ ಸರಿದು ದೇವೇಗೌಡರಿಗೆ ಬೆಂಬಲ ಸೂಚಿಸಿರಬಹುದು.
ಯಾರೇ ಒಂದಾದರೂ ನಮಗೆ ಅಭ್ಯಂತರವಿಲ್ಲ. ಅಷ್ಟಕ್ಕೂ ಅವರವರೇ ಕಚ್ಚಾಟ ನಡೆಸಿ ಬೇರಾಗಿದ್ದರು. ಈಗ ಆಮಿಷಗಳನ್ನು ತೋರಿ ಒಂದಾಗಿರುವಂತೆ ನಟಿಸುತ್ತಿದ್ದಾರೆ. ಅದು ಅವರ ಆಂತರಿಕ ವಿಚಾರ. ನಮ್ಮ ಅಭ್ಯರ್ಥಿ ಪ್ರಬಲ ಪೈಪೋಟಿ ನೀಡಲಿದ್ದು, ಈ ಬಾರಿ ತುಮಕೂರಿನಲ್ಲಿಯೂ ಕಮಲ ಅರಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಐಟಿ ದಾಳಿಗೆ ಒಳಗಾಗಿರುವ ಗುತ್ತಿಗೆದಾರರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಆತ್ಮೀಯರು ಅದಕ್ಕಾಗಿಯೇ ಅಷ್ಟು ಬಹುಬೇಗ ಅವರ ಪರವಾಗಿ ಬೀದಿಗಿಳಿದು ಪ್ರತಿಭಟಿಸಿದ್ದಾರೆ ಎಂದು ಟೀಕಿಸಿದರು.
ಐಟಿ ದಾಳಿ ಕುರಿತು ಮನಬಂದಂತೆ ಮಾತನಾಡಿದ್ದ ಸಚಿವ ಸಿ.ಎಸ್.ಪುಟ್ಟರಾಜು, ಒಂದೇ ದಿನಕ್ಕೆ ಅಧಿಕಾರಿಗಳನ್ನೇ ಹೊಗಳುತ್ತಿದ್ದಾರೆ. ಇದರ ಹಿಂದಿನ ಗುಟ್ಟೇನು?, ಐಟಿ ಅಧಿಕಾರಿಗಳಿಗೆ ಎನೂ ಸಿಕ್ಕಿಲ್ಲವೆಂದು ಹೇಳುತ್ತಿದ್ದಾರೆ. ಹಾಗಾದರೆ ಇವರಿಗೆ ದಾಳಿ ಆಗುವ ವಿಚಾರ ಮುಂಚೆಯೇ ತಿಳಿದು ಎಲ್ಲವನ್ನೂ ಬೇರೆಡೆಗೆ ಸಾಗಿಸಿದ್ದರೆ ಎಂದು ಪ್ರಶ್ನಿಸಿದರು.
ಹಿಂದೆ ದಾವಣಗೆರೆಯ ಬಿಜೆಪಿ ಸಂಸದ ಸಿದ್ದೇಶ್ವರ ಅವರ ಮನೆ ಮೇಲೂ ಐಟಿ ದಾಳಿ ನಡೆದಿತ್ತು. ಆಗೆಲ್ಲಾ ಏಕೆ ಮುಖ್ಯಮಂತ್ರಿಗಳು ಸುಮ್ಮನಿದ್ದರು. ನಟರ ಮನೆ ಮೇಲೆ ಐಟಿ ದಾಳಿ ನಡೆದಾಗ ಕುಮಾರಸ್ವಾಮಿ ಅವರು, ಅಧಿಕಾರಿಗಳು ಅವರ ಕೆಲಸ ಮಾಡಿದ್ದಾರೆ ಎಂದಿದ್ದರು. ಈಗೇಕೆ ರಾಜಕೀಯ ಪ್ರೇರಿತ ದಾಳಿ ಎನ್ನುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಐಟಿ ದಾಳಿ ವಿಚಾರದಲ್ಲಿ ಪ್ರಧಾನಮಂತ್ರಿಗಳನ್ನು ಅಭಿನಂದಿಸುತ್ತೇನೆ. ಭ್ರಷ್ಟರನ್ನೆಲ್ಲಾ ಬೀದಿಗೆ ತಂದು ನಿಲ್ಲಿಸುತ್ತೇನೆ ಎಂದಿದ್ದರು. ಅದರಂತೆಯೇ ಎಲ್ಲರೂ ಬೀದಿಯಲ್ಲಿ ನಿಂತಿದ್ದಾರೆ. ಮುಖ್ಯಮಂತ್ರಿಯಾಗಿರುವ ಕಾರಣಕ್ಕೆ ಕೆಲವೊಂದು ಮಾಹಿತಿಗಳು ಕುಮಾರಸ್ವಾಮಿ ಅವರಿಗೆ ಲಭ್ಯವಾಗಬಹುದು. ಅದನ್ನು ಬಳಸಿಕೊಂಡು ಹಿಂದಿನ ದಿನವೇ ಐಟಿ ದಾಳಿ ನಡೆಯುತ್ತೇ ಎಂದು ಅವರೆಲ್ಲರನ್ನೂ ಎಚ್ಚರಿಸಿ ಅಕ್ರಮವನ್ನು ಮರೆಮಾಚುವ ಕೆಲಸವನ್ನು ಮಾಡಿರಬಹುದು. ಜೆಡಿಎಸ್-ಕಾಂಗ್ರೆಸ್ನವರು ತಪ್ಪು ಮಾಡದಿದ್ದರೆ ಬೀದಿಗೆ ಬಂದು ಪ್ರತಿಭಟಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.
ಸಿದ್ದುಗೆ ತಿರುಗೇಟು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಟ್ವಿಟರ್ನಲ್ಲಿ ಮಿಷನ್ ಶಕ್ತಿ ಸಾಧನೆ ವಿಜ್ಞಾನಿಗಳದ್ದು, ಮೋದಿಯವರದ್ದಲ್ಲವೆಂದು ಬರೆದುಕೊಳ್ಳುತ್ತಾರೆ. ಅದೇ ಐಟಿ ಅಧಿಕಾರಿಗಳು ದಾಳಿ ಮಾಡಿದರೆ ಮೋದಿ ಮಾಡಿಸಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಇದ್ಯಾವ ಲೆಕ್ಕಾಚಾರ?
ವಿಜ್ಞಾನಿಗಳು -ಅಧಿಕಾರಿಗಳ ಕೆಲಸ ಅದರಲ್ಲಿ ರಾಜಕೀಯ ಮಾಡಲು ಹೋಗಬಾರದು ಎಂದರು. ನಗರ ಬಿಜೆಪಿ ಅಧ್ಯಕ್ಷ ಡಾ.ಬಿ.ಎಚ್.ಮಂಜುನಾಥ್, ರಾಜ್ಯ ಕಾರ್ಯದರ್ಶಿ ರಾಜೇಂದ್ರ, ರಾಜ್ಯ ವಕ್ತಾರ ಡಾ.ವಾಮನಾಚಾರ್ಯ, ಎನ್.ವಿ.ಫಣೀಶ್, ಮಾಧ್ಯಮ ಪ್ರಮುಖ್ ಪ್ರಭಾಕರ ಸಿಂಧ್ಯಾ ಹಾಜರಿದ್ದರು.
ಸಿದ್ದರಾಮಯ್ಯ ಸುಳ್ಳುಗಾರ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಸುಳ್ಳುಗಾರ ಎನ್ನುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವೇ ಸುಳ್ಳುಗಾರರು ಎನ್ನುವುದನ್ನು ತೋರಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಮೋದಿಯವರನ್ನು ಸುಳ್ಳುಗಾರರು ಎಂದ ಸಿದ್ದರಾಮಯ್ಯ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿದ್ದಾರೆ.
ದೇಶದ ಜನರಿಗೆ ಯಾರು ಸುಳ್ಳು ಹೇಳಿದ್ದಾರೆಂಬ ಅರಿವಿದೆ. ಮುಂದೆಯೂ ಹೀಗೆ ಹೇಳುತ್ತಿದ್ದರೆ, ಅವರೇ ಸುಳ್ಳುಗಾರರಾಗುವರು ಎಂದು ಅರವಿಂದ ಲಿಂಬಾವಳಿ ತಿಳಿದರು. ಜೆಡಿಎಸ್ನೊಂದಿಗೆ ಸ್ಥಾನ ಹೊಂದಾಣಿಕೆ ಮಾಡಿಕೊಂಡು ಆ ಕ್ಷೇತ್ರಗಳ ಉಳಿವಿಗಾಗಿ ಹೋರಾಟ ನಡೆಸುತ್ತಿರುವ ಸಿದ್ದರಾಮಯ್ಯ, ಇಂತಹ ಹೇಳಿಕೆಗಳಿಂದ ಇರುವ ಕ್ಷೇತ್ರಗಳನ್ನೂ ಕಳೆದುಕೊಳ್ಳಲಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ