ಬುದ್ಧಿವಾದ ಹೇಳಿದ್ದಕ್ಕೆ ಮೊಮ್ಮಗಳಿಂದಲೇ ಅಜ್ಜ, ಅಜ್ಜಿ ಹತ್ಯೆಗೆ ಯತ್ನ
Team Udayavani, Mar 16, 2017, 5:43 PM IST
ಮೈಸೂರು: ಮಾದಕದ್ರವ್ಯಗಳ ಚಟಕ್ಕೆ ದಾಸಳಾಗಿದ್ದಕ್ಕೆ ಬುದ್ಧಿ ಹೇಳಿದ ಅಜ್ಜ, ಅಜ್ಜಿಯನ್ನೇ ಸಜೀವವಾಗಿ ಬೆಂಕಿಹಚ್ಚಿ ಸುಟ್ಟು ಹಾಕಲು ಸ್ವತಃ ಮೊಮ್ಮಗಳೇ ಯತ್ನಿಸಿ ಪರಾರಿಯಾಗಿರುವ ಘಟನೆ ಮೈಸೂರಿನ ಹೆಬ್ಬಾಳ ಬಡಾವಣೆಯಲ್ಲಿ ನಡೆದಿದೆ.
ಮೈಸೂರು ಹೆಬ್ಬಾಳ ಬಡಾವಣೆಯ ಲಕ್ಷ್ಮಿಕಾಂತ ನಗರದ ನಿವಾಸಿಯಾಗಿರುವ 27 ವರ್ಷದ ಪ್ರಿಯದರ್ಶಿನಿ ಮಾಡೆಲಿಂಗ್ ಆಗಿದ್ದು, ಆಕೆ ಮಾದಕ ದ್ರವ್ಯ ಚಟಕ್ಕೆ ಬಿದ್ದಿದ್ದಳು. ಈ ವಿಷಯ ತಿಳಿದ ಅಜ್ಜ, ಅಜ್ಜಿ ಮೊಮ್ಮಗಳಿಗೆ ಬುದ್ಧಿವಾದ ಹೇಳಿದ್ದರು.
ಬುದ್ಧಿವಾದ ಹೇಳಿದ್ದರಿಂದ ಸಿಟ್ಟಿಗೆದ್ದ ಮೊಮ್ಮಗಳು ಪ್ರಿಯದರ್ಶಿನಿ, ಅಜ್ಜ, ಅಜ್ಜಿಯನ್ನು ಮನೆಯೊಳಗೆ ಕೂಡಿಹಾಕಿ, ಬೆಂಕಿಹಚ್ಚಿ ಸಜೀವವಾಗಿ ಸುಡಲು ಯತ್ನಿಸಿ ಪರಾರಿಯಾಗಿದ್ದಳು. ತಮ್ಮನ್ನು ಕೂಡಿಹಾಕಿರುವ ವಿಷಯ ತಿಳಿದ ವೃದ್ಧ ದಂಪತಿ ಸಹಾಯಕ್ಕಾಗಿ ಅಂಗಲಾಚಿದಾಗ ನೆರೆಹೊರೆಯವರು ಬಂದು ಇಬ್ಬರನ್ನೂ ರಕ್ಷಿಸಿದ್ದರು. ಅಜ್ಜ, ಅಜ್ಜಿಯನ್ನು ಕೊಲ್ಲಲು ಯತ್ನಿಸಿದ ಮೊಮ್ಮಗಳು ಪ್ರಿಯದರ್ಶಿನಿ ವಿರುದ್ಧ ಮೈಸೂರು ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.