ಪ್ರಜಾಕೀಯ ಅಭ್ಯರ್ಥಿ ಪರ ಉಪೇಂದ್ರ ಪ್ರಚಾರ
Team Udayavani, Apr 3, 2019, 3:00 AM IST
ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ವಿ.ಆಶಾರಾಣಿ ಪರವಾಗಿ, ಪಕ್ಷದ ಸಂಸ್ಥಾಪಕರಾದ ನಟ ಉಪೇಂದ್ರ ಮಂಗಳವಾರ ಮೈಸೂರಿನಲ್ಲಿ ಪ್ರಚಾರ ನಡೆಸಿದರು.
ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ಪ್ರಚಾರ ಆರಂಭಿಸಿದ ಅವರು, ಪ್ರಚಾರದ ಮಧ್ಯೆ ಮೈಸೂರು ಅರಮನೆಗೆ ತೆರಳಿ, ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರೊಂದಿಗೆ ಮಾತುಕತೆ ನಡೆಸಿದರು.
ಮೈಸೂರಿನ ಬಸ್ ನಿಲ್ದಾಣ, ಮಾರುಕಟ್ಟೆ ಸೇರಿದಂತೆ ವಿವಿಧ ಭಾಗಗಳಲ್ಲಿ ಕಾಲ್ನಡಿಗೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯ ಜೊತೆ ಪ್ರಚಾರ ನಡೆಸಿದ ಉಪೇಂದ್ರ , ಪ್ರಜಾಕೀಯವನ್ನು ಒಂದು ರಾಜಕೀಯ ಪಕ್ಷವಾಗಿ ನೋಡದೆ ಜನರಿಗಾಗಿ ಇರುವ ಕಾರ್ಪೊರೇಟ್ ಸಂಸ್ಥೆ ರೀತಿ ನೋಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ನಮ್ಮದು ಜನರಿಂದ-ಜನರಿಗಾಗಿ-ಜನರಿಗೋಸ್ಕರ ಇರುವ ಪಕ್ಷ. ಜನ ಸೇವೆಗಾಗಿ ಎರಡು ವರ್ಷಗಳ ಹಿಂದೆ ಪ್ರಜಾಕೀಯ ಪಕ್ಷ ಸ್ಥಾಪಿಸಿ, ವ್ಯವಸ್ಥೆಯ ಬದಲಾವಣೆಗಾಗಿ ನಾವು ಜನರ ಮುಂದೆ ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಜನರೇ ಬದಲಾವಣೆ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.