ಡ್ರಗ್ಸ್ ದಂಧೆ ವಿರುದ್ಧ ಕರ್ನಾಟಕ ಸೇನಾಪಡೆ ಪ್ರತಿಭಟನೆ
Team Udayavani, Sep 5, 2020, 2:35 PM IST
ಮೈಸೂರು: ರಾಜ್ಯದಲ್ಲಿ ತಲ್ಲಣ ಸೃಷ್ಟಿಸಿರುವ ಡ್ರಗ್ಸ್ ದಂಧೆ ಖಂಡಿಸಿ ಹಾಗೂ ಸರ್ಕಾರ ಈ ಕೂಡಲೇ ಮಟ್ಟ ಹಾಕಬೇಕೆಂದು ಒತ್ತಾಯಿಸಿ ಕರ್ನಾಟಕ ಸೇನಾಪಡೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ ಬಹಳಷ್ಟು ಚರ್ಚೆ, ಆರೋಪ ಕೇಳಿ ಬರುತ್ತಿವೆ. ಈ ಡ್ರಗ್ಸ್ ಕೇವಲ ಚಿತ್ರರಂಗ ಮಾತ್ರವಲ್ಲದೆ ಕಾಲೇಜು ವಿದ್ಯಾರ್ಥಿಗಳು, ಯುವಕರನ್ನೂ ಆವರಿಸಿರುವುದು ಖಂಡನೀಯ. ರಾಜಕಾರಣಿ ಗಳ ಮಕ್ಕಳು ಹಾಗೂ ಅಪಾರ ಅಭಿಮಾನಿಗಳನ್ನು ಹೊಂದಿರುವ ಖ್ಯಾತ ಚಲನಚಿತ್ರ ನಟ- ನಟಿಯರು ಈ ದಂಧೆಯಲ್ಲಿ ಭಾಗಿಯಾಗಿರುವುದು ನೋವಿನ ಸಂಗತಿ. ಸಮಾಜಕ್ಕೆ ಮಾದರಿಯಾಗಬೇಕಾದ ಪ್ರತಿಷ್ಠಿತ ಪ್ರಭಾವಿಗಳು ಇಂತಹ ಚಟಗಳಿಗೆ ಅಂಟಿಕೊಂಡಿರುವುದು ಆತಂಕಕಾರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡ್ರಗ್ಸ್ ದಂಧೆ ಭಯೋತ್ಪಾದನೆ ಇದ್ದಂತೆ. ನಮ್ಮ ನೆರೆ ವಿರೋಧಿ ರಾಷ್ಟ್ರಗಳು ನಮ್ಮ ದೇಶದ ಯುವಕರನ್ನು ಮಾದಕ ವ್ಯಸನಿಗಳಾಗಿ ಮಾಡಿ, ಅವರ ಕುಟುಂಬಗಳನ್ನು ನಾಶ ಮಾಡುವ ಹುನ್ನಾರ ಅಡಗಿದೆ. ದೇಶದ ವಿದ್ಯಾರ್ಥಿಗಳು, ಯುವಕರು ಡ್ರಗ್ಸ್ಗೆಮಾರುಹೋಗದಂತೆ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಮಾದಕ ವಸ್ತುಗಳ ಬಗ್ಗೆ ಅರಿವು ಮೂಡಿಸಬೇಕು ಹಾಗೂ ಪೋಷಕರು ಸಹ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.
ಎಂತಹ ಪ್ರಭಾವಿ ಹಸ್ತಕ್ಷೇಪಗಳಿದ್ದರೂ, ಸರ್ಕಾರ ಯಾವುದೇ ಒತ್ತಡಕ್ಕೂ ಮಣಿಯದೆ ದಂಧೆಯಲ್ಲಿ ತೊಡಗಿಸಿಕೊಂಡಿರುವವರನ್ನು ದೇಶದ್ರೋಹ ಪ್ರಕರಣದಲ್ಲಿ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಕರ್ನಾಟಕ ಸೇನಾಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ಗೌಡ, ವಿಜಯೇಂದ್ರ, ಸೋಮಶೇಖರ್, ಮೊಗಣ್ಣಾಚಾರ್, ಬಸವರಾಜು ಶಾಂತಮೂರ್ತಿ, ಪರಿಸರ ಚಂದ್ರು ಇದ್ದರು.