ಆಲಿಕಲ್ಲಿನೊಂದಿಗೆ ವರುಣನ ಆರ್ಭಟ
Team Udayavani, May 24, 2019, 3:00 AM IST
ಮೈಸೂರು: ಗುರುವಾರ ಸಂಜೆ ನಗರಾದ್ಯಂತ ಸುರಿದ ಧಾರಾಕಾರ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿತು. ಜೋರು ಗಾಳಿಯೊಂದಿಗೆ ಆಲಿಕಲ್ಲು ಮಳೆ ಸುರಿದ ಪರಿಣಾಮ ಅನೇಕ ಕಡೆ ಮರಗಳು ಧರೆಗುರುಳಿ, ಅಪಾರ ಹಾನಿ ಸಂಭವಿಸಿದೆ.
ಸಂಜೆಯಾಗುತ್ತಿದ್ದಂತೆ ಕಾರ್ಮೋಡ ಕವಿದು ಜೋರು ಗಾಳಿ ಬೀಸಲು ಆರಂಭವಾಗಿ, ಜತೆಯಲ್ಲಿ ಮಳೆಯೂ ಗಂಟೆಗೂ ಹೆಚ್ಚು ಕಾಲ ಸುರಿಯಿತು. ಸಂಜೆ 5.30ರ ಸುಮಾರಿಗೆ ಆಗಮಿಸಿದ ಮಳೆ ಭಾರೀ ಗಾಳಿಯೊಂದಿಗೆ 6.30 ಗಂಟೆವರೆಗೂ ಸುರಿಯಿತು. ಜೊತೆಗೆ ಗುಡುಗು ಸಿಡಿಲೂ ಇತ್ತು. ಜೋರು ಮಳೆ ಸುರಿದ ಪರಿಣಾಮ ತಗ್ಗು ಪ್ರದೇಶಕ್ಕೆ ನೀರು ಹರಿಯಿತು.
ಹಿಂಗಾರಿನಲ್ಲಿ ಈಗಾಗಲೇ ಕೆಲವು ರೈತರು ಮಾವಿನಕಾಯಿ ಹಾಗೂ ತರಕಾರಿ ಬೆಳೆದಿದ್ದು, ಅವರಿಗೆ ಈ ಮಳೆ ಸಂಕಷ್ಟ ತಂದೊಡ್ಡಿದ್ದರೆ, ಭತ್ತ ಬೆಳೆಯಲು ಸಿದ್ಧಮಾಡಿಕೊಂಡಿರುವ ಅನ್ನದಾತನಿಗೆ ಮುಂಗಾರು ಪೂರ್ವ ಮಳೆ ಹೊಸ ಅವಕಾಶ ನೀಡಿದೆ.
ಮೊದಲ ಆಲಿಕಲ್ಲು ಮಳೆ: ಪೂರ್ವ ಮುಂಗಾರು ಮೊದಲ ಬಾರಿಗೆ ನಗರದಲ್ಲಿ ಆಲಿಕಲ್ಲು ಮಳೆ ಸುರಿದಿದ್ದು, ಮಳೆ ಆರಂಭವಾಗುತ್ತಿದ್ದಂತೆ ಇಪ್ಪತ್ತು ನಿಮಿಷಕ್ಕೂ ಹೆಚ್ಚಕಾಲ ಭಾರಿ ಆಲಿಕಲ್ಲುಗಳು ಧರೆಗೆ ಅಪ್ಪಳಿಸಿದವು. ಮನೆ ಅಂಗಳದಲ್ಲಿ ಆಲಿಕಲ್ಲುಗಳು ದಪದಪನೆ ಬೀಳುತ್ತಿದ್ದಂತೆ ಮಕ್ಕಳು ಅದನ್ನು ಸವಿದರು.
ಧರೆಗುರುಳಿದ ಮರಗಳು: ಶಾರದಾದೇವಿನಗರದ ಶಾರದಾಂಬೆ ಪಾರ್ಕ್ ಬಳಿ ಎರಡು ಮರಗಳು ಬಿದ್ದ ಪರಿಣಾಮ ವಿದ್ಯುತ್ ಕಂಬ ಧರೆಗುರುಳಿತು. ಪರಿಣಾಮ ಸುತ್ತ-ಮುತ್ತಲಿನ ಪ್ರದೇಶದ ವಿದ್ಯುತ್ ಸಂಪರ್ಕ ಕಡಿತಗೊಂಡಿತು. ಚಾಮರಾಜಪುರಂನ ಜಯಲಕ್ಷ್ಮೀವಿಲಾಸ ರಸ್ತೆಯಲ್ಲಿ ಬಳಿ ಮರವೊಂದು ಬೈಕ್ಗಳ ಮೇಲೆ ಬಿದ್ದು, ಬೈಕ್ಗಳು ಜಖಂಗೊಂಡಿದೆ.
ಕುಕ್ಕರಹಳ್ಳಿ ಶಾಲೆಯ ಪಕ್ಕ ಒಂದು, ಈಜುಕೊಳ್ಳದ ರಸ್ತೆಯಲ್ಲಿ ನಾಲ್ಕು ಮರಗಳು ಧರೆಗುರುಳಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸರಸ್ವತಿಪುರಂನ ಅಗ್ನಿಶಾಮಕದಳದ ಮುಂದೆ ಮರವೊಂದರ ಜತೆಗೆ ವಿದ್ಯುತ್ ಕಂಬವೂ ಧರೆಗುರುಳಿದೆ. ಜಯಲಕ್ಷ್ಮೀ ವಿಲಾಸ ರಸ್ತೆಯಲ್ಲಿ ಹತ್ತಕ್ಕೂ ಹೆಚ್ಚು ಮರಗಳ ಕೊಂಬೆ ಮುರಿದು ಬಿದ್ದ ಪರಿಣಾಮ ವಿದ್ಯುತ್ ತಂತಿ ತುಂಡಾಗಿತ್ತು.
ಜೊತೆಗೆ ಎರಡು ಕಾರುಗಳು ಜಖಂಗೊಂಡವು. ಇನ್ನು ರೈಲ್ವೆ ನಿಲ್ದಾಣ, ಕುವೆಂಪುನಗರ, ಗೀತಾ ರಸ್ತೆ, ಜೆ.ಪಿ.ನಗರ, ಕೌಟಿಲ್ಯ ರಸ್ತೆಗಳಲ್ಲಿ ಮರಗಳು ಧರೆಗುರುಳಿದವು. ಅನಘಾ ಆಸ್ಪತ್ರೆ ಬಳಿ ಮಳೆಗೆ ಮರವೊಂದು ಕಾರಿನ ಮೇಲೆ ಬಿದ್ದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಕುವೆಂಪುನಗರದ ಉದಯರವಿ ರಸ್ತೆ, ಕಾವೇರಿ ಶಾಲೆ ಮತ್ತು ಕೆ.ಆರ್.ಮೊಹಲ್ಲಾ ವೀಣೆ ಶೇಷಣ್ಣ ರಸ್ತೆಯ 7ನೇ ಕ್ರಾಸ್ ಬಳಿ ಮರ ಬಿದ್ದಿದ್ದು, ವಿದ್ಯುತ್ ತಂತಿ ಹರಡಿ ಅಪಾಯಕ್ಕೆ ಆಹ್ವಾನ ನೀಡುವಂತಿತ್ತು. ಅಲ್ಲದೆ, ನಗರದ ಶಾಂತಲಾ ಚಿತ್ರಮಂದಿರದ ನಾರಾಯಣಶಾಸಿŒ ರಸ್ತೆ ಬಳಿ ಮರದ ಜತೆಗೆ ವಿದ್ಯುತ್ ಕಂಬ ಧರೆಗುರುಳಿದ್ದವು.
ಮಳೆಯಿಂದ ಲೋಕೋಪಯೋಗಿ ಕಚೇರಿಗೆ ನೀರು ನುಗ್ಗಿತು. ಕನಕಗಿರಿ, ಗಾಂಧಿನಗರದಲ್ಲಿ ಕೆಲವು ಮನೆಗಳಿಗೆ ಒಳಚರಂಡಿ ನೀರು ನುಗ್ಗಿತು. ಮಂಡಿಮೊಹಲ್ಲಾದ ಬಳಿಯೂ ವಿದ್ಯುತ್ ಕಂಬ ರಸ್ತೆ ಬದಿಗೆ ಬಿದ್ದಿತ್ತು. ರಸ್ತೆಯಲ್ಲಿ ಬಿದ್ದ ಮರಗಳ ಕೊಂಬೆಯನ್ನು ಪಾಲಿಕೆಯ ಮೂರು ಅಭಯ ತಂಡದ ಸಿಬ್ಬಂದಿ ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ