Former MLA ಮಂಜುನಾಥ್ ಪುತ್ರ ಪವನ್ ತಪಸ್ವಿ-ಅಮೂಲ್ಯರ ಆರತಕ್ಷತೆ
30 ಸಾವಿರ ಮಂದಿಗೆ ಬಾಡೂಟ, ಸಂವಿಧಾನ ಪೀಠಿಕೆ ಓದಿ ವಿಶಿಷ್ಟತೆ...
Team Udayavani, Oct 1, 2023, 9:48 PM IST
ಹುಣಸೂರು: ಹುಣಸೂರಿನ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ತಮ್ಮ ಮಗನ ಆರತಕ್ಷತೆ ಅಂಗವಾಗಿ ಸಂವಿಧಾನ ಪೀಠಿಕೆಯನ್ನು ಓದುವ ಮೂಲಕ ವಿಶಿಷ್ಟತೆ ಮೆರೆದರು.
ಭಾನುವಾರ ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ನಡೆದ ಆರತಕ್ಷತೆಯ ಔತಣಕೂಟಕ್ಕೂ ಮುನ್ನ ಸಂವಿಧಾನ ಸರ್ಕಲ್ನಲ್ಲಿ ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮಿಜಿಯವರು ಸಂವಿಧಾನ ಪೀಠಿಕೆಯನ್ನು ಭೋಧಿಸಿದರು. ನೂತನ ದಂಪತಿ ಪವನ್ ತಪಸ್ವಿ-ಅಮೂಲ್ಯ ಕೃಷ್ಣೇಗೌಡ, ಮಾಜಿ ಶಾಸಕ ಎಚ್.ಪಿ.ಮಂಜುನಾಥ್-ಪತ್ನಿ ಸುಪ್ರಿಯಾಮಂಜುನಾಥ್, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಅಮರ್ನಾಥ್-ಅಮರ್ನಾಥ್ ಮತ್ತವರ ಕುಟುಂಬದವರು, ಮುಖಂಡರಾದ ಕಲ್ಕುಣಿಕೆರಮೇಶ್, ನಾರಾಯಣ್, ಪುಟ್ಟರಾಜು, ಸೋಮನಹಳ್ಳಿಪ್ರಸನ್ನ, ಸಂತೋಷ್, ನಾಗಣ್ಣ, ಶಿವಣ್ಣ ಸೇರಿದಂತೆ ಅನೇಕರಿದ್ದರು.
30 ಸಾವಿರ ಮಂದಿಗೆ ಔತಣಕೂಟ
ಆರತಕ್ಷತೆ ಸಮಾರಂಭದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಮಂದಿ ಬಾಡೂಟ ಹಾಗೂ ಏಳು ಸಾವಿರಕ್ಕೂ ಹೆಚ್ಚು ಮಂದಿ ಸಸ್ಯಹಾರ ಊಟ ಸವಿದರು. ಮಧ್ಯಾಹ್ನ 12 ಕ್ಕೆ ಆರಂಭವಾದ ಅಚ್ಚುಕಟ್ಟಾದ ಊಟದ ವ್ಯವಸ್ಥೆ 2 ರ ವೇಳೆಗೆ ಸಾವಿರಾರು ಮಂದಿ ಒಮ್ಮೆಲೆ ಊಟದ ಹಾಲ್ ಕಡೆಗೆ ಧಾವಿಸಿದ್ದರಿಂದ ಕೆಲಹೊತ್ತು ನೂಕು ನುಗ್ಗಲು ಉಂಟಾಗಿತ್ತು. ಪೊಲೀಸರು, ಸ್ವಯಂಸೇವಕರು ನಿಯಂತ್ರಿಸಲು ಹರಸಾಹಸಪಟ್ಟರು.
ಯತೀಂದ್ರ ಸಿದ್ದರಾಮಯ್ಯ ಭೇಟಿ
ಆರತಕ್ಷತೆಗೆ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಸೇರಿದಂತೆ ವಿವಿಧ ಪಕ್ಷಗಳ ಪ್ರಮುಖರು, ನಗರ ಹಾಗೂ ತಾಲೂಕಿನ ಗ್ರಾಮಾಂತರ ಪ್ರದೇಶಗಳಿಂದ ಸಾವಿರಾರು ಮಂದಿ ಭಾಗವಹಿಸಿದ್ದರು. ಸರಿಗಮಪ ತಂಡದವರಿಂದ ಸುಗಮ ಸಂಗೀತ ಆಯೋಜಿಸಲಾಗಿತ್ತು. ಶೂನ್ಯ ತ್ಯಾಜ್ಯ ನಿರ್ವಹಣೆ ಗಮನ ಸೆಳೆದಿತ್ತು. ಸಂಜೆ ಸಚಿವ ಮಧುಬಂಗಾರಪ್ಪ ಹಾಗೂ ಹಲವು ಪ್ರಮುಖರು ಮನೆಗೆ ಭೇಟಿ ನೀಡಿ ನೂತನ ದಂಪತಿಗಳನ್ನು ಆಶೀರ್ವದಿಸಿದರು.