ಅಗತ್ಯ ವಸ್ತು ಬೆಲೆ ಏರಿಕೆ: ಜೆಡಿಎಸ್ ಪ್ರತಿಭಟನೆ
Team Udayavani, Mar 7, 2021, 3:24 PM IST
ಮೈಸೂರು: ಅಗತ್ಯ ವಸ್ತುಗಳ ಹಾಗೂ ಇಂಧನ ಬೆಲೆ ಏರಿಕೆ ಖಂಡಿಸಿ ಶಾಸಕ ಸಾ.ರಾ.ಮಹೇಶ್ ನೇತೃತ್ವದಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಗರದ ಗಾಂಧಿ ವೃತ್ತದ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ದಬ್ಟಾಳಿಕೆಯ ಮೂಲಕ ದೇಶ ಆಳುತ್ತಿದ್ದಾರೆ. ಪರಿಣಾಮ ಪ್ರತಿದಿನ ಗ್ಯಾಸ್, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇದೆ. ಇಂದು ಸಹ ಲೀಟರ್ ಪೆಟ್ರೋಲ್ ಬೆಲೆ 25 ಪೈಸೆ, ಡೀಸೆಲ್ಗೆ 35 ಪೈಸೆ ಹಾಗೂ ಗ್ಯಾಸ್ ಸಿಲಿಂಡರ್ಗೆ 50 ರೂ. ಹೆಚ್ಚಳವಾಗಿದೆ. ಇದೇ ಮೋದಿ ಅವರ ಅಚ್ಛೇ ದಿನ್ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರಲ್ ಪೆಟ್ರೋಲ್ಗೆ 45 ಡಾಲರ್ಗೆ ಇಳಿಕೆಯಾದರೂ ನಮ್ಮಲ್ಲಿ ಮಾತ್ರ ಏರಿಕೆಯಾಗುತ್ತಿದೆ. ಕೇಂದ್ರ ಸರ್ಕಾರ ಪ್ರಜಾಪ್ರಭುತ್ವವವನ್ನು ದಮನ ಮಾಡಿ, ರಾಜಪ್ರಭುತ್ವ ತರಲು ಹೊರಟಿದೆ. ಅದಾನಿ, ಅಂಬಾನಿ ಕೈಕೆಳಗೆ ದೇಶದ ಜನರು ಇರುವಂತ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಜನಸಾಮಾನ್ಯರ ಕಷ್ಟದತ್ತ ಸರ್ಕಾರ ಗಮನಹರಿಸಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಜೆಡಿಎಸ್ ವತಿಯಿಂದ ಬೀದಿಗಿಳಿದು ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ಶಾಸಕ ಅಶ್ವಿನ್ಕುಮಾರ್, ಜೆಡಿಎಸ್ ನಗರಾಧ್ಯಕ್ಷ ಕೆ.ಟಿ.ಚೆಲುವೇಗೌಡ, ಮುಖಡಂರಾದ ಕೆ.ವಿ.ಮಲ್ಲೇಶ್, ಆರ್.ಲಿಂಗಪ್ಪ, ರವಿಕುಮಾರ್, ಅಶ್ವಿನಿ ಅನಂತು, ಶೈಲೇಂದ್ರ ಸೇರಿದಂತೆ ಇತರರಿದ್ದರು.