ಸಾಲದ ಶೂಲಕ್ಕೆ ರಾಜ್ಯ ಸರ್ಕಾರ
Team Udayavani, May 4, 2018, 12:26 PM IST
ಹುಣಸೂರು: ರಾಜ್ಯದಲ್ಲಿ ಸಾಲದ ಶೂಲಕ್ಕೆ ಸಿಲುಕಿ 3 ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆ ಕುಟುಂಬಗಳು ಬೀದಿಗೆ ಬಿದ್ದಿವೆ. ಇನ್ನೂ ಸಹಕಾರಿ ಕ್ಷೇತ್ರದ ಸಾಲಮನ್ನಾ ಘೋಷಣೆ ಕಾಂಗ್ರೆಸ್ ಸರ್ಕಾರದ ಕಣ್ಣೊರೆಸುವ ತಂತ್ರವಷ್ಟೇ ಎಂದು ಜೆಡಿಎಸ್ ಅಭ್ಯರ್ಥಿ ಎಚ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಹನಗೋಡು ಹಾಗೂ ಗಾವಡಗೆರೆ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಪ್ರಚಾರ ಸಭೆ ಹಾಗೂ ರೋಡ್ ಶೋ ಮೂಲಕ ಮತಯಾಚಿಸಿದರು. ಕಟ್ಟೆಮಳಲವಾಡಿ ಹಾಗೂ ಕೊಪ್ಪಲು, ಅಗ್ರಹಾರ, ಕಿರುಸೊಡ್ಲು, ತೊಂಡಾಳು, ಉಂಡವಾಡಿ ಮತ್ತಿತರೆಡೆ ನಡೆಸಿದ ಪ್ರಚಾರದಲ್ಲಿ ಮಾತನಾಡಿದರು.
ಈ ಭಾಗದಲ್ಲಿ ಹೆಚ್ಚಾಗಿ ತಂಬಾಕು ಬೆಳೆಗಾರರಿದ್ದು, ತಾವು ಅಧಿಕಾರದಲ್ಲಿದ್ದಾಗ ಪ್ರತಿ ಮೂರು ತಿಂಗಳಿಗೊಮ್ಮ ಸಭೆ ನಡೆಸಿ ಪರಾಮರ್ಶೆ ನಡೆಸಲಾಗುತ್ತಿತ್ತು. ರಾಜ್ಯ ಸರ್ಕಾರ ತಂಬಾಕು ಖರೀದಿ ಕಂಪನಿಗಳ ಸಭೆ ನಡೆಸಿ ಸೂಕ್ತ ಬೆಲೆ ಕೊಡಿಸುವಲ್ಲಿ ವಿಫಲವಾಗಿದೆ. ಕಾಂಗ್ರೆಸ್ ದುರಾಡಳಿತದಿಂದ ಜನ ಬೇಸತ್ತಿದ್ದಾರೆಂದು ಆರೋಪಿಸಿದರು.
ಸಾಲ ಮನ್ನಾ: ಈ ನಾಡಿನ ರೈತರ ಕಣ್ಮಣಿ ಎಚ್.ಡಿ.ಕುಮಾರಸ್ವಾಮಿ ಅಧಿಕಾರಕ್ಕೆ ಬರುತ್ತಿದ್ದಂತೆ ರೈತರ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್ಗಳ ಸಾಲವನ್ನು ಸಂಪೂರ್ಣ ಮನ್ನಾ ಮಾಡಲಿದ್ದಾರೆ. ಸ್ತ್ರೀ ಶಕ್ತಿ ಸಂಘಗಳ ಸಾಲಮನ್ನಾಕ್ಕೂ ಚಿಂತನೆ ನಡೆಸಲಾಗಿದೆ. 70 ವರ್ಷ ತುಂಬಿದ ಎಲ್ಲಾ ವರ್ಗದ ಹಿರಿಯ ನಾಗರಿಕರಿಗೆ 5,000 ರೂ.
ಮಾಸಾಶನ, ರೈತರ ಎಲ್ಲ ಬ್ಯಾಂಕ್ಗಳ, ಸ್ತ್ರೀ ಶಕ್ತಿ ಸಂಘಗಳ ಸಾಲಮನ್ನಾ ಮಾಡಲಿದ್ದಾರೆ. ರೈತರು, ವಿಕಲಚೇತನರು, ಮಹಿಳೆಯರಿಗಾಗಿ ವಿಶೇಷ ಯೋಜನೆ ರೂಪಿಸಿದ್ದಾರೆ. ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಲು ಕ್ಷೇತ್ರದ ಜನತೆ ತಮ್ಮನ್ನು ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಶಾಸಕರ ಸಾಧನೆ ಶೂನ್ಯ: ತಾಲೂಕಿನ ಶಾಸಕರು ಸಹ ಯಾವುದೇ ಅಭಿವೃದ್ಧಿಯನ್ನು ಮಾಡದೆ ಕೇವಲ ಬೂಟಾಟಿಕೆ ಪ್ರದರ್ಶಿಸುತ್ತಿದ್ದಾರೆ. ರಾಜ್ಯದ ಪ್ರಮುಖ ಅಣೆಕಟ್ಟುಗಳಲ್ಲಿ ಒಂದಾದ ತಾಲೂಕಿನ ಲಕ್ಷ್ಮಣತೀರ್ಥ ನದಿಯ ಹನಗೋಡು ಅಣೆಕಟ್ಟೆ ಹಾಗೂ ನಾಲೆಗಳ ಆಧುನೀಕರಣಕ್ಕೆ ಆಯವ್ಯಯದಲ್ಲಿ 250 ಕೋಟಿ ರೂ. ಮೀಸಲಾಗಿದೆ ಎಂದು ಹತ್ತಾರು ಬಾರಿ ಹೇಳಿರುವ ಶಾಸಕ ಮಂಜುನಾಥ್, ಇತ್ತೀಚೆಗೆ ಮುಖ್ಯಮಂತ್ರಿಗಳಿಂದಲೇ ಕಾಮಗಾರಿಗೆ ಚಾಲನೆ ಕೊಡಿಸಿದ್ದರೂ ಇನ್ನೂ ಆರಂಭವಾಗಿಲ್ಲ. ಇದು ಇವರ ಆಡಳಿತ ವೈಖರಿಗೆ ಹಿಡಿದ ಕೈಗನ್ನಡಿ ಎಂದು ಆರೋಪಿಸಿದರು.
ತಾಲೂಕು ಅಧ್ಯಕ್ಷ ಹರಳಹಳ್ಳಿ ಮಾದೇಗೌಡ, ನಗರಸಭೆ ಅಧ್ಯಕ್ಷ ಶಿವಕುಮಾರ್, ಸದಸ್ಯ ಸತೀಶ್ಕುಮಾರ್, ನಿಂಗರಾಜಮಲ್ಲಾಡಿ, ಹರಿಹರ ಆನಂದಸ್ವಾಮಿ, ತೊಂಡಾಳುಶಂಕರ್, ಬಸವಲಿಂಗಯ್ಯ, ಪುಟ್ಟರಾಜು, ಚೌಡಪ್ಪ, ದೇವರಾಜ, ಶಿವು, ದೇವೇಂದ್ರ, ಪಿ.ಪುಟ್ಟರಾಜ, ಕೆ.ಆರ್.ನಸ್ರುಲ್ಲಾಖಾನ್, ಆಂಜನೇಯ ಪ್ರೇಮಕುಮಾರ್, ಗೋಪಿ, ಕೃಷ್ಣ, ಗಣೇಶ, ಸ್ವಾಮಿಶೆಟ್ಟಿ, ಮುರುಗೇಶ್, ಸಂತೋಷ, ಷಫೀಕ್, ರಶೀದ್, ಚಂದ್ರ ಇದ್ದರು.