ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರಕ್ಕೆ ಕ್ರಮ
Team Udayavani, Aug 12, 2018, 11:21 AM IST
ಮೈಸೂರು: ಮಳೆ ಹಾನಿ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತುರ್ತು ಪರಿಹಾರ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸ್ವತಂತ್ರ ಅಧಿಕಾರ ನೀಡಲಾಗಿದ್ದು, ಪರಿಹಾರ ಕಾರ್ಯಕ್ಕೆ ಹಣದ ಕೊರತೆ ಇಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಕೆಲವು ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ, ಅನೇಕ ಸೇತುವೆಗಳು ಮುಳುಗಡೆಯಾಗಿವೆ. ಮನೆಗಳಿಗೆ ನೀರು ನುಗ್ಗಿ ಹಾನಿಗೀಡಾಗಿರುವ ಬಗ್ಗೆ ಅಧಿಕಾರಿಗಳಿಂದ ವರದಿ ಪಡೆದುಕೊಂಡಿದ್ದೇನೆ.
ಈ ಸಮಸ್ಯೆಯನ್ನು ಕೂಡಲೇ ಪರಿಹರಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಇದ್ದು ಪರಿಸ್ಥಿತಿ ನಿಭಾಯಿಸುವ ಜೊತೆಗೆ ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ಕೊಡಲಾಗಿದೆ ಎಂದು ತಿಳಿಸಿದರು.
ಈ ಸಂಬಂಧ ಜಿಲ್ಲಾಧಿಕಾರಿಗಳ ಖಾತೆಗೆ ಈಗಾಗಲೇ ಅನುದಾನ ಬಿಡುಗಡೆ ಮಾಡಲಾಗಿದೆ. ಸರ್ಕಾರದ ಖಜಾನೆಯಲ್ಲಿ ಹಣದ ಕೊರತೆ ಇಲ್ಲ. ಕೊಡಗು ಜಿÇÉೆಯಲ್ಲಿ ಈ ಹಿಂದೆ ಪ್ರವಾಹ ಪರಿಸ್ಥಿತಿ ಉಂಟಾದಾಗ 100ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ, ಅಲ್ಲಿ ಇನ್ನೂ ಮಳೆ ಬರುತ್ತಿರುವುದರಿಂದ ಪರಿಹಾರ ಕಾಮಗಾರಿ ಆರಂಭಿಸಲು ಸಾಧ್ಯವಾಗಿಲ್ಲ ಎಂದರು.
ಸಮಯ ಕೊಡಿ: ಸಾಲಮನ್ನಾ ವಿಚಾರದಲ್ಲಿ ಸ್ವಲ್ಪ ಸಮಯಾವಕಾಶ ಕೊಟ್ಟರೆ ಎಲ್ಲವನ್ನೂ ನಿವಾರಿಸುತ್ತೇನೆ. ಈ ವಿಚಾರದಲ್ಲಿ ರೈತರು ಉತ್ಸಾಹ ಕಳೆದುಕೊಳ್ಳದೆ ತಾಳ್ಮೆಯಿಂದಿರಬೇಕು. ರೈತರ ಸಾಲಮನ್ನಾ ವಿಚಾರದಲ್ಲಿ ಹಲವರು ಗೊಂದಲ ಉಂಟುಮಾಡುತ್ತಿದ್ದಾರೆ. ರೈತರು ಇಂತಹ ಗೊಂದಲದ ಮಾತಿಗೆ ಕಿವಿಗೊಡದೆ ತಾಳ್ಮೆಯಿಂದ ಇದ್ದು ನನಗೆ ಒಂದಷ್ಟು ಸಮಯಕೊಡಿ ನಾನೇ ಎಲ್ಲವನ್ನೂ ನಿವಾರಿಸುತ್ತೇನೆ ಎಂದು ಮನವಿ ಮಾಡಿದರು.
ಬಿಜೆಪಿಗೆ ಗೌರವವಿಲ್ಲ: ಶ್ರೀರಂಗಪಟ್ಟಣ ತಾಲೂಕಿನ ಸೀತಾಪುರ ಗ್ರಾಮದಲ್ಲಿ ನಾನು ಭತ್ತದ ನಾಟಿ ಮಾಡುವ ವಿಚಾರಕ್ಕೆ ಟೀಕೆ ಮಾಡಿರುವ ಬಿಜೆಪಿ ನಾಯಕರಿಗೆ ರೈತರ ಬಗ್ಗೆ ಗೌರವ ಇಲ್ಲ. ರಾಜಕೀಯ ಉದ್ದೇಶಕ್ಕಾಗಿ ನಾನೇನು ನಾಟಿ ಮಾಡಲು ಹೊರಟಿಲ್ಲ. ರೈತರಲ್ಲಿ ಆತ್ಮಸ್ಥೆçರ್ಯ ತುಂಬುವುದು ನನ್ನ ಉದ್ದೇಶ ಎಂದು ಹೇಳಿದರು.
ಇಸ್ರೇಲ್ ಮಾದರಿ ಕೃಷಿ ಪದ್ಧತಿ ಅನುಷ್ಠಾನಗೊಳಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಜೊತೆಗೆ ಆಂಧ್ರಪ್ರದೇಶದಲ್ಲಿ ಅಜೀಂ ಪ್ರೇಮ್ ಜೀ ಟ್ರಸ್ಟ್ ಕೈಗೊಂಡಿರುವ ಶೂನ್ಯಬಂಡವಾಳ ಕೃಷಿ ಮಾದರಿಯ ಬಗ್ಗೆಯೂ ಅಧ್ಯಯನ ನಡೆಸಲಿದ್ದೇನೆ. ಈ ಸಂಬಂಧ ಈಗಾಗಲೇ ಅಜೀಂಪ್ರೇಮ್ಜೀ ಅವರೂ ಸಹ ಪತ್ರ ಬರೆದಿದ್ದಾರೆ ಎಂದು ತಿಳಿಸಿದರು.
ಆಡಳಿತದ ಭಾಗ: ಎಲ್ಲರ ಕಾಲದಲ್ಲೂ, ಎಲ್ಲ ಸರ್ಕಾರದಲ್ಲೂ ಅಧಿಕಾರಿಗಳ ವರ್ಗಾವಣೆಯಾಗಿದೆ. ವರ್ಗಾವಣೆ ಆಡಳಿತ ಪ್ರಕ್ರಿಯೆಯ ಒಂದು ಭಾಗವಾಗಿದೆ. ವರ್ಗಾವಣೆ ದಂಧೆ ಎಂದಿರುವ ಬಿಜೆಪಿ ನಾಯಕರು ಈ ಹಿಂದೆ ಐದು ವರ್ಷ ಆಡಳಿತದ ನಡೆಸಿದಾಗ ಯಾವ ಮಾನದಂಡ ಅನುಸರಿಸಿ ವರ್ಗಾವಣೆ ಮಾಡಿದ್ದಾರೆ. ಬಿಜೆಪಿ ನಾಯಕರು ಈ ವಿಚಾರದಲ್ಲಿ ಹಿಟ್ ಅಂಡ್ ರನ್ ಕೇಸಿನಂತೆ ವರ್ತಿಸುತ್ತಿದ್ದಾರೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಎರಡೂ ಪಕ್ಷಗಳು ಸೌಹಾರ್ದಯುತವಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಎದುರಿಸುವ ಕುರಿತು ಪಕ್ಷದ ಹಿರಿಯ ನಾಯಕರು ಹೇಳಿದ್ದಾರೆ. ಮತ್ತೂಮ್ಮೆ ಪಕ್ಷದ ನಾಯಕರ ಜೊತೆಗೆ ಚರ್ಚಿಸಿದ ಬಳಿಕ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.