ಹುಣಸೂರು: ಮತ್ತೆ ಕಾಣಿಸಿಕೊಂಡ ಹುಲಿ; ಜಾನುವಾರುಗಳ ಮೇಲೆ ದಾಳಿ; ಗ್ರಾಮಸ್ಥರಲ್ಲಿ ಆತಂಕ
Team Udayavani, Nov 17, 2020, 9:39 PM IST
ಹುಣಸೂರು: ನಾಗರಹೊಳೆ ಉದ್ಯಾನದಂಚಿನಲ್ಲಿ ಹುಲಿಯ ಉಪಟಳ ಮುಂದುವರೆದಿದ್ದು. ಹಾಡುಹಗಲೇ ಎಮ್ಮೆಗಳ ಮೇಲೆರಗಿದ ಹುಲಿಯು ಮೂರು ಎಮ್ಮೆಗಳನ್ನು ಗಾಯಗೊಳಿಸಿರುವ ಘಟನೆ ನೇರಳಕುಪ್ಪೆ ಹಾಡಿಯ ಬಳಿ ನಡೆದಿದೆ.
ಎಮ್ಮೆಗಳನ್ನು ಮೇಯಿಸುತ್ತಿದ್ದ ದನಗಾಹಿ ಮಾಕಮ್ಮ ಹುಲಿ ಕಂಡು ಕಿರುಚಿ ಹಾಡಿಯತ್ತ ಓಡಿ ಹೋಗಿದ್ದರಿಂದ ಪಾರಾಗಿದ್ದಾರೆ. ಹಾಡಿಯ ಮಂದಿಯ ಕಿರುಚಾಟದಿಂದ ಎಮ್ಮೆಗಳನ್ನು ಬಿಟ್ಟ ಹುಲಿ ಅರಣ್ಉದೊಳಕ್ಕೆ ಸೇರಿಕೊಂಡಿದೆ. ಗಾಯಗೊಂಡಿರುವ ಎಮ್ಮೆಗಳಿಗೆ ಹನಗೋಡು ಪಶು ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ವಿಷಯ ತಿಳಿದ ಆರಣ್ಯ ಇಲಾಖೆಯ ಹುಣಸೂರು ವನ್ಯಜೀವಿ ವಿಭಾಗದ ಡಿ.ಆರ್.ಎಫ್.ಓ.ಸಿದ್ದರಾಜು ಭೇಟಿ ನೀಡಿ ಪರಿಶೀಲಿಸಿದರು.
ಹುಲಿ ಸೆರೆಗೆ ಗ್ರಾಮಸ್ಥರ ಆಗ್ರಹ;
ಕಳೆದ ಆರು ತಿಂಗಳ ಹಿಂದೆ ನೇರಳಕುಪ್ಪೆಯ ಕುರಿಗಾಹಿ ಜನದೀಶನನ್ನು ಕೊಂದಿದ್ದ ಹುಲಿ ರುಂಡ ಮಾತ್ರ ಬಿಟ್ಟು ಹೋಗಿತ್ತು. ದಾಳಿ ನಡೆದ ಒಂದು ದಿನದ ಅಂತರದಲ್ಲೇ ಹುಲಿ ಸೆರೆಯಾಗಿತ್ತು. ವಾರದ ಹಿಂದೆ ನೇರಳಕುಪ್ಪೆ ಸಮೀಪದ ಉಡುವೆ ಪುರದ ದನಗಾಹಿ ಮೇಲೆರಗಿದ್ದ ಹುಲಿ ದನಗಾಹಿಯನ್ನು ಗಾಯಗೊಳಿಸಿತ್ತು. ಇದೀಗ ಮತ್ತೆ ತನ್ನ ಇರುವಿಕೆಯನ್ನು ತಿಳಿಸಲು ಎಮ್ಮೆ ಮೇಲೆ ದಾಳಿನಡೆಸಿದೆ.
ಪ್ರಾಣ ಹಾನಿಗೂ ಮುನ್ನ ಹುಲಿ ಸೆರೆ ಹಿಡಿಯಬೇಕು. ವನ್ಯಜೀವಿಗಳ ದಾಳಿಗೊಳಗಾದ ಜನ- ಜಾನುವಾರುಗಳಿಗೆ ಸೂಕ್ತ ಪರಿಹಾರ ತಕ್ಷಣ ಬಿಡುಗಡೆ ಮಾಡುವಂತೆ ಜಿಲ್ಲಾ ಎಸ್.ಸಿ.ಎಸ್.ಟಿ ಹಿತರಕ್ಷಣಾ ಸಮಿತಿ ಸದಸ್ಯ ನೇರಳಕುಪ್ಪೆ ಮಹದೇವ್ ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಅರಣ್ಯಾಧಿಕಾರಿಗಳ ಸ್ಪಷ್ಟನೆ:
ಜನ ಮತ್ತು ಜಾನುವಾರುಗಳ ಮೇಲೆ ಹುಲಿ ದಾಳು ನಡೆಸಿದೆ. ಆದರೆ ಹುಲಿಯು ಅರಣ್ಯದಿಂದ ಹೊರ ಬಂದಿಲ್ಲ. ಬದಲಿಗೆ ಎಷ್ಟೇ ಮನವಿ ಮಾಡಿದರೂ ಕಾಡಂಚಿನ ಗ್ರಾಮದವರು ಜಾನುವಾರುಗಳನ್ನು ಅರಣ್ಯದೊಳಕ್ಕೆ ಬಿಟ್ಟು ಮೇಯಿಸುತ್ತಿದ್ದು. ಈವೇಳೆ ದಾಳಿನಡೆಸುತ್ತಿದೆ. ಗ್ರಾಮಸ್ಥರು ಅರಣ್ಯ ಇಲಾಖೆ ಸೂಚನೆಗಳನ್ನು ಪಾಲಿಸುವಂತೆ ಎಸಿಎಫ್ ಸತೀಶ್ ಮನವಿ ಮಾಡಿದ್ದಾರೆ.