ಹನಗೋಡು ವ್ಯಾಪ್ತಿಯಲ್ಲಿ ಮುಂದುವರೆದ ವ್ಯಾಘ್ರನ ಉಪಟಳ, ಹಸು ಸಾವು
Team Udayavani, Oct 31, 2021, 1:30 PM IST
ಹುಣಸೂರು: ನಾಗರಹೊಳೆ ಉದ್ಯಾನದಂಚಲ್ಲಿ ಹಾಡು ಹಗಲು ವೇಳೆಯೇ ಹುಲಿ ದಾಳಿಗೆ ತುಂಬು ಗಬ್ಬದ ಹಸುವೊಂದು ಬಲಿಯಾಗಿದೆ.
ತಾಲೂಕಿನ ಹನಗೋಡು ಹೋಬಳಿಯ ನೇರಳಕುಪ್ಪೆ ಗ್ರಾ.ಪಂ.ವ್ಯಾಪ್ತಿಯ ಕೆ.ಜಿ.ಹಬ್ಬನಕುಪ್ಪೆಯ ಸಪೋಟ ತೋಟದಲ್ಲಿ ಸಂಜೆ ಘಟನೆ ನಡೆದಿದ್ದು, ನೇರಳಕುಪ್ಪೆ ಗ್ರಾ.ಪಂ.ಅಧ್ಯಕ್ಷ ಕೆ.ಯು.ಉದಯನ್ರಿಗೆ ಸೇರಿದ ಹಸು ಇದಾಗಿದ್ದು, ಸುಮಾರು 50 ಸಾವಿರ ರೂ ಬೆಲೆ ಬಾಳಲಿದೆ.
ತೋಟದಲ್ಲಿ ಮೇಯಲು ಬಿಟ್ಟಿದ್ದ ವೇಳೆ ಸಂಜೆ 5.30ರಲ್ಲಿ ಪಕ್ಕದ ಅರಣ್ಯ ಪ್ರದೇಶದಿಂದ ಬಂದ ಹುಲಿಯು ಹಸುವಿನ ಮೇಲೆ ಎರಗಿ ಸಾಯಿಸಿದೆ. ಈ ವೇಳೆ ಹುಲಿ ದಾಳಿಯನ್ನು ಕಂಡ ಅಕ್ಕ ಪಕ್ಕದ ರೈತರು ಕೂಗಿ ಕೊಳ್ಳುತ್ತಿದ್ದಂತೆ ಸ್ಥಳದಿಂದ ಹುಲಿ ಪರಾರಿಯಾಗಿ ಪಕ್ಕದ ತರಗನ್ ಎಸ್ಟೇಟ್ಗೆ ಮೂಲಕ ಉದ್ಯಾನ ಸೇರಿಕೊಂಡಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹುಣಸೂರು ವಲಯದ ಡಿಆರ್ ಎಫ್ಓ ವೀರಭದ್ರ ಹಾಗೂ ಸಿಬ್ಬಂದಿ ಬೇಟಿ ನೀಡಿ ಸ್ಥಳದಲ್ಲಿ ಟ್ರ್ಯಾಯಪಿಂಗ್ ಕ್ಯಾಮರಾ ಇಟ್ಟಿದ್ದರು. ಆದರೆ ಹುಲಿ ಕ್ಯಾಮರಾಕ್ಕೆ ಬಿದ್ದಿಲ್ಲಾ, ಶನಿವಾರ ಪಶು ವೈದ್ಯ ಡಾ.ದರ್ಶನ್ ಶವ ಪರೀಕ್ಷೆ ನಡೆಸಿದರು.
ಹುಲಿ ಸೆರೆ ಹಿಡಿಯಲು ಒತ್ತಾಯ;
ನಾಗರಹೊಳೆ ಉದ್ಯಾನದಂಚಿನ ನೇರಳಕುಪ್ಪೆ ಗ್ರಾ.ಪಂ.ವ್ಯಾಪ್ತಿಯ ಗ್ರಾಮಗಳಲ್ಲಿ ಆಗಾಗ್ಗೆ ಹುಲಿಗಳು ಕಾಣಿಸಿಕೊಳ್ಳುತ್ತಿವೆ. ವರ್ಷದಿಂದೀಚೆಗೆ ಇಬ್ಬರು ಹುಲಿಗೆ ಬಲಿಯಾಗಿದ್ದಾರೆ. ಅನೇಕ ಜಾನುವಾರುಗಳನ್ನು ಬಲಿ ಪಡೆದಿವೆ. ಅರಣ್ಯ ಇಲಾಖೆಯು ತಕ್ಷಣವೇ ಹುಲಿ ಸೆರೆ ಹಿಡಿಯಲು ಕ್ರಮವಹಿಸಬೇಕು. ಜೊತೆಗೆ ಸೂಕ್ತ ಪರಿಹಾರ ನೀಡಬೇಕೆಂದು ತಾ.ಪಂ.ಮಾಜಿ ಸದಸ್ಯ ಗಣಪತಿ ಹಾಗೂ ಗ್ರಾಮಸ್ಥರು ಮನವಿ ಮಾಡಿದ್ದಾರೆ.