ಒಂದೇ ದಿನ 48 ಹೊಸ ಪಾಸಿಟಿವ್ ಪ್ರಕರಣ ಪತ್ತೆ
Team Udayavani, Jul 13, 2020, 2:59 PM IST
ರಾಯಚೂರು: ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ನಿರೀಕ್ಷೆ ಮೀರಿ ಹೆಚ್ಚಾಗುತ್ತಿದ್ದು, ರವಿವಾರ ಒಂದೇ ದಿನ 48 ಹೊಸ ಪ್ರಕರಣ ದೃಢಪಟ್ಟಿವೆ. ಇವುಗಳಲ್ಲಿ ಸಂಪರ್ಕದಿಂದ ಹರಡಿದ್ದೇ ಹೆಚ್ಚಾಗಿದ್ದು, ಜಿಲ್ಲಾಡಳಿತಕ್ಕೆ ಹೊಸ ಸವಾಲಾಗಿ ಪರಿಣಮಿಸಿದೆ.
ಮುಂಬೈ ನಂಟಿನ ಬಳಿಕ ಜಿಲ್ಲೆಯಲ್ಲಿ ಕೋವಿಡ್-19 ಬಹುತೇಕ ಇಳಿಮುಖ ಕಂಡಿತ್ತು. ಒಂದರ್ಥದಲ್ಲಿ ಕೋವಿಡ್ ಮುಕ್ತ ಜಿಲ್ಲೆಯಾಗುವ ಅಂಚಿಗೆ ತಲುಪಿತ್ತು. ಆದರೆ, ಸರ್ಕಾರ ಅಂತರ ಜಿಲ್ಲೆಗಳ ಓಡಾಟಕ್ಕೆ ಅನುವು ಮಾಡಿದ ಬಳಿಕ ಕ್ರಮೇಣ ಪಾಸಿಟಿವ್ ಸಂಖ್ಯೆ ಹೆಚ್ಚುತ್ತ ಸಾಗಿದೆ. ಈಗ ದೃಢಪಟ್ಟ 48 ಪ್ರಕರಣಗಳಲ್ಲಿ 25ಕ್ಕೂ ಅಧಿಕ ಪ್ರಕರಣಗಳು ಪ್ರಾಥಮಿಕ ಸಂಪರ್ಕದಿಂದ ಬಂದಿವೆ. ಇನ್ನೂ ಹಲವು ಪ್ರಕರಣಗಳ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಅದರಲ್ಲೂ ರಾಯಚೂರು ಮತ್ತು ಸಿಂಧನೂರು ನಗರ ಪ್ರದೇಶದಲ್ಲಿಯೇ ವ್ಯಾಪಕವಾಗಿ ವೈರಸ್ ಹರಡುತ್ತಿರುವುದು ಆತಂಕ ಸೃಷ್ಟಿಸಿದೆ.
ರಾಯಚೂರಿನ 13 ಪ್ರಕರಣಗಳಲ್ಲಿ 12 ನಗರ ವಿವಿಧ ಬಡಾವಣೆಗಳಲ್ಲಿ ದೃಢಪಟ್ಟಿವೆ. ಎರಡು ಕುಡೂರು ಗ್ರಾಮ, ಒಂದು ಬೋಳಮಾನದೊಡ್ಡಿಯಲ್ಲಿ ದೃಢಪಟ್ಟಿದೆ. ಇನ್ನೂ ಸಿಂಧನೂರು ನಗರ ಸೇರಿ ದಿದ್ದಿಗಿ ಗ್ರಾಮ, ಹಂಚಿನಾಳ ಕ್ಯಾಂಪ್ ಸೇರಿ ಇತರೆಡೆ 15 ಪ್ರಕರಣ ದೃಢಪಟ್ಟಿವೆ. ಉಳಿದಂತೆ ಸಿರವಾರ, ಲಿಂಗಸುಗೂರು, ಮಾನ್ವಿ ತಾಲೂಕಿನಲ್ಲೂ ಪಾಸಿಟಿವ್ ಪತ್ತೆಯಾಗಿದೆ. ಅದರಲ್ಲಿ ಐದು ಐಎಲ್ಐ ಹಾಗೂ ಒಂದು ಸಾರಿ ಪ್ರಕರಣದಡಿ ಸೋಂಕಿತರನ್ನು ಐಸೋಲೇಶನ್ಗೆ ದಾಖಲಿಸಲಾಗಿದೆ.