ಅನ್ನದಾನ ದೇವರ ಪಟ್ಟಾಧಿಕಾರ: ಶ್ರೀಗಳ ಪಾದಯಾತ್ರೆ
Team Udayavani, Jan 4, 2022, 3:27 PM IST
ಸಿರವಾರ: ಚೀಕಲಪರ್ವಿಯ ಮಠದಲ್ಲಿ ಫೆ.7ರಂದು ನಡೆಯುವ ಅನ್ನದಾನ ದೇವರ ಪಟ್ಟಾಧಿಕಾರ ಕಾರ್ಯಕ್ರಮದ ನಿಮಿತ್ತ ವಿವಿಧ ಪೂಜ್ಯರಿಂದ ಧರ್ಮ ಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಯಿತು.
ಬಯಲು ಆಂಜಿನೇಯ್ಯ ದೇವಸ್ಥಾನದಿಂದ ಈಶ್ವರ ದೇವಸ್ಥಾನದವರೆಗೆ ಪಾದಯಾತ್ರೆ ಜರುಗಿತು. ನಂತರ ನಡೆದ ಕಾರ್ಯಕ್ರಮದಲ್ಲಿ ಚೀಕಲಪರ್ವಿಯ ಪ್ರಸ್ತುತ ಪೀಠಾಧಿಪತಿಗಳಾದ ಅಭಿನವ ರುದ್ರಮುನಿ ಸ್ವಾಮೀಜಿ ಮಾತನಾಡಿ, ಮಠ-ಮಾನ್ಯಗಳು ಧರ್ಮ-ಜಾಗೃತಿ, ತ್ರಿವಿಧ ದಾಸೋಹ, ಜ್ಞಾನ ದಾಸೋಹ ಮಾಡುವುದರ ಮೂಲಕ ಸಮಾಜದಲ್ಲಿ ಒಳ್ಳೆಯ ಸಂಸ್ಕಾರ, ಸಂಸ್ಕೃತಿ ಬಿತ್ತುತ್ತಿವೆ. ಅನ್ನದಾನೇಶ್ವರ ಶ್ರೀಗಳ ಪಟ್ಟಾಧಿಕಾರದ ಅಂಗವಾಗಿ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವ ಕಾರ್ಯ ಹಮ್ಮಿಕೊಂಡಿದ್ದು, ಭಕ್ತಾದಿಗಳ ಹಿತ ಕಾಪಾಡುವುದು ನಮ್ಮ ಉದ್ದೇಶವಾಗಿದೆ ಎಂದರು.
ಕಲಬುರಗಿಯ ಮಾದನ ಹಿಪ್ಪರಗಿ ವಿರಕ್ತಮಠದ ಶಿವಲಿಂಗ ಸ್ವಾಮೀಜಿ ಮಾತನಾಡಿ, ಶ್ರೀಗಳ ಪಟ್ಟಾಧಿಕಾರದ ಅಂಗವಾಗಿ ಜ.3ರಿಂದ ಫೆ.5ರ ವರೆಗೆ ಹಾನಗಲ್ ಕುಮಾರೇಶ್ವರ ಪುರಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಫೆ.5ರ ಸಾಯಂಕಾಲ ಪುರಾಣ ಮಂಗಲ ಹಾಗೂ ರೈತ ಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು, ಫೆ.6ರಂದು 5001 ಮಹಿಳೆಯರಿಗೆ ಮುತ್ತೈದೆಯರಿಗೆ ಉಡಿ ತುಂಬುವುದು ಹಾಗೂ ಫೆ.7ರಂದು ನಾಡಿನ ವಿವಿಧ ಮಠಾಧೀಶರು, ರಾಜಕೀಯ ಮುಖಂಡರ ನೇತೃತ್ವದಲ್ಲಿ ಪಟ್ಟಾಧಿಕಾರ ಕಾರ್ಯಕ್ರಮ ಜರುಗಲಿದೆ ಎಂದರು.
ಅಮೀನಗಡದ ಶಂಕರ ರಾಜೇಂದ್ರ ಸ್ವಾಮೀಜಿ, ಯದ್ದಲದೊಡ್ಡಿಯ ಮಹಾಲಿಂಗ ಸ್ವಾಮೀಜಿ, ಕೇಡಗಿಯ ಶಿವಬಸವ ಸ್ವಾಮೀಜಿ, ಅರಳಹಳ್ಳಿಯ ಶರಣಬಸವ ದೇವರು, ಗದ್ದಿಗೆಮಠದ ಚನ್ನವೀರೇಶ್ವರ ದೇವರು ಹಾಗೂ ಭಕ್ತಾದಿಗಳು ಇದ್ದರು.