ಆಸ್ಪತ್ರೆಗಳಲ್ಲಿ ವೈದ್ಯಕೀಯ ತ್ಯಾಜ ವಿಲೇವಾರಿ ಮಾಡಿ
Team Udayavani, Aug 5, 2020, 2:51 PM IST
ರಾಯಚೂರು: ನಗರದ ಸರ್ಕಾರಿ, ಖಾಸಗಿ ಆಸ್ಪತ್ರೆ, ಕ್ಲಿನಿಕ್ ಹಾಗೂ ನರ್ಸಿಂಗ್ ಹೋಂಗಳಲ್ಲಿ ಪ್ರತಿದಿನವೂ ವೈದ್ಯಕೀಯ ಘನತ್ಯಾಜ ವಿಲೇವಾರಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಸೂಚಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ವೈದ್ಯಕೀಯ ಘನತ್ಯಾಜ ವಸ್ತುಗಳನ್ನು ವಿಲೇವಾರಿ ಮಾಡುವ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಘನತ್ಯಾಜ ವಸ್ತುಗಳ ವಿಲೇವಾರಿಗೆ ಪ್ರತಿ ಆಸ್ಪತ್ರೆಯ ಹಾಸಿಗೆಗೆ ದರ ನಿಗದಿಪಡಿಸಿ ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಕೋವಿಡ್-19 ಸಾಂಕ್ರಾಮಿಕ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಆಸ್ಪತ್ರೆ ಮತ್ತು ಕ್ಲಿನಿಕ್ ಹಾಗೂ ನರ್ಸಿಂಗ್ ಹೋಂಗಳಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದರು.
ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ 500ಕ್ಕೂ ಅಧಿಕ ಹಾಸಿಗೆ ವ್ಯವಸ್ಥೆ ಇರುತ್ತದೆ. ಆದರೆ, ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್, ನರ್ಸಿಂಗ್ ಹೋಂ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಡಿಮೆ ಹಾಸಿಗೆಗಳು ಇರುತ್ತದೆ. ಈ ನಿಟ್ಟಿನಲ್ಲಿ ಪ್ರತಿನಿತ್ಯ ಆಸ್ಪತ್ರೆಗಳನ್ನು ಸ್ವಚ್ಛವಾಗಿಡಬೇಕು ಎಂದರು. ಡಾ.ರಾಮಕೃಷ್ಣ, ನಗರಸಭೆ ಪೌರಾಯುಕ್ತ ಡಾ.ದೇವಾನಂದ ದೊಡ್ಡಮನಿ, ಡಾ.ಲಕ್ಷ್ಮೀಬಾಯಿ, ಡಾ.ಮಹಾಲಿಂಗಪ್ಪ, ಡಾ.ಶೈಲೇಶ್, ಡಾ.ಎಸ್. ಎಸ್.ಪಾಟೀಲ್ ಹಾಗೂ ಮತ್ತಿತರರಿದ್ದರು.