ಮಗಳಿಗೆ ವಿಷವುಣಿಸಿ ನೇಣಿಗೆ ಶರಣಾದ ತಂದೆ
Team Udayavani, Mar 26, 2018, 8:05 AM IST
ಬಳಗಾನೂರು (ರಾಯಚೂರು): ಕಿಡಿಗೇಡಿಗಳು ಫೇಸ್ಬುಕ್ಗೆ ಮಗಳ ಫೋಟೋ ಅಪ್ಲೋಡ್ ಮಾಡಿದ್ದಲ್ಲದೇ ಅದನ್ನು ಪ್ರಶ್ನಿಸಿದ್ದಕ್ಕೆ ಕಿಡಿಗೇಡಿಗಳ ಕಡೆಯವರು ಯುವತಿಯ ಸಂಬಂಧಿಕರ ಮೇಲೆ ಹಲ್ಲೆ ನಡೆಸಿದ್ದರಿಂದ ನೊಂದ ತಂದೆ ತನ್ನ ಮಗಳಿಗೆ ವಿಷವುಣಿಸಿ ನಂತರ ತಾನೂ ನೇಣಿಗೆ ಶರಣಾದ ಘಟನೆ ಮಸ್ಕಿ ತಾಲೂಕಿನ ಗೌಡನಬಾವಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಗೌಡನಬಾವಿ ಗ್ರಾಮದ ರಾಮನಗೌಡ (40), ಮತ್ತು ಪುತ್ರಿ ಬಸವಲಿಂಗಮ್ಮ (17)ಮೃತ ದುರ್ದೈವಿಗಳು. ಫೆ.25ರಂದು ಸಮೀಪದ ಗೌಡನಬಾವಿ ಶ್ರೀ ಕಟ್ಟೆ ಬಸವೇಶ್ವರ ಜಾತ್ರೆ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವತಿಯ ಕುಂಭ ಹೊತ್ತಿದ್ದ ಫೋಟೋ ತೆಗೆದ ಗ್ರಾಮದ ಕುರುಬ ಸಮಾಜದ ಯುವಕರು ಫೇಸ್ಬುಕ್ಗೆ ಅಪ್ಲೋಡ್ ಮಾಡಿದ್ದರು. ಇದನ್ನು ಪ್ರಶ್ನಿಸಿದ ಯುವತಿಯ ಸಂಬಂಧಿಕರು ಹಾಗೂ ನಾಯಕ ಸಮುದಾಯದವರ ಮೇಲೆ ಹಲ್ಲೆ ಮಾಡಲಾಗಿತ್ತು. ಬಳಿಕ, ಹಿರಿಯರ ಸಮ್ಮುಖದಲ್ಲಿ ಸಂಧಾನ ಮಾಡಲಾಗಿತ್ತು. ಆದರೆ,ಮಾ.24ರಂದು ಪಂಚಾಯಿತಿ ಆವರಣದಲ್ಲಿ ಮತ್ತೆ ಯುವತಿಯ ಸಂಬಂಧಿಕರ ಮೇಲೆ ಹಲ್ಲೆ ನಡೆದಿತ್ತು. ಈ ಎಲ್ಲ ಘಟನೆಯಿಂದ ನೊಂದ ರಾಮನಗೌಡ ಭಾನುವಾರ ಮಗಳಿಗೆ ವಿಷವುಣಿಸಿ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್ನೋಟ್ನಲ್ಲಿ ಘಟನೆಗೆ ಕಾರಣರಾದ 12 ಜನರ ಹೆಸರು ನಮೂದಿಸಿದ್ದಾರೆ ಎನ್ನಲಾಗಿದೆ. ಈ 12 ಜನ ಸೇರಿ ಒಟ್ಟು 28 ಜನರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.