ಮೂಲ ಸೌಲಭ್ಯ ಒದಗಿಸಲು ಒತ್ತಾಯ
Team Udayavani, Feb 12, 2019, 10:52 AM IST
ದೇವದುರ್ಗ: ಮೂಲ ಸೌಲಭ್ಯ ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಗಬ್ಬೂರು ನಾಡಕಚೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮಂಜುನಾಥ ಅವರಿಗೆ ಮನವಿ ಸಲ್ಲಿಸಿದರು.
ಗಬ್ಬೂರು ಗ್ರಾಮಕ್ಕೆ ಸರ್ಕಾರಿ ಕನ್ಯಾ ಪ್ರೌಢಶಾಲೆ ಮಂಜೂರಿ ಮಾಡಬೇಕು. ಮೊರಾರ್ಜಿ ದೇಸಾಯಿ ಶಾಲಾ ಕಟ್ಟಡ ಕಾಮಗಾರಿ ಕೂಡಲೇ ಪ್ರಾರಂಭಿಸಬೇಕು. ಹೊನ್ನಟಗಿ ಗ್ರಾಮದ ನಿವೇಶನ ರಹಿತ ಫಲಾನುಭವಿಗಳನ್ನು ಆಯ್ಕೆ ಮಾಡಿ ಹಕ್ಕುಪತ್ರ ನೀಡಬೇಕು. ಎಸ್ಸಿ ಕಾಲೋನಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು. ಗಬ್ಬೂರಿನಿಂದ ಮದರಕಲ್ಗೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರೀಕರಣ ಮಾಡಬೇಕು. ಗಬ್ಬೂರು ಹೋಬಳಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ಕೂಲಿ ಪಾವತಿಸಬೇಕು. ಗಬ್ಬೂರು ಗ್ರಾಮದಲ್ಲಿ ಪ್ರಮುಖ ರಸ್ತೆ ಅಗಲೀಕರಣ ಮಾಡಿ ಸಿಸಿ ರಸ್ತೆ, ಚರಂಡಿ ನಿರ್ಮಿಸಬೇಕು. ಅಕ್ರಮ ಮದ್ಯ ಮಾರಾಟ ತಡೆಯಬೇಕು. ಎಸ್ಸಿ ಜನಾಂಗಕ್ಕೆ ರುದ್ರಭೂಮಿ ಮಂಜೂರು ಮಾಡಬೇಕು. ಗಬ್ಬೂರು, ಹೇಮನಾಳ, ಮಲದಕಲ್, ರಾಮದುರ್ಗ, ಶಾವಂತಗೇರಾ, ಹಿರೇಬೂದೂರು ಹಾಗೂ ನಾಗಡದಿನ್ನಿ, ಗ್ರಾಪಂ ವ್ಯಾಪ್ತಿಯ ಸರಕಾರಿ ಶಾಲೆಗಳಲ್ಲಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಮಲದಕಲ್ ಗ್ರಾಪಂ ವ್ಯಾಪ್ತಿಯ ಕರಡಿಗುಡ್ಡ ಶಾಲೆಗೆ ಜಾಗೆ ಲಭ್ಯವಿದ್ದು, ಕಟ್ಟಡ ನಿರ್ಮಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಮಂಜುನಾಥ ಮನವಿ ಸ್ವೀಕರಿಸಿ, ಅಧಿಕಾರಿಗಳ ಸಭೆ ನಡೆಸಿ ಬೇಡಿಕೆ ಈಡೇರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಮೇಲಪ್ಪ ಭಾವಿಮನಿ, ಶಾಂತಕುಮಾರ ಹೊನ್ನಟಗಿ, ಹೇಮರಾಜ ಅಸ್ಕಿಹಾಳ, ರವಿಕುಮಾರ, ರಾಜಪ್ಪ ಸಿರವಾರಕರ್, ಬಸವರಾಜ, ಸೂರಿ, ಮರಿಯಪ್ಪ ಮಲದಕಲ್, ಬಸವರಾಜ, ಜಾಕೋಬ್, ಪ್ರಭು, ಮಲ್ಲಿಕಾರ್ಜನ ಸಿಂಗ್ರಿ, ಶಿವಪ್ಪ ಬಲ್ಲಿದವ, ಹನುಮಂತ ಎನ್.ಗಣೇಕಲ್, ಶಾಂತರಾಜ, ಶರಣಪ್ಪ ನೀಲಗಲ್, ಭೀಮಣ್ಣ, ಬಸವಂತ, ಬಸವರಾಜ ಇತರರು ಇದ್ದರು.