ಬೆಳೆ ವಿಮೆ ನೀತಿ ಬದಲಿಗೆ ಒತ್ತಡ
Team Udayavani, Feb 12, 2018, 4:46 PM IST
ಗಂಗಾವತಿ (ಸಿಂಧನೂರು): ಬೆಂಬಲ ಬೆಳೆ ನೀತಿ ಮತ್ತು ಬೆಳೆ ವಿಮಾ ಕುರಿತು ಸಂಸತ್ ಅಧಿ ವೇಶನದಲ್ಲಿ ಕೂಲಂಕುಷವಾಗಿ ವಿಷಯ ಮಂಡಿಸಿ ರೈತರಿಗೆ ಅನುಕೂಲ ಮಾಡಲು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
ಕಾಂಗ್ರೆಸ್ ಜನಾಶೀರ್ವಾದ ಯಾತ್ರೆಯ ಭಾಗವಾಗಿ ಸಿಂಧನೂರಿನಲ್ಲಿ ಆಯೋಜಿಸಿದ್ದ ರೈತ-ರೈತ ಮಹಿಳೆಯರ ಜತೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತ ಕೃಷಿ ಪ್ರಧಾನ ದೇಶ. ಪ್ರಸ್ತುತ ಕೃಷಿ ಮಾಡಲು ಸರಕಾರದ ನೆರವು ಅತ್ಯಗತ್ಯವಾಗಿ ಬೇಕು. ರೈತ ಸಾಲ ಮುಕ್ತನಾಗಲು ಸಾಲ ಮನ್ನಾ ಮಾಡುವ ಮೂಲಕ ಅವರನ್ನು ಸ್ವಾವಲಂಬಿಯಾಗಿಸಬೇಕು.
ಕೇಂದ್ರ ಸರಕಾರ 12 ಸಾವಿರ ಕೋಟಿ ಉದ್ಯಮಿಗಳ ಸಾಲ ಮನ್ನಾ ಮಾಡಿದೆ. ರೈತರ ಸಾಲ ಮನ್ನಾ ಮಾಡಲು ಮನಸು ಮಾಡುತ್ತಿಲ್ಲ. ಸಾಲಮನ್ನಾ ಸೇರಿ ರೈತರಿಗೆ ಸೌಲಭ್ಯ ನೀಡಿದರೆ ಅವರು ಸೋಮಾರಿಗಳಾಗುತ್ತಾರೆ ಎಂದು ಮಾಧ್ಯಮಗಳು ಬಿಂಬಿಸುತ್ತಿವೆ. ಉದ್ಯಮಿಗಳ ಸಾಲ ಮನ್ನಾ ಬಗ್ಗೆ ಯಾಕೆ ಪ್ರಶ್ನೆ ಮಾಡುತ್ತಿಲ್ಲ. ರೈತರಿಗೆ ಸಾಲ ಮನ್ನಾ ಎಷ್ಟು ಮುಖ್ಯವೋ ಸಬ್ಸಿಡಿಯೂ ಪ್ರಮುಖವಾಗಿದೆ. ಕೇಂದ್ರ ಸರಕಾರ ಸಬ್ಸಿಡಿ ನೀಡಲು ಆಗುವುದಿಲ್ಲ ಎಂದು ಹೇಳುವ ಮೂಲಕ ರೈತ ವಿರೋಧಿಯಾಗಿದೆ. ಕರ್ನಾಟಕ ಹಾಗೂ ಪಂಜಾಬ ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಮಾಡುವಂತೆ ತಾವು ನೀಡಿದ ಸಲಹೆಗೆ ಅಲ್ಲಿಯ ಸರಕಾರಗಳು ಸ್ಪಂದಿಸಿವೆ.
ಅದರಂತೆ ಕೇಂದ್ರ ಸರಕಾರ ಕೂಡ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ರೈತರ ಸಾಲ ಮನ್ನಾ ಮಾಡುವಂತೆ ರಾಹುಲ್ ಆಗ್ರಹಿಸಿದರು.
ದೇಶದ ವಿವಿಧ ಭಾಗದಲ್ಲಿ ಸಂಚಾರ ಮಾಡಿ ರೈತ ಕೃಷಿಗೆ ಸಂಬಂಧಿಸಿದ ತೊಂದರೆ ಅಧ್ಯಯನ ನಡೆಸಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಅಳವಡಿಸಿಕೊಳ್ಳಲು ಈಗಾಗಲೇ ತಯಾರಿ ನಡೆಸಿದೆ ಎಂದರು.
ಮದ್ಯ ನಿಷೇಧ ಮಾಡಿ: ರೈತ ಮಹಿಳೆಯೊರ್ವಳು ರಾಜ್ಯದಲ್ಲಿ ಮದ್ಯ ನಿಷೇಧ ಮಾಡುವಂತೆ ಕೇಳಿದ ಪ್ರಶ್ನೆಗೆ ರಾಹುಲ್ ಉತ್ತರಿಸಿ ಸಮಗ್ರವಾಗಿ ದೇಶದಲ್ಲಿ ಮದ್ಯ ನಿಷೇಧ ಮಾಡಿದರೆ ಮಾತ್ರ ಸಾರ್ಥಕ ವಾಗುತ್ತದೆ. ಒಂದು ರಾಜ್ಯ ನಿಷೇಧ ಮಾಡಿದರೆ ಯಶಸ್ವಿಯಾಗುವುದಿಲ್ಲ. ಪಕ್ಕದ ರಾಜ್ಯಗಳ ಮೂಲಕ ಕಳ್ಳದಾರಿಯಲ್ಲಿ ಮದ್ಯ ಸರಬರಾಜು ಆಗುತ್ತದೆ. ಅಕ್ರಮ ಹೆಚ್ಚಾಗುತ್ತದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿ, ತುಂಗಭದ್ರಾ ಜಲಾಶಯದಲ್ಲಿ ಸುಮಾರು 32 ಟಿಎಂಸಿಯಷ್ಟು ಹೂಳು ತುಂಬಿದೆ. ಆದ್ದರಿಂದ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆ ಯಾಗಿದೆ. ರೈತರಿಗೆ ಎರಡು ಬೆಳೆಗಳಿಗೆ ಪೂರ್ಣ ನೀರು ಹರಿಸಲು ಆಗುತ್ತಿಲ್ಲ. ಹೂಳು ತೆಗೆಯಲು ಅಸಾಧ್ಯ ಎಂದು ತಜ್ಞರ ವರದಿ ಪ್ರಕಾರ ತಿಳಿದಿದೆ.
ಅವೈಜ್ಞಾನಿಕವಾಗಿದ್ದು ಮಳೆಗಾಲದಲ್ಲಿ ನೀರು ಹರಿದು ಪೋಲಾಗದಂತೆ ತಡೆಯಲು ಸಮನಾಂತರ ಜಲಾಶಯ ನಿರ್ಮಾಣ ನೀರನ್ನು ಸಂಪೂರ್ಣವಾಗಿ ಬಳಕೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು. 1000ಕ್ಕೂ ಹೆಚ್ಚು ರೈತ -ರೈತ ಮಹಿಳೆಯರು ಕೃಷಿ ಪದವೀಧರರಿದ್ದರು.
ಆಧಾರ್ ಇಲ್ಲದ ರೈತರಿಗಿಲ್ಲ ಎಂಟ್ರಿ ಸಿಂಧನೂರಿನ ಸ್ತ್ರೀ ಶಕ್ತಿ ಭವನದಲ್ಲಿ ರಾಹುಲ್ ಗಾಂಧಿ ಅವರು ನಡೆಸಿದ ರೈತರೊಂದಿಗೆ ಸಂವಾದಕ್ಕೆ ಪಾಸ್ ಜೊತೆಗೆ ಆಧಾರ್ ಕಾರ್ಡ್ ತರದ ರೈತರನ್ನು ಪೊಲೀಸರು ವಾಪಸ್ ಕಳುಹಿಸಿದ ಘಟನೆ ಜರುಗಿತು. ಸಂವಾದದಲ್ಲಿ ಪಾಲ್ಗೊಳ್ಳಲು ಆಯ್ಕೆಯಾದ ರೈತರಿಗೆ ಪಾಸ್ ನೀಡಲಾಗಿತ್ತು. ಜೊತೆಗೆ ಆಧಾರ್ ಕಾರ್ಡ್ ತರುವಂತೆ ಸೂಚಿಸಲಾಗಿತ್ತು. ಆದರೆ ಆಧಾರ್ ಕಾರ್ಡ್ ತರಲು ಮರೆತ ರೈತರಿಗೆ ಸಂವಾದದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡದೇ ಪೊಲೀಸರು ವಾಪಸ್ ಕಳುಹಿಸುತ್ತಿದ್ದರು.