ನಾಯಕರ ಪಕ್ಷಾಂತರ ರಾಜಕಾರಣ
Team Udayavani, Apr 6, 2018, 5:11 PM IST
ಲಿಂಗಸುಗೂರು: ತಾಲೂಕು ರಾಜಕಾರಣಿಗಳ ಕಾರಖಾನೆಗೆ ಖ್ಯಾತಿ ಯಾಗಿದ್ದರೂ ಇಲ್ಲಿನ ನಾಯಕರು ಪಕ್ಷಾಂತರ ಮಾಡುವುದರಲ್ಲೂ ಮುಂದಿದ್ದಾರೆ. ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಪಕ್ಷಾಂತರ ಮಾಡಿದ ನಾಯಕರಲ್ಲಿ ಗೆದ್ದವರೂ ಇದ್ದಾರೆ, ಬಿದ್ದವರೂ ಇದ್ದಾರೆ.
ತಾಲೂಕಿನ ನಾಯಕರು ರಾಜ್ಯ ಮತ್ತು ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸಿದ್ದು ಒಂದು ಇತಿಹಾಸವಾದರೆ ಪಕ್ಷಾಂತರ ಮಾಡುವುದರಲ್ಲೂ ಇತಿಹಾಸ ನಿರ್ಮಿಸಿದ್ದಾರೆ. ರಾಜಾ ಅಮರಪ್ಪ ನಾಯಕರು ಜನತಾ ಪಕ್ಷದಿಂದ ರಾಜಕೀಯ ಪ್ರವೇಶ ಮಾಡಿದರೂ ನಂತರದ ದಿನಗಳಲ್ಲಿ ಮಾನ್ವಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಗೆದ್ದು ಶಾಸಕಾಗಿದ್ದರು.
1978ರಲ್ಲಿ ಲಿಂಗಸುಗೂರು ಕ್ಷೇತ್ರದಿಂದ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಬಸವರಾಜ ಪಾಟೀಲ ಆನ್ವರಿ ಶಾಸಕರಾಗಿ
ಆಯ್ಕೆಯಾಗಿದ್ದರು. ನಂತರ 1985ರಲ್ಲಿ ಮಾನ್ವಿ ಕ್ಷೇತ್ರದಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು
ಸಾ ಸಿದ್ದರು. 1999, 2004ರಲ್ಲಿ ಪುನಃ ಲಿಂಗಸುಗೂರು ಕ್ಷೇತ್ರದಿಂದ ಕಾಂಗ್ರೇಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ನಂತರ ಬಿಜೆಪಿ, ಜೆಡಿಎಸ್, ಕೆಜೆಪಿ ಕಾಂಗ್ರೆಸ್ ಸೇರಿದ್ದ ಆನ್ವರಿ ಅವರು ಈಗ ಮತ್ತೆ ಬಿಜೆಪಿ ಸೇರಿದ್ದಾರೆ.
1989ರ ವಿಧಾನಸಬಾ ಚುನಾವಣೆಯಲ್ಲಿ ರಾಜಾ ಅಮರೇಶ್ವರ ನಾಯಕರು ಲಿಂಗಸುಗೂರು ಕ್ಷೇತ್ರದಿಂದ ಕಾಂಗ್ರೆಸ್
ನಿಂದ ಸ್ಪರ್ಧಿಸಿ ಜಯ ಗಳಿಸಿದ್ದರು.
ಬಳಿಕ ಬಿಜೆಪಿ, ಜೆಡಿಎಸ್ ಸೇರಿದ್ದ ಅವರು, ಕಳೆದ ಲೋಕಸಭಾ ಚುನಾವಣಾ ವೇಳೆಯಲ್ಲಿ ಮತ್ತೆ ಕಾಂಗ್ರೆಸ್ ಸೇರಿದ್ದರು. 1994, 1999, 2004ರವರೆಗೆ ಸತತ ಮೂರು ಬಾರಿ ಶಾಸಕರಾಗಿದ್ದ ಅಮರೇಗೌಡ ಪಾಟೀಲ ಬಯ್ನಾಪುರ
ಅನುಕ್ರಮವಾಗಿ ಜನತಾದಳ, ಜೆಡಿಯು, ಜೆಡಿಎಸ್ ಪಕ್ಷದಿಂದ ಆಯ್ಕೆ ಯಾಗಿದ್ದರು. ಮೀಸಲು ಕ್ಷೇತ್ರವಾಗಿದ್ದ ರಿಂದ 2008ರಲ್ಲಿ ಕಾಂಗ್ರೆಸ್ ಸೇರಿದ್ದಾರೆ.
2008ರಲ್ಲಿ ಮಾನಪ್ಪ ವಜ್ಜಲ್ ಅವರು ಕಾಂಗ್ರೆಸ್ ಟಿಕೆಟ್ಗೆ ಶತ ಪ್ರಯತ್ನ ಮಾಡಿದ್ದರೂ ಟಿಕೆಟ್ ದೊರೆತಿರಲಿಲ್ಲ.
ಆಗ ಅವರು ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. 2013ರಲ್ಲಿ ಜೆಡಿಎಸ್ ಸೇರಿ ಎರಡನೇ
ಬಾರಿಗೆ ಶಾಸಕರಾಗಿದ್ದರು. ಈಗ ಮತ್ತೆ ಬಿಜೆಪಿಗೆ ಸೇರಿ ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಎಚ್.ಬಿ. ಮುರಾರಿ ಅವರು ಈಗ ಕಾಂಗ್ರೆಸ್ ಸೇರಿದ್ದಾರೆ. ಬಿಎಸ್ ಆರ್ನಿಂದ ಸ್ಪರ್ಧಿಸಿದ್ದ ಸಿದ್ದು ಬಂಡಿ ಅವರು ಬಿಜೆಪಿಗೆ ಸೇರಿ ಟಿಕೆಟ್ ಸಿಗದಿದ್ದಾಗ ಈಗ ಜೆಡಿಎಸ್ ಸೇರಿದ್ದು, ಅವರನ್ನು ಲಿಂಗಸುಗೂರು ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಲೋಕಸಭೆ ಹಾಗೂ ವಿಧಾನಸಭೆ
ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ಪಕ್ಷಾಂತರ ಪರ್ವ ಆರಂಭಗೊಳ್ಳುತ್ತಿದೆ. ಮುಖಂಡರ ಜತೆಗೆ ಕಾರ್ಯಕರ್ತರ
ಪಕ್ಷಾಂತರ ಸಾಮಾನ್ಯವಾಗಿದೆ.
ಶಿವರಾಜ ಕೆಂಭಾವಿ