ಪೌರತ್ವ ತಿದ್ದುಪಡಿ ಮಸೂದೆ ವಾಪಸ್ಗೆ ಆಗ್ರಹ
Team Udayavani, Dec 17, 2019, 1:14 PM IST
ಲಿಂಗಸುಗೂರು: ಪೌರತ್ವ (ತಿದ್ದುಪಡಿ) ಮಸೂದೆ 2019 ಜಾರಿಗೊಳಿಸಿರುವುದು ಖಂಡನೀಯ. ಕೂಡಲೇ ಈ ಮಸೂದೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಎಸ್ ಎಫ್ಐ ಹಾಗೂ ಡಿವೈಎಫ್ಐ ಮುಖಂಡರು ಸೋಮವಾರ ಪಟ್ಟಣದ ಬಸ್ ನಿಲ್ದಾಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಭಾರತದಲ್ಲಿ ಎಲ್ಲ ಮತ-ಧರ್ಮಗಳ ಜನರಿದ್ದಾರೆ. ಅವರೆಲ್ಲರನ್ನೂ ಸಮಾನವಾಗಿ ಕಾಣಬೇಕು. ಆದರೆ ಇದೀಗ ಕೇಂದ್ರ ಸರ್ಕಾರ ಪೌರತ್ವ ಮಸೂದೆ (ತಿದ್ದುಪಡಿ) ಮಸೂದೆ ಜಾರಿಗೆ ಮುಂದಾಗಿರುವುದು ಖಂಡನೀಯ. ಭಾರತದ ಪೌರತ್ವಕ್ಕೆ ಮತಧರ್ಮದ ಪರೀಕ್ಷೆಒಡ್ಡಿರುವುದರಿಂದ ಈ ಮಸೂದೆ, ನಮ್ಮ ದೇಶದ ಸಂವಿಧಾನದ ಸಮಾನತೆ ಮತ್ತು ಸೆಕ್ಯುಲರಿಸಂಗಳ ನೀತಿಗಳನ್ನು ಉಲ್ಲಂಘಿಸುತ್ತದೆ. ಪೌರತ್ವ ದಾಖಲಾತಿಯನ್ನು ದೇಶದಾದ್ಯಂತ ನಡೆಸುವುದೇ ರಾಜಕೀಯ ದುರುದ್ದೇಶಕ್ಕಾಗಿ. ಮತ, ಧರ್ಮದ ಮೇಲೆ ದೇಶ ವಿಭಜಿಸುವುದನ್ನು ಒಪ್ಪುವುದಿಲ್ಲ. ಕೂಡಲೇ ಮಸೂದೆ ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.
ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ರಮೇಶ ವೀರಾಪುರ, ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯ ಶಿವಪ್ಪ ಬ್ಯಾಗವಾಟ್, ಮುಖಂಡರಾದ ತಿಪ್ಪಣ್ಣ ನಿಲೋಗಲ್, ನಾಗರಾಜ, ಬಸವಂತ ಹಿರೇಕಡಬೂರು, ಅಮರೇಗೌಡ, ಕಂಠೆಪ್ಪ, ಬಸವರಾಜ ಸರೋಟಿ. ಸದ್ದಾಂ ಹುಸೇನ್, ಮಹಮ್ಮದ್ ಸಾಬ್, ಮುತ್ತುರಾಜ್, ವೆಂಕಟೇಶ ಇತರರು ಇದ್ದರು.