12 ಆರೋಪಿಗಳ ಬಂಧನ
Team Udayavani, May 15, 2020, 1:43 PM IST
ರಾಯಚೂರು: ಜೀವ ಬೆದರಿಕೆ ಹಾಕಿ ಹಣ ದೋಚಿದ್ದ ದುಷ್ಕರ್ಮಿಗಳನ್ನು ಜಿಲ್ಲಾ ಪೊಲೀಸ್ ಇಲಾಖೆ ಬಂಧಿಸಿದೆ
ರಾಯಚೂರು: ತಾಲೂಕಿನ ಶಕ್ತಿನಗರದಲ್ಲಿ ಮಾರಕಾಸ್ತ್ರ ತೋರಿಸಿ 20 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ 12 ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಗುರುವಾರ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದ ಎಸ್ಪಿ ಡಾ. ಸಿ.ಬಿ. ವೇದಮೂರ್ತಿ, ಶಕ್ತಿನಗರದ ರಾಘವೇಂದ್ರ ಕಾಲೋನಿ ನಿವಾಸಿ ಹರ್ಷನ್ ಪಿ.ಆರ್ ಮನೆ ಮೇಲೆ ಮೇ 7ರಂದು ರಾತ್ರಿ 7.45 ಗಂಟೆಗೆ ರೌಡಿಶೀಟರ್ಗಳಾದ ಮಹ್ಮದ್ ಗೌಸ್, ವೆಂಕಟೇಶ, ಸುರೇಶ, ಜಾಕೀರ್, ಜಮಶೀರ್, ರವಿ, ಪಪ್ಪು, ಫಾರೂಕ್, ಮಹಾಂತೇಶ, ಚಿಕನ್ ಮೋಸಿನ್, ಅಬ್ದುಲ್ ಸೇರಿದಂತೆ 17 ಜನ ಅಕ್ರಮ ಕೂಟ ರಚಿಸಿಕೊಂಡು ಹೋಗಿ 20 ಲಕ್ಷ ರೂ. ಕೊಡುವಂತೆ ಬೇಡಿಕೆ ಇಟ್ಟಿದ್ದರು.
ನಂತರ ಮೇ 8ರಂದು ಮಧ್ಯಾಹ್ನ 2.20 ಗಂಟೆಗೆ ಹರ್ಷನ್ ಅವರಿಗೆ ಬೆದರಿಕೆ ಹಾಕಿ 5 ಲಕ್ಷ ರೂ. ಹಣವನ್ನು ಆನ್ಲೈನ್ ನಲ್ಲಿ ಟ್ರಾನ್ಸಫರ್ ಮಾಡಿಸಿಕೊಂಡು ಬಾಕಿ 15 ಲಕ್ಷ ಹಣ ವಾರದೊಳಗೆ ನೀಡುವಂತೆ ಬೆದರಿಕೆ ಹಾಕಿ ಹೋಗಿದ್ದರು ಎಂದು ತಿಳಿಸಿದರು.
ಡಕಾಯಿತರ ಬಂಧನಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀಹರಿಬಾಬು, ಡಿವೈಎಸ್ಪಿ ಶಿವನಗೌಡ ಪಾಟೀಲ್ ನೇತೃತ್ವದಲ್ಲಿ ರಾಯಚೂರು ಗ್ರಾಮೀಣ ಸಿಪಿಐ ಅಂಬಾರಾಯ ಎಂ. ಮತ್ತು ಶಕ್ತಿನಗರ ಪಿಎಸ್ಐ ರಾಮಚಂದ್ರ, ಪಿಎಸ್ಐ ಸಾಬಯ್ಯ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ತಂಡ ರಚಿಸಲಾಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ, ಸುರೇಶ, ರವಿ, ಮೋಸಿನ್, ಅಬ್ದುಲ್ ಖಾದರ್, ಹುಸೇನ್, ಶಕೀಲ್, ಮಹಿಬೂಬ್, ಶ್ರೀಹರಿ, ಅಕ್ಬರ್, ಅಫ್ಜಲ್, ಮಹಮ್ಮದ್ ಗೌಸ್, ನವಾಜ್ ಎಂಬ ಆರೋಪಿಗಳನ್ನು ಬಂಧಿಸಿ ಬಂಧಿತರಿಂದ ಕೃತ್ಯಕ್ಕೆ ಬಳಸಿದ ಲಾಂಗು, ಚಾಕು ಸೇರಿದಂತೆ ಇನ್ನಿತರ ಮಾರಕಾಸ್ತ್ರ ವಶಪಡಿಸಿಕೊಂಡಿದೆ ಎಂದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀಹರಿಬಾಬು, ಡಿವೈಎಸ್ಪಿ ಶಿವನಗೌಡ ಪಾಟೀಲ್, ಸಿಪಿಐ, ಪಿಎಸ್ಐ ಮತ್ತು ಸಿಬ್ಬಂದಿ ಇದ್ದರು.