ಪೋತಗಲ್ ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ವಿರೋಧ
Team Udayavani, Jul 9, 2020, 4:29 PM IST
ರಾಯಚೂರು: ಪೋತಗಲ್ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು
ರಾಯಚೂರು: ಕೋವಿಡ್ 19 ವೈರಸ್ ಸೋಂಕಿನಿಂದ ಮೃತಪಟ್ಟವರ ಶವಗಳನ್ನು ತಾಲೂಕಿನ ಪೋತಗಲ್ ಗ್ರಾಮದ ಸರ್ವೆ ನಂಬರ್ 45ರಲ್ಲಿ ಅಂತ್ಯ ಸಂಸ್ಕಾರ ಮಾಡುತ್ತಿದ್ದು, ಕೂಡಲೇ ಬೇರೆಡೆ ಸ್ಥಳ ನಿಗದಿ ಮಾಡುವಂತೆ ಪೋತಗಲ್ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರು, ಈಗ ಗ್ರಾಮದಲ್ಲಿ ಆಯ್ಕೆ ಮಾಡಿರುವ ಸ್ಥಳ ಕೇವಲ ಅರ್ಧ ಕಿಮೀ ಅಂತರದಲ್ಲಿದೆ. ನಿತ್ಯ ಇದೇ ಮಾರ್ಗವಾಗಿ ಕೃಷಿ ಕೂಲಿ ಕಾರ್ಮಿಕರು ಸಂಚರಿಸುತ್ತಾರೆ. ಇದರಿಂದ ಗ್ರಾಮಸ್ಥರಿಗೆ ಸೋಂಕು ಹರಡುವ ಸಾಧ್ಯತೆಗಳಿವೆ. ಜಾನುವಾರು, ದನಕರುಗಳು, ಕುರಿಗಳು ಮೇಯಿಸಲು ಜನರು ಈ ಪ್ರದೇಶಕ್ಕೆ ಹೋಗುತ್ತಾರೆ. ಈ ಹಿನ್ನೆಲೆಯಲ್ಲಿ ಕಟ್ಲಟ್ಕೂರು ಸೀಮಾಂತರದ ಸರ್ವೆ ನಂಬರ್ 313 ರಿಂದ 320 ವರೆಗೆ 100 ಎಕರೆ ಅರಣ್ಯ ಜಮೀನು ಲಭ್ಯವಿದ್ದು, ಈ ಸ್ಥಳ ಸಂಸ್ಕಾರಕ್ಕೆ ಸೂಕ್ತವಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗ್ರಾಮಸ್ಥರಾದ ನರಸಪ್ಪ ದಂಡೋರ, ಆಂಜನೇಯ, ಶಂಶಾಲಂ, ಪಿ.ಕರಿಯಪ್ಪ, ಮಲ್ಲೇಶ, ಹುಸೇನ, ರವಿ, ಪಾಂಡುರಂಗಪ್ಪ, ನಾಗರಾಜ, ಮಲ್ಲೇಶ, ಅಂಜನೇಯ ಇದ್ದರು.