ಪಡಿತರ ಧಾನ್ಯ ಪಡೆಯಲು ಸೂಚನೆ
Team Udayavani, Jul 18, 2020, 2:17 PM IST
ರಾಯಚೂರು: ಜಿಲ್ಲೆಯಲ್ಲಿ ಜು.22ರ ವರೆಗೆ ಲಾಕ್ಡೌನ್ ಜಾರಿಯಲ್ಲಿರುವ ಕಾರಣ ಜೂನ್ ತಿಂಗಳ ಪಡಿತರವನ್ನು ಎಲ್ಲ ನ್ಯಾಯಬೆಲೆ ಅಂಗಡಿಗಳು ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಡ್ಡಾಯವಾಗಿ ವಿತರಿಸಬೇಕು. ಈ ಅವಧಿ ಯಲ್ಲಿ ಎಲ್ಲ ಪಡಿತರ ಚೀಟಿದಾರರು ಆಹಾರ ಧಾನ್ಯಗಳನ್ನು ಪಡೆಯಬಹುದು.
ಹತ್ತಿರದ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಪೋರ್ಟಬಿಲಿಟಿ ಮೂಲಕ ಆಹಾರ ಧಾನ್ಯಗಳನ್ನು ಪಡೆಯಬಹುದು. ಪಡಿತರ ಚೀಟಿದಾರರು ಆಹಾರ ಧಾನ್ಯಗಳನ್ನು ಪಡೆಯುವ ವೇಳೆ ಮುಖಕ್ಕೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಕೈಗಳನ್ನು ಸೋಪ್ ಅಥವಾ ಸ್ಯಾನಿಟೈಸರ್ನಿಂದ ತೊಳೆಯಬೇಕು. ಕನಿಷ್ಠ 2 ಮೀಟರ್ ಸಾಮಾಜಿಕ ಅಂತರ ಕಾಪಾಡುವಂತೆ ಡಿಸಿ ತಿಳಿಸಿದ್ದಾರೆ.
ಆಧಾರ್ ಕಾರ್ಡ್ ಪಡಿತರ ವಿತರಣೆಗೆ ಅವಕಾಶ: ರಾಜ್ಯದಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆತ್ಮ ನಿರ್ಭರ ಭಾರತ್ ಯೋಜನೆಯಡಿ ವಲಸಿಗರಿಗೆ ಹಾಗೂ ಪಡಿತರ ಚೀಟಿ ಇಲ್ಲದವರು ರಾಯಚೂರು ಜಿಲ್ಲೆಯ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಆಧಾರ್ ಕಾರ್ಡ್ ಮೂಲಕ ಪಡಿತರ ಧಾನ್ಯಗಳನ್ನು ಉಚಿತವಾಗಿ ಪಡೆಯಬಹುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.