ಹಳೇ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ಮನವಿ
Team Udayavani, Mar 30, 2022, 2:09 PM IST
ರಾಯಚೂರು: ಪಿಎಫ್ಆರ್ಡಿ ಕಾಯ್ದೆಯಡಿ ಬರುವ ಎನ್ಪಿಎಸ್ ಯೋಜನೆ ರದ್ದುಪಡಿಸಿ, ಎಲ್ಲ ನೌಕರರಿಗೆ ಅನ್ವಯಿಸುವಂತೆ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಅಖೀಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು.
ಈ ಕುರಿತು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮಂಗಳವಾರ ಮನವಿ ಸಲ್ಲಿಸಿದರು. ಅನೇಕ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ, ದಿನಗೂಲಿ, ಅಂಗನವಾಡಿ ಮತ್ತು ಯೋಜನಾ ಆಧಾರಿತ ನೌಕರರ ನೇಮಕಾತಿಯಲ್ಲಿ ಆದ್ಯತೆ ನೀಡಬೇಕು. ಖಾಲಿ ಇರುವ ಹುದ್ದೆಗಳನ್ನು ನಿಯಮಾನುಸಾರ ಭರ್ತಿ ಮಾಡಬೇಕು. ಸುಪ್ರೀಂಕೋರ್ಟ್ ಆದೇಶಾನುಸಾರ ನೌಕರರಿಗೆ ಸಮಾನ ಕೆಲಸ ಸಮಾನ ವೇತನ ನೀಡಬೇಕು. ಏಳನೇ ವೇತನ ಆಯೋಗ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ರಚನೆ ಮಾಡಿ ವೇತನ ಪರಿಷ್ಕರಿಸುವಂತೆ ಒತ್ತಾಯಿಸಿದರು.
ಅನುಕಂಪ ಆಧಾರಿತ ನೇಮಕಾತಿಗಳನ್ನು ಮೃತ ಸರ್ಕಾರಿ ನೌಕರರ ಕುಟುಂಬಕ್ಕೆ ಕೈಬಿಟ್ಟು ಪೊಲೀಸರು ಹಾಗೂ ದೊಂಬಿಗಳಲ್ಲಿ ಮೃತಪಟ್ಟ ನೌಕರರ ಕುಟುಂಬಗಳಿಗೆ ಮಾತ್ರ ಸೀಮಿತಗೊಳಿಸಲು ಮಾಡಿರುವ ಶಿಫಾರಸು ತಿರಸ್ಕರಿಸಬೇಕು. ರಾಜ್ಯ ಸರ್ಕಾರಿ ಪಿಂಚಣಿದಾರರಿಗೂ ಜ್ಯೋತಿ ಸಂಜೀವಿನಿಯಂಥ ಆರೋಗ್ಯ ಯೋಜನೆ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಈ ವೇಳೆ ಒಕ್ಕೂಟದ ಜಿಲ್ಲಾಧ್ಯಕ್ಷ ತಾಯಪ್ಪ ಮರ್ಚೆಟ್ಹಾಳ್, ಪ್ರಧಾನ ಕಾರ್ಯದರ್ಶಿ ಮೋಹಿನುದ್ದೀನ್, ರಾಜ್ಯ ಜಂಟಿ ಕಾರ್ಯದರ್ಶಿ ನಾರಾಯಣ, ಸತ್ಯನಾರಾಯಣ ಇತರರಿದ್ದರು.