ರಸ್ತೆ ದುರಸ್ತಿ ಕಳಪೆ-ಆರೋಪ
Team Udayavani, Dec 14, 2021, 3:05 PM IST
ನಾಗರಹಾಳ: ಆಮದಿಹಾಳ ಗ್ರಾಮದಿಂದ ಸಜ್ಜಲಗುಡ್ಡ ಗ್ರಾಮದವರೆಗೆ ರಸ್ತೆ ದುರಸ್ತಿ ನೆಪದಲ್ಲಿ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡುತ್ತಿದ್ದು, ರಸ್ತೆ ಡಾಂಬರೀಕರಣ ಕಿತ್ತು ಹೋಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
2020-21ನೇ ಸಾಲಿನ ಲೋಕೋಪಯೋಗಿ ಇಲಾಖೆಯ 5054 ಲೆಕ್ಕ ಶೀರ್ಷಿಕೆ ಅನುದಾನದಲ್ಲಿ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಜಂಗಲ್ ಕಟಿಂಗ್ ಮಾಡುವುದು, ರಸ್ತೆ ದುರಸ್ತಿ ಸೇರಿದಂತೆ ಇತರೆ ಕಾಮಗಾರಿ ನಿರ್ವಹಿಸಲು ಶೇ.30 ಲೀಸ್ ಮೂಲಕ ಗುತ್ತಿಗೆದಾರರು ಗುತ್ತಿಗೆ ಪಡೆದಿದ್ದಾರೆ. ಆದರೆ ಗುತ್ತಿಗೆದಾರರು ಎರಡು ದಿನಗಳಲ್ಲಿ ಅಲ್ಲಲ್ಲಿ ಚಾರು-ಚೂರು ಡಾಂಬರೀಕರಣ ಹಾಕಿ ಕಳಪೆ ಕಾಮಗಾರಿ ಮಾಡಿ ಕೈ ತೊಳೆದುಕೊಂಡಿದ್ದಾರೆ. ಇದರಿಂದ ರಸ್ತೆಗೆ ಹಾಕಿದ ಡಾಂಬರ್ ಕಿತ್ತು ಹೋಗಿದೆ ಎಂಬುದು ಸಾರ್ವಜನಿಕರ ಆರೋಪ.
ಕೂಡಲೇ ಮೇಲಾಧಿಕಾರಿಗಳು ಎಚ್ಚೆತ್ತು ದುರಸ್ತಿ ನೆಪದಲ್ಲಿ ಕಾಮಗಾರಿ ಕಳಪೆಯಾಗಿ ನಿರ್ವಹಿಸಿದ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರಾದ ಹನಮಂತ, ಅಮೀನಪ್ಪ, ಮುತ್ತಣ್ಣ, ಮಲ್ಲನಗೌಡ ಆಗ್ರಹಿಸಿದ್ದಾರೆ.