ಸಿಂಧನೂರಿನಿಂದ ಕನಿಷ್ಠ 10 ಲಕ್ಷ ದೇಣಿಗೆ ಸಂಗ್ರಹದ ಗುರಿ
ಎಲ್ಲ ದೇಣಿಗೆ ಸಂಗ್ರಹಿಸಿ ಜಿಲ್ಲಾಧಿಕಾರಿಗೆ ಹಸ್ತಾಂತರಿಸಲು ನಾಡಗೌಡ ಸಲಹೆ
Team Udayavani, Aug 13, 2019, 2:14 PM IST
ಸಿಂಧನೂರು: ಕೋಟೆ ಈರಣ್ಣ ಕಲ್ಯಾಣ ಮಂಟಪದಲ್ಲಿ ನೆರೆ ಹಾವಳಿಗೆ ತುತ್ತಾದ ಜಿಲ್ಲೆಗಳಿಗೆ ದೇಣಿಗೆ ಸಂಗ್ರಹಿಸಲು ಮುಂದಾದ ಶಾಸಕ ವೆಂಕಟರಾವ್ ನಾಡಗೌಡ.
ಸಿಂಧನೂರು: ನೆರೆ ಹಾವಳಿಗೆ ತುತ್ತಾದ ರಾಯಚೂರು ಜಿಲ್ಲೆಯ ದೇವದುರ್ಗ ಹಾಗೂ ಲಿಂಗಸುಗೂರು ತಾಲೂಕುಗಳ ಗ್ರಾಮಗಳ ಸಂತ್ರಸ್ತರಿಗೆ ನಗರದ ವಿವಿಧ ಸಂಘಟನೆಗಳು, ಸಮುದಾಯ, ಮಠಾಧೀಶರು, ಜನಪ್ರತಿನಿಧಿಗಳು ಸೇರಿ ದೇಣಿಗೆ ಸಂಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ನೀಡಬೇಕು ಎಂದು ಶಾಸಕ ವೆಂಕಟರಾವ್ ನಾಡಗೌಡ ವಿನಂತಿಸಿದರು.
ನಗರದ ಕೋಟೆ ಈರಣ್ಣ ಕಲ್ಯಾಣ ಮಂಟಪದಲ್ಲಿ ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯರ ನೇತೃತ್ವದಲ್ಲಿ ಜರುಗಿದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮ ಕ್ಷೇತ್ರದಿಂದ ಬೇರೆ ಬೇರೆ ದೇಣಿಗೆ ಸಂಗ್ರಹಣೆ ಮಾಡುವ ಬದಲು ಎಲ್ಲರೂ ಒಂದೆಡೆ ಸೇರಿ ಸಂಗ್ರಹಣೆ ಮಾಡಿ ಕನಿಷ್ಠ ಹತ್ತು ಲಕ್ಷಕ್ಕೂ ಹೆಚ್ಚು ದೇಣಿಗೆ ನೀಡುವ ಕೆಲಸವಾಗಬೇಕು. ಆಗ ಮಾತ್ರ ಸ್ವಲ್ಪ ಸಹಾಯ ಮಾಡಿದಂತಾಗುತ್ತದೆ. ಈಗಾಗಲೇ ಸೋಮನಾಥ ಶ್ರೀಗಳ ನೇತೃತ್ವದಲ್ಲಿ ಸೇವಾ ಗೆಳೆಯರ ಬಳಗ ರಚಿಸಲಾಗಿದೆ. ಇದರ ಅಡಿಯಲ್ಲಿ ಮಂಗಳವಾರ ಬೆಳಿಗ್ಗೆ 10 ಗಂಟೆಯಿಂದ ದೇಣಿಗೆ ಪ್ರಾರಂಭ ಮಾಡೋಣ ಎಂದರು.
ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯರು, ಆರ್ಡಿಸಿಸಿ ಬ್ಯಾಂಕ್ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಪಿಎಲ್ಡಿ ಅಧ್ಯಕ್ಷ ಎಂ.ದೊಡ್ಡಬಸವರಾಜ, ಜಿಪಂ ಸದಸ್ಯ ಎನ್.ಶಿವನಗೌಡ ಗೊರೇಬಾಳ, ನಗರಸಭೆ ಸದಸ್ಯರಾದ ಮಲ್ಲಿಕಾರ್ಜುನ ಪಾಟೀಲ ಸೇರಿ ವಿವಿಧ ಸಮಾಜ ಮತ್ತು ಪಕ್ಷ, ಸಂಘಟನೆಗಳ ಮುಖಂಡರು ಇದ್ದರು.