ಒಂದೇ ದಿನ 4 ಚಿರತೆ ಸೆರೆ
Team Udayavani, May 18, 2020, 6:32 AM IST
ಮಾಗಡಿ: ವಿವಿಧ ಗ್ರಾಮಗಳಲ್ಲಿ ಇಟ್ಟಿದ್ದ ಒಟ್ಟು 11 ಬೋನುಗಳಲ್ಲಿ ನಾಲ್ಕು ಚಿರತೆ ಗಳು ಸೆರೆಯಾಗಿವೆ. ಇದರಿಂದ ಸುತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಒಂದೇ ವಾರದಲ್ಲಿ ಬಾಲಕ ಹೇಮಂತ್ ಹಾಗೂ ಕೊತ್ತಗಾನಹಳ್ಳಿ ಗ್ರಾಮದ ವೃದ್ಧೆ ಗಂಗಮ್ಮರನ್ನು ನರಭಕ್ಷಕ ಚಿರತೆಗಳು ಬಲಿಪಡೆದಿದ್ದವು. ಗ್ರಾಮಸ್ಥರು ಭಯ ಭೀತರಾಗಿ ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ನೆಲಮಂಗಲ ಮತ್ತು ಮಾಗಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
ಎರಡೂ ಸಂತ್ರಸ್ತ ಕುಟುಂಬಗಳಿಗೆ ಸಚಿವರು, ಶಾಸಕರು ಹಾಗೂ ಸಂಸದರು ಭೇಟಿ ನೀಡಿ, ಸಾಂತ್ವನ ಹೇಳಿದ್ದರು. ಅಲ್ಲದೆ ಬಾಲಕ ಹೇಮಂತ್ ಕುಟುಂಬದವರಿಗೆ 7.5 ಲಕ್ಷ ರೂ.ಗಳ ಪರಿಹಾರ ಧನದ ಆದೇಶ ನೀಡಲಾಗಿತ್ತು. ಅಲ್ಲದೆ ಇಬ್ಬರು ಶಾಸಕರು ಕೂಡಲೇ ಚಿರತೆ ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ತಾಕೀತು ಮಾಡಿದ್ದರು. ಅರಣ್ಯ ಉಪಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ ಮಾರ್ಗದರ್ಶನ ಹಾಗೂ ವಲಯ ಅರಣ್ಯಾಧಿಕಾರಿ ಕೆ.ಪುಷ್ಪಲತಾ ನೇತೃತ್ವದಲ್ಲಿ ಸಿಬ್ಬಂದಿ ಸುಮಾರು 11 ಬೋನ್ಗಳನ್ನು ವಿವಿಧ ಗ್ರಾಮದ ಕಾಡಂ ಚಿನಲ್ಲಿಟ್ಟು ಕಾರ್ಯಾಚರಣೆ ನಡೆಸಿದ್ದರು.
ಮೂರು ಗ್ರಾಮಗಳ ಕಾಡಂಚಿನಲ್ಲಿಟ್ಟಿದ್ದ ಇಟ್ಟಿದ್ದ ಬೋನ್ಗೆ ನಾಲ್ಕು ಚಿರತೆಗಳು ಬಿದ್ದಿದ್ದು, ಗ್ರಾಮೀಣ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ಮೂರು ದಿನಗಳ ಹಿಂದೆಯಷ್ಟೆ ಕದರಯ್ಯಪಾಳ್ಯ ಬಳಿ ಒಂದು ಚಿರತೆ ಮರಿ ಬೋನಿಗೆ ಬಿದ್ದಿತ್ತು. ಇದೇ ಮಗು ವನ್ನು ತಿಂದ ಚಿರತೆ ಎಂದು ಬಹುತೇಕ ಜನ ನಂಬಿದ್ದರು. ಕೆಲವರು ಬೋನಿಗೆ ಬಿದ್ದಿದ್ದು ಮರಿ ಚಿರತೆಯಾಗಿದ್ದರಿಂದ ನರಭಕ್ಷಕ ಚಿರತೆ ಇದಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದರು.