ಜಿಎಸ್ಟಿ -ನೋಟ್ ಬ್ಯಾನ್ನಿಂದ ಜನತೆಗೆ ಸಂಕಷ್ಟ
ಕವಿತಾಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ. ನಾಯಕ ಪರ ಪ್ರಚಾರ ಸಭೆ ಕೋಮುವಾದಿ ಬಿಜೆಪಿ ಅಧಿಕಾರದಿಂದ ದೂರವಿಡಲು ಕಾಂಗ್ರೆಸ್-ಜೆಡಿಎಸ್ ಮೈತ್ರಿ
Team Udayavani, Apr 13, 2019, 5:26 PM IST
ಕವಿತಾಳ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದ ಜಿಎಸ್ಟಿ ಮತ್ತು ನೋಟ್ ಬ್ಯಾನ್ ಮಾಡಿದ್ದರಿಂದ ಸಣ್ಣಪುಟ್ಟ ವ್ಯಾಪಾರಸ್ಥರು, ಸಾರ್ವಜನಿಕರು ಸಂಕಷ್ಟ ಎದುರಿಸುವಂತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್. ಎಸ್.ಬೋಸರಾಜು ಆರೋಪಿಸಿದರು.
ಇಲ್ಲಿನ ಮುಂಡರಗಿಮಠ ಕಲ್ಯಾಣಮಂಟಪದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಸಾಲ ಮನ್ನಾ ಮಾಡುವಂತೆ ಕೇಂದ್ರ ಸರ್ಕಾರವನ್ನು ಕೇಳಿದರೆ ಯಡಿಯೂರಪ್ಪ ನೋಟ್ ಪ್ರಿಂಟಿಗ್ ಮಷಿನ್ ಇಲ್ಲ ಎಂದು ಉತ್ತರಿಸಿದ್ದರು. ಇಂಥವರಿಂದ ಸಾಮಾಜಿಕ ನ್ಯಾಯ ಮತ್ತು ದೇಶದ ಹಿತ ಕಾಪಾಡಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.
ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಮ್ಮ ಪಕ್ಷ ನಡೆದುಕೊಳ್ಳುತ್ತಿದೆ. ಸಂವಿಧಾನ ವಿರೋಧಿ, ಜನ, ರೈತ ವಿರೋಧಿ ಬಿಜೆಪಿಯನ್ನು ಚುನಾವಣೆಯಲ್ಲಿ ತಿರಸ್ಕರಿಸುವ ಮೂಲಕ ಮತದಾರರು ಪಾಠ ಕಲಿಸಲಿದ್ದಾರೆ ಎಂದರು. ರಾಯಚೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ. ನಾಯಕ ಮಾತನಾಡಿ, ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಜೆಡಿಎಸ್, ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದೇವೆ. ಸಮ್ಮಿಶ್ರ ಸರಕಾರದ ಅಭಿವೃದ್ಧಿ ಕೆಲಸ
ನೋಡಿ ತಮ್ಮನ್ನು ಆಯ್ಕೆಗೊಳಿಸಬೇಕೆಂದು ವಿನಂತಿಸಿದರು.
ಮಾಜಿ ಶಾಸಕ ಜಿ.ಹಂಪಯ್ಯ ನಾಯಕ, ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ ಇಟಗಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಜಿಪಂ ಮಾಜಿ ಅಧ್ಯಕ್ಷ ದೊಡ್ಡಬಸಪ್ಪಗೌಡ ಮಾತನಾಡಿದರು. ಜಿಪಂ ಸದಸ್ಯ ಕಿರಲಿಂಗಪ್ಪ, ಮಾಜಿ ಸದಸ್ಯ ಮಾಳಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಮಣ್ಣ ಇರಬಗೇರಾ, ಅಯ್ಯನಗೌಡ ಜಂಬಲದಿನ್ನಿ, ಅಮರೇಶ ಗೊಲ್ದಿನ್ನಿ, ಬುರಾನುದ್ದೀನ್ ಧಣಿ, ಈ.ವೆಂಕಟರಾವ್, ಡಾವಣಗೇರಿ ವೆಂಕಟರಾವ್ ಇತರರು ಇದ್ದರು.