ನೆರೆ ಪೀಡಿತ ಹಳ್ಳಿಗಳ ಸ್ಥಳಾಂತರಕ್ಕೆ ಆಗ್ರಹಿಸಿ ಪಾದಯಾತ್ರೆ
ಸಂತ್ರಸ್ತರಿಗೆ ಸೂಕ್ತ ಪರಿಹಾರ ಕಲ್ಪಿಸಲು ಆಗ್ರಹ
Team Udayavani, Sep 5, 2019, 6:16 PM IST
ಶಹಾಪುರ: ವಿವಿಧ ಬೇಡಿಕೆ ಈಡೇರಿಕೆಗಾಗಿ ರೈತರು ಹತ್ತಿಗೂಡೂರ ಗ್ರಾಮದ ಡಾ| ಅಂಬೇಡ್ಕರ್ ವೃತ್ತದಿಂದ ಯಾದಗಿರಿ ಜಿಲ್ಲಾ ಕಚೇರಿವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಸಿದ್ಧಬಸವ ಕಬೀರಾನಂದ ಸ್ವಾಮೀಜಿ ಚಾಲನೆ ನೀಡಿದರು.
ಶಹಾಪುರ: ನೆರೆ ಹಾವಳಿಗೆ ತುತ್ತಾದ ಕೃಷ್ಣಾ ಮತ್ತು ಭೀಮಾ ನದಿ ತೀರದ ಹಲವಾರು ಗ್ರಾಮಗಳನ್ನು ಸ್ಥಳಾಂತರಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ರೈತ ಸಂಘ ಹಸಿರು ಸೇನೆ ನೇತೃತ್ವದಲ್ಲಿ ತಾಲೂಕಿನ ಹತಿಗೂಡೂರ ಗ್ರಾಮದ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಿಂದ ಯಾದಗಿರಿ ಜಿಲ್ಲಾಧಿಕಾರಿ ಕಚೇರಿವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಚಿಗರಳ್ಳಿಯ ಸಿದ್ಧಬಸವ ಕಬೀರಾನಂದ ಸ್ವಾಮೀಜಿ ಡಾ| ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಬುಧವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ, ನೆರೆ ಹಾವಳಿಯಿಂದ ಉಂಟಾದ ಸಮರ್ಪಕ ಬೆಳೆ ಪರಿಹಾರ ಸೇರಿದಂತೆ ಮನೆ ಮಠ ಕಳೆದುಕೊಂಡ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು. ರಾಜ್ಯ ಸರ್ಕಾರ ತಕ್ಷಣಕ್ಕೆ 10 ಸಾವಿರ ಸಂತ್ರಸ್ತರಿಗೆ ನೀಡಲು ಘೋಷಣೆ ಮಾಡಿದೆ. ಆದರೆ ಇದುವರೆಗೂ ಜಿಲ್ಲಾಡಳಿತ ಯಾರೊಬ್ಬರಿಗೂ 10 ಸಾವಿರ ರೂ. ತಲುಪಿಸಿರುವುದಿಲ್ಲ. ಅಲ್ಲದೆ ಕೃಷ್ಣಾ ಮತ್ತು ಭೀಮಾ ತೀರದ ಗ್ರಾಮಗಳಿಗೆ ಪ್ರತಿ ಸಲ ನೆರೆ ಹಾವಳಿಗೆ ತುತ್ತಾಗುತ್ತಿವೆ. ಇದರಿಂದ ಸಾಕಷ್ಟು ಸಂಕಷ್ಟ ಎದುರಿಸುವಂತಾಗಿದೆ. ಕಾರಣ ಜಿಲ್ಲಾಡಳಿತ ಕೂಡಲೇ ಸಮಗ್ರ ಮಾಹಿತಿ ಕಲೆ ಹಾಕಿ ಅಂತಹ ಗ್ರಾಮಗಳನ್ನು ಕೂಡಲೇ ಬೇರಡೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ, ನಾಗರತ್ನಾ ಪಾಟೀಲ, ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ, ವಿಶ್ವನಾಥರಡ್ಡಿ ಗೊಂದಡಗಿ, ಶರಣು ಮಂದ್ರವಾಡ, ದೇವಿಂದ್ರಪ್ಪಗೌಡ ಮಾಲಗತ್ತಿ, ಶರಣರಡ್ಡಿ ಹತ್ತಿಗೂಡೂರ, ಬಚ್ಚಪ್ಪ ನಾಯಕ ನಿಂಗು ಜಡಿ, ಸಿದ್ದಪ್ಪ ಕುಂಬಾರಪೇಟ, ಶಾರದಾ ಕನ್ಯಾಕೋಳೂರ, ಮಹಿಪಾಲರಡ್ಡಿ ಪಾಟೀಲ, ಬಸವರಾಜಪ್ಪಗೌಡ ಹೆಮ್ಮಡಗಿ, ಬಸವರಾಜಪ್ಪಗೌಡ ಕೊಡಗನೂರ, ಯಲ್ಲಪ್ಪ ಗುಡಕಾಯಿ, ಮಲ್ಲಣ್ಣ ನೀಲಹಳ್ಳಿ, ಭೀಮರಾಯ ಯಡ್ಡಳ್ಳಿ, ವೆಂಕಟೇಶ ಬಳಿಚಕ್ರ, ಭೀಮರಾಯ ಪೂಜಾರಿ ಸೇರಿದಂತೆ ವಿವಿಧ ಗ್ರಾಮಗಳ ನೆರೆ ಸಂತ್ರಸ್ತರು ರೈತ ಸಂಘದ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಇದ್ದರು.