ಅಂಜನಾಪುರ ಜಲಾಶಯಕ್ಕೆ ಬಾಗೀನ ಅರ್ಪಿಸಿದ ಸಿಎಂ ಬಿಎಸ್ವೈ
ನೆರೆ ಹಾನಿ ಹಿನ್ನೆಲೆಯಲ್ಲಿ ಶಿವಮೊಗ್ಗದ ವಿವಿಧ ಭಾಗಗಳಿಗೆ ಭೇಟಿ ನೀಡುತ್ತಿರುವ ಸಿಎಂ.
Team Udayavani, Aug 13, 2019, 12:29 PM IST
ಶಿವಮೊಗ್ಗ: ನೆರೆ ಪೀಡಿತ ಪ್ರದೇಶಗಳ ಹಾನಿ ವೀಕ್ಷಣೆಗೆ ಶಿವಮೊಗ್ಗ ಜಿಲ್ಲೆಗೆ ಆಗಮಿಸಿರುವ ಮುಖ್ಯಮಂತ್ರಿ ಬಿ ಎಸ್, ಯಡಿಯೂರಪ್ಪ ಇಂದು ಜಿಲ್ಲೆಯ ಅನೇಕ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು.
ಇದೇ ವೇಳೆ ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯಕ್ಕೆ ಬಾಗೀನ ಅರ್ಪಿಸಿದರು.
ಶಿವಮೊಗ್ಗ ಗಾಂಧಿ ಬಜಾರ್ ನ ರಾಮಣ್ಣ ಶ್ರೇಷ್ಠಿ ಪಾರ್ಕ್ ನ ಪರಿಹಾರ ಕೇಂದ್ರ, ವಿದ್ಯಾನಗರ, ರಾಜೀವ್ ಗಾಂಧಿ ಬಡಾವಣೆಯ ಗೋಶಾಲೆಗೆ ಭೇಟಿ ನೀಡಿದರು.
ಸಂತ್ರಸ್ತ ಕುಟುಂಬಕ್ಕೆ 10 ಸಾವಿರ, ಮನೆ ರಿಪೇರಿಗೆ 1 ಲಕ್ಷ ಹಾಗೂ ಹೊಸದಾಗಿ ಮನೆ ನಿರ್ಮಿಸಿ ಕೊಳ್ಳಲು 5 ಲಕ್ಷ ನೀಡುವುದಾಗಿ ಘೋಷಣೆ ಮಾಡಿದ ಅವರು, ರಾಜ್ಯದ ಎಲ್ಲೆಡೆ ಇದೇ ಪರಿಸ್ಥಿತಿ ಇದ್ದು ಹಿಂದೆಂದೂ ಹೀಗೆ ಆಗಿರಲಿಲ್ಲ ಎಂದು ಬಿ ಎಸ್ ಯಡಿಯೂರಪ್ಪ ಹೇಳಿದರು.
ಮಹಾನಗರ ಪಾಲಿಕೆಗೆ ತಕ್ಷಣವೇ 50 ಕೋಟಿ ಬಿಡುಗಡೆ ನೀಡಲಾಗುತ್ತದೆ. ಜನರು ಒಪ್ಪಿದರೆ ಬಹು ಮಹಡಿ ವಸತಿ ನಿರ್ಮಿಸಲಾಗುವುದು
ಬೇರೆ ಯೋಜನೆಗೆ ಅನುದಾನವನ್ನು ಒದಗಿಸಲು ಸಿದ್ಧ. ಹಾಗಾಗಿ ಪರಿಹಾರ ಕಾರ್ಯಕ್ಕೆ ಹಣದ ಕೊರತೆ ಆಗದಂತೆ ಸರ್ಕಾರ ನೋಡಿಕೊಳ್ಳಲಿದೆ ಎಂದರು.
ಬಾಗೀನ ಅರ್ಪಿಸಿದ ಬಿಎಸ್ ವೈ: ಅಂಜನಾಪುರ ಜಲಾಶಯಕ್ಕೆ ಬಾಗೀನ ಅರ್ಪಿಸಿದ ಮುಖ್ಯಮಂತ್ರಿಗಳು ಕರ್ನಾಟಕ ರಾಜ್ಯದಲ್ಲಿ ನೀರಾವರಿ ಯೋಜನೆಗೆ ಹೆಚ್ಚಿನ ಆದ್ಯತೆ ನಿಡಲಿದ್ದೇನೆ. ಶಿಕಾರಿಪುರ ಕ್ಷೇತ್ರದಲ್ಲಿ 1300 ಕೋಟಿ ರೂಪಾಯಿ ವೆಚ್ಚದ ನೀರಾವರಿ ಯೋಜನೆ ರೂಪಿಸಿ ಟೆಂಡರ್ ಕರೆಯಲಾಗಿದೆ. ನೀರಾವರಿ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದರು.
ಶಿವಮೊಗ್ಗ ಜಿಲ್ಲೆ ಹಾಗೂ ಶಿಕಾರಿಪುರ ರಾಜ್ಯಕ್ಕೆ ಮಾದರಿಯಾಗಬೇಕು.
ನಮ್ಮ ಜಿಲ್ಲೆ ಪ್ರವಾಸೋದ್ಯಮಕ್ಕೆ ಹೆಸರುವಾಸಿ. ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಜೋಗ ಜಲಪಾತ ಅಭಿವೃದ್ಧಿಗೆ ಕ್ರಮಕೈಗೊಳ್ಳುತ್ತೇನೆ. ಅರ್ಧಕ್ಕೆ ನಿಂತಿರುವ ವಿಮಾನ ನಿಲ್ದಾಣ ಪೂರ್ಣಗೊಳಿಸುವ ಸಂಬಂಧ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ. ವಿಮಾನನಿಲ್ದಾಣ ಕಾಮಗಾರಿಗೆ ಶೀಘ್ರವೇ 50 ಕೋಟಿ ಬಿಡುಗಡೆ ಮಾಡಲಾಗುವುದು ಎಂದ ಬಿ ಎಸ್ ಯಡಿಯೂರಪ್ಪ ಕರ್ನಾಟಕ ರಾಜ್ಯವನ್ನು ಮಾದರಿ ರಾಜ್ಯವಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಕೇವಲ ಮೂರು ನಾಲ್ಕು ತಿಂಗಳಲ್ಲಿ ರಾಜ್ಯದ ಜನರು ಬದಲಾವಣೆ ನೋಡಲಿದ್ದಾರೆ ಎಂದು ವಿಶ್ವಾಸ ಮಾತುಗಳನ್ನಾಡಿದರು.