ವಿಷ ಕುಡಿದು ಸಾಯಿರಿ ಎಂದ ಮೈದುನರು; ಮನನೊಂದ ಮಹಿಳೆ ಆತ್ಮಹತ್ಯೆ
Team Udayavani, Jun 14, 2020, 2:09 PM IST
ಶಿವಮೊಗ್ಗ: ಜಮೀನಿನ ಗಲಾಟೆಯೊಂದರಲ್ಲಿ ಮಾತಿಗೆ ಮಾತು ಬೆಳೆದು ಮೈದುನರು ವಿಷ ಕುಡಿದು ಸಾಯಿರಿ ಎಂದು ಹೇಳಿದ್ದಕ್ಕೆ ಮನನೊಂದ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿಕಾರಿಪುರ ತಾಲೂಕಿನ ಕಾಗಿನೆಲ್ಲಿ ಎಂಬಲ್ಲಿ ನಡೆದಿದೆ.
ಕಾಗಿನೆಲ್ಲಿ ಗ್ರಾಮದ ಸುಶೀಲಮ್ಮ (43) ಮೃತ ಮಹಿಳೆ.ತನ್ನ ಮೈದುನರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದರಿಂದ ವಿಷ ಸೇವಿಸಿ ಅಸ್ವಸ್ಥರಾಗಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಏನಿದು ಘಟನೆ:
ಸುಶೀಲಮ್ಮ ಅವರ ಪತಿ ಚಂದ್ರಪ್ಪ ದುಡಿದು ಹತ್ತು ಎಕರೆ ಜಮೀನು ಖರೀದಿಸಿದ್ದರು. ಆದರೆ ಖರೀದಿಸಿದ ಜಮೀನನ್ನು ಚಂದ್ರಪ್ಪ ತನ್ನ ತಾಯಿ ಹೆಸರಿಗೆ ರಿಜಿಸ್ಟರ್ ಮಾಡಿದ್ದ. ಹಾಗಾಗಿ ಚಂದ್ರಪ್ಪ ಸಹೋದರರು ಚಂದ್ರಪ್ಪ ಖರೀದಿಸಿದ ಆಸ್ತಿ ಮೇಲೆ ಕಣ್ಣು ಹಾಕಿದ್ದರು ಎನ್ನಲಾಗಿದೆ.
ಇಂಜಿನಿಯರ್, ಸೈಂಟಿಸ್ಟ್ ಹಾಗೂ ಟೀಚರ್ ಆಗಿರುವ ಚಂದ್ರಪ್ಪ ಸಹೋದರರು ತಾಯಿ ಹೆಸರಲ್ಲಿ ರಿಜಿಸ್ಟರ್ ಆಗಿದ್ದ ಚಂದ್ರಪ್ಪನ ಆಸ್ತಿ ಲಪಟಾಯಿಸಲು ಸಂಚು ಹೂಡಿದ್ದರು. ಈ ಮೂವರು ತಾಯಿಯ ಮನವೊಲಿಸಿ ತಮ್ಮ ಹೆಸರಿಗೆ ಆಸ್ತಿ ರಿಜಿಸ್ಟರ್ ಮಾಡಿಸಿಕೊಳ್ಳಲು ಮುಂದಾಗಿದ್ದರು. ಇದನ್ನು ತಿಳಿದ ಚಂದ್ರಪ್ಪ ಮತ್ತು ಸಹೋದರರ ನಡುವೆ ವಾಗ್ವಾದ ಗಲಾಟೆಯೂ ನಡೆದಿತ್ತು.
ಬಳಿಕ ಗ್ರಾಮದಲ್ಲಿ ಪಂಚಾಯಿತಿ ಮಾಡಿ ಆಸ್ತಿಯನ್ನು ಎಲ್ಲರಿಗೂ ಪಾಲು ಮಾಡಲಾಗಿತ್ತು.ಇದರ ಪ್ರಕಾರ ಚಂದ್ರಪ್ಪ ಅವರಿಗೆ ಮೂರೂವರೆ ಎಕರೆ ಜಮೀನು ಬಂದಿತ್ತು.ನಿನ್ನೆ ಈ ಜಮೀನಿನಲ್ಲಿ ಟ್ರ್ಯಾಕ್ಟರ್ ನಲ್ಲಿ ಉಳುಮೆ ಮಾಡಲು ಅವರು ಚಂದ್ರಪ್ಪನ ಸಹೋದರರಾದ ಕರಿಬಸಪ್ಪ, ಧನಂಜಯಪ್ಪ ಮತ್ತು ಜಗದೀಶಪ್ಪ ಅಡ್ಡಿಪಡಿಸಿದ್ದರು. ಆಗ ಈ ಜಮೀನು ಇಲ್ಲದಿದ್ದರೆ ವಿಷ ಕುಡಿದು ಸಾಯಬೇಕಾಗುತ್ತದೆ ಎಂದು ಸುಶೀಲಮ್ಮ ಅಂಗಲಾಚಿದ್ದರು.
ಆಗ ವಿಷ ಕುಡಿದು ಸಾಯಿ ಎಂದು ಆರೋಪಿಗಳು ಹೇಳಿದ್ದರು. ಮೈದುನರ ಈ ಮಾತುಗಳಿಂದ ಸುಶೀಲಮ್ಮ ಮನನೊಂದಿದ್ದು, ಅಲ್ಲೇ ಶೆಡ್ ನಲ್ಲಿದ್ದ ಯಾವುದೋ ಒಂದು ವಿಷವನ್ನು ಸೇವಿಸಿದ್ದಾರೆ.
ಕೂಡಲೇ ಅವರನ್ನು ಶಿಕಾರಿಪುರ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆತರುವ ಮಾರ್ಗ ಮಧ್ಯೆ ಸುಶೀಲಮ್ಮ ಸಾವನ್ನಪ್ಪಿದ್ದಾರೆ.
ಈ ಸಂಬಂಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.