ಶೀಘ್ರ ಸಂಪುಟ ರಚನೆ: ಈಶ್ವರಪ್ಪ
Team Udayavani, Aug 2, 2019, 5:28 AM IST
ಶಿವಮೊಗ್ಗ: ‘ಬಿಜೆಪಿ ಅಧಿಕಾರ ಹಿಡಿದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಕ್ಕೆ ಇಡೀ ರಾಜ್ಯದ ಜನ ಸಂತಸಗೊಂಡಿದ್ದಾರೆ. ಆ. 5 ಮತ್ತು 6ರಂದು ಯಡಿಯೂರಪ್ಪ ದೆಹಲಿಗೆ ತೆರಳಿ ವರಿಷ್ಠರ ಭೇಟಿ ಮಾಡಲಿದ್ದಾರೆ.
ಬಳಿಕ ನೂತನ ಸಚಿವ ಸಂಪುಟ ರಚನೆಯಾಗಲಿದೆ. ಪಕ್ಷ ಯಾವ ಸ್ಥಾನಮಾನ ನೀಡಿದರೂ ನಿರ್ವಹಿಸುವೆ’ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ‘ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಂವಿಧಾನಕ್ಕೇ ದ್ರೋಹ ಮಾಡಿದ್ದಾರೆ. ಶಾಸಕರ ರಾಜೀನಾಮೆ ಬಗ್ಗೆ ಮೊದಲು ತೀರ್ಮಾನ ಮಾಡಿ ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಎಲ್ಲಿಯೂ ಅನರ್ಹತೆ ಬಗ್ಗೆ ಪ್ರಸ್ತಾಪಿಸಿರಲಿಲ್ಲ. ಆದರೆ ರಮೇಶ್ ಕುಮಾರ್ ಇದ್ಯಾವುದನ್ನೂ ಗಣನೆಗೆ ತೆಗೆದುಕೊಂಡಿಲ್ಲ. ಅನರ್ಹ ಶಾಸಕರ ವಿಷಯದಲ್ಲಿ ಸುಪ್ರೀಂಕೋರ್ಟ್ ಯಾವುದೇ ತೀರ್ಪು ನೀಡಿದರೂ ಅದನ್ನು ಸ್ವಾಗತಿಸುತ್ತೇನೆ. ಸಿದ್ದರಾಮಯ್ಯ ಸೇರಿ ಮತ್ತಿತರರು ರಮೇಶ್ ಕುಮಾರ್ ಅವರನ್ನು ವೈಭವೀಕರಿಸುತ್ತಿದ್ದು, ಇದು ನಾಚಿಕೆಗೇಡಿನ ಸಂಗತಿ’ ಎಂದರು. ಟಿಪ್ಪು ಜಯಂತಿ ನಡೆದರೆ ಅಮಾಯಕರು ಜೀವ ಕಳೆದುಕೊಳ್ಳಬೇಕಾಗುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಟಿಪ್ಪು ಜಯಂತಿ ರದ್ದುಗೊಳಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.